ವರ್ಗಾವಣೆಯಾದರೂ ತಣ್ಣಗಾಗಿಲ್ಲ ರೋಹಿಣಿ ಸಿಂಧೂರಿ ಮೇಲಿನ ಕೋಪ
ಮೈಸೂರು, ಜೂನ್ 7: 'ಮಳೆ ನಿಂತರೂ, ಮರದ ಹನಿ ನಿಲ್ಲಲಿಲ್ಲ' ಅನ್ನುವ ಹಾಗೆ, ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಜಟಾಪಟಿ ವರ್ಗಾವಣೆಯಲ್ಲಿ ಅಂತ್ಯಗೊಂಡರೂ, ರೋಹಿಣಿ ಸಿಂಧೂರಿ ಮೇಲಿನ ಕೋಪ ಮಾತ್ರ ತಣ್ಣಗಾಗಲಿಲ್ಲ.
Recommended Video
ಮೈಸೂರಿನಲ್ಲಿ ನಡೆದ ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ತಿಕ್ಕಾಟ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಈ ಎಲ್ಲಾ ಪ್ರಹಸನದ ನಡುವೆಯೇ ಮಧ್ಯಪ್ರವೇಶಿಸಿದ ರಾಜ್ಯ ಸರ್ಕಾರ, ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು. ಆದರೆ ರೋಹಿಣಿ ಸಿಂಧೂರಿ ವರ್ಗಾವಣೆಯಾದ ಬೆನ್ನಲ್ಲೇ, ಹೊರಬರುತ್ತಿರುವ ಒಂದೊಂದೆ ಆಡಿಯೋ ಕ್ಲಿಪ್ಗಳು, ಇದೀಗ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಆಡಿಯೋ ಕ್ಲಿಪ್ ಬಿಡುಗಡೆ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಹಿಂದೆ ಸಾಕಷ್ಟು ಷಡ್ಯಂತ್ರ ನಡೆದಿರುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಎಲ್ಲಾ ಬೆಳವಣಿಗೆ ನಡುವೆಯೇ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆದೇಶ ಹೊರಬಿತ್ತು. ಇದರ ಬೆನ್ನಲ್ಲೇ, ಬಿಜೆಪಿ ಮುಖಂಡರೊಬ್ಬರು, ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆ ವಿಚಾರವಾಗಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಯೊಬ್ಬರ ಜೊತೆಗೆ ಮಾತನಾಡಿದ್ದ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದರು. ಇದಾದ ಕೆಲವೇ ಹೊತ್ತಿನ ಬಳಿಕ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಂಭಾಷಣೆಯ ಆಡಿಯೋ ಕ್ಲಿಪ್ ಸಹ ಬಿಡುಗಡೆಯಾಗಿತ್ತು.
ಪಾರಂಪರಿಕ ಕಟ್ಟಡಕ್ಕೆ ಧಕ್ಕೆ
ಇದರ ನಡುವೆ ಫೇಸ್ಬುಕ್ ಲೈವ್ ಮಾಡಿದ ಸಂಸದ ಪ್ರತಾಪ್ ಸಿಂಹ ಸಹ ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್ ಕೊರತೆ ದುರಂತದ ಹಿಂದೆಯೇ ಹೆಸರು ಪ್ರಸ್ತಾಪಿಸದೆ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆ ಮೂಲಕವೂ ನಿರ್ಗಮಿತ ಜಿಲ್ಲಾಧಿಕಾರಿಗೆ ಟಾಂಗ್ ನೀಡುವ ಪ್ರಯತ್ನ ಮಾಡಿದ್ದರು.
ಇದರ ನಡುವೆ ರೋಹಿಣಿ ಸಿಂಧೂರಿ ವಿರುದ್ಧ ಸಮರ ಮುಂದುವರಿಸಿರುವ ಜೆಡಿಎಸ್ ಶಾಸಕ ಸಾ.ರಾ ಮಹೇಶ್, ""ಸ್ವಹಿತಾಸಕ್ತಿ, ಸರ್ಕಾರಿ ಹಣ ದುರುಪಯೋಗ, ಸಾರ್ವಜನಿಕ ಹಣದ ವೆಚ್ಚದ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದಿರುವುದು, ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಉಂಟು ಮಾಡಿರುವುದು ಮುಂತಾದ ಲೋಪಗಳನ್ನು ಹಿಂದಿನ ಜಿಲ್ಲಾಧಿಕಾರಿಗಳು ಎಸಗಿರುತ್ತಾರೆ. ಹಾಗಾಗಿ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಕೂಡಲೇ ಅಮಾನತು ಮಾಡಬೇಕೆಂದು'' ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಪತ್ರ
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರಾಜ್ಯಪಾಲರು, ಕಂದಾಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪುರಾತತ್ವ ಇಲಾಖೆ ಕಾರ್ಯದರ್ಶಿ, ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಿಗೆ ದಾಖಲೆ ಸಮೇತ ಎರಡು ಪುಟಗಳ ಪತ್ರ ಬರೆದಿದ್ದಾರೆ.
ಸಂಪೂರ್ಣ ಲಾಕ್ಡೌನ್ ಆದೇಶ ವಾಪಸ್
ಈ ಮಧ್ಯೆ ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಸಹ ರೋಹಿಣಿ ಸಿಂಧೂರಿಗೆ ಸೆಡ್ಡು ಹೊಡೆದಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಅವರು ಹೊರಡಿಸಿದ್ದ ಸಂಪೂರ್ಣ ಲಾಕ್ಡೌನ್ ಆದೇಶವನ್ನು ಇದೀಗ ಹಿಂಪಡೆದಿದ್ದಾರೆ. ಆ ಮೂಲಕ ಮೈಸೂರಿನಲ್ಲಿ ಲಾಕ್ಡೌನ್ ಮತ್ತಷ್ಟು ಸಡಿಲಿಕೆಯಾಗಿದ್ದು, ನಾಳೆಯಿಂದ ಜೂ.14ರವರೆಗೆ ಪ್ರತಿದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶ ಹಿಂಪಡೆಯುವ ಮೂಲಕ ಹೊಸ ಜಿಲ್ಲಾಧಿಕಾರಿ ಬಗಾದಿ ಗೌತಮ್ ಸಹ ಸೆಡ್ಡು ಹೊಡೆದಿದ್ದಾರೆ.
ಒಟ್ಟಾರೆ, ರೋಹಿಣಿ ಸಿಂಧೂರಿ ವಿರುದ್ಧದ ಮುಸುಕಿನ ಗುದ್ದಾಟ ಸದ್ದಿಲ್ಲದೆ ಮುಂದುವರಿದಿದ್ದು, ಈ ಎಲ್ಲಾ ಜಟಾಪಟಿ ಎಲ್ಲಿಗೆ ಬಂದು ನಿಲ್ಲುತ್ತದೆ ಅನ್ನೋದೆ ಯಕ್ಷಪ್ರಶ್ನೆಯಾಗಿದೆ.