ಅಂಬಾರಿ ಹೊರುವ ಅರ್ಜುನ ಆನೆಯ ಮಾವುತ, ಕಾವಾಡಿ ಆಯ್ಕೆಯಲ್ಲೂ ರಾಜಕೀಯ
ಮೈಸೂರು, ಸೆಪ್ಟೆಂಬರ್ 4: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಜಂಬೂಸವಾರಿಯ ಪ್ರಮುಖ ಆಕರ್ಷಣೆ ಅರ್ಜುನ ಆನೆ. ಆದರೆ ಈ ಆನೆಯ ಕಾವಾಡಿ ಆಯ್ಕೆಯಲ್ಲಿಯೂ ಪ್ರತಿ ವರ್ಷ ರಾಜಕೀಯದಾಟ ನಡೆಯುತ್ತಿದೆ.
ನಾಡಹಬ್ಬದ ಮೆರುಗಿಗೆ ಈ ಬಾರಿ 70 ರಸ್ತೆ, 40ವೃತ್ತಗಳಲ್ಲಿ ಥರಾವರಿ ದೀಪಾಲಂಕಾರ
ಈ ವರ್ಷ ದೊಡ್ಡಮಾಸ್ತಿ ಪುತ್ರ ಸಣ್ಣಪ್ಪ ಬದಲು ಕಾಕನಕೋಟೆ ಆನೆ ಶಿಬಿರದ ಮಧು ಅವರನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಎಂಬ ಆನೆಯ ಕಾವಾಡಿಯಾಗಿ ಮಧು ಜವಾಬ್ದಾರಿ ನಿಭಾಯಿಸುತ್ತಿದ್ದರು. ಆದರೆ ದಸರೆ ವೇಳೆಯಲ್ಲಿ ಸಣ್ಣಪ್ಪ ಅವರಿಗೆ ಅರ್ಜುನ ಆನೆಯ ಬದಲಾಗಿ ಕುಮಾರಸ್ವಾಮಿ ಆನೆಯ ಜವಾಬ್ದಾರಿ ನೀಡಲಾಗಿದೆ. ಹಲವಾರು ವರ್ಷಗಳಿಂದ ಅರ್ಜುನ ಆನೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಸಣ್ಣಪ್ಪ ಅವರನ್ನು ಕೈಬಿಟ್ಟಿರುವುದಕ್ಕೆ ಆದಿವಾಸಿ ಸಮುದಾಯದ ಕೆಲ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.
ಈ ಹಿಂದೆ ಜಂಬೂಸವಾರಿಯಲ್ಲಿ ಅರ್ಜುನ ಆನೆಯನ್ನು ಸಣ್ಣಪ್ಪ ಮುನ್ನಡೆಸಿದ್ದರು. ಅವರಿಗೆ ಈ ಆನೆ ಚೆನ್ನಾಗಿ ಹೊಂದಿಕೊಂಡಿತ್ತು. ಈಗ ಕಾವಾಡಿ ಸ್ಥಾನ ಬದಲಾಗಿದೆ. ಇದರಲ್ಲಿ ಯಾರ ಕೈವಾಡವಿದೆ ಎಂಬುದು ಗೊತ್ತಾಗಬೇಕಿದೆ ಎನ್ನುತ್ತಾರೆ ಸಮುದಾಯದ ಮುಖಂಡರು.
2016ರಲ್ಲಿ ಗಜಪಯಣ ಆರಂಭಕ್ಕೆ 13 ದಿನ ಮುನ್ನವೇ ಅರ್ಜುನನ ಮಾವುತರಾಗಿದ್ದ ದೊಡ್ಡಮಾಸ್ತಿ ನಿಧನರಾಗಿದ್ದರು. ಇದರಿಂದ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಚಿಂತೆಗೀಡಾಗಿದ್ದ ವೇಳೆ ದೊಡ್ಡಮಾಸ್ತಿಯ ಮಗ ಸಣ್ಣಪ್ಪ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಭಯ ನೀಡಿ ದಸರಾ ಮಹೋತ್ಸವದಲ್ಲಿ ಅರ್ಜುನನನ್ನು ಯಶಸ್ವಿಯಾಗಿ ಮುನ್ನಡೆಸುವ ವಾಗ್ದಾನ ನೀಡಿದ್ದರು. ಅದರಂತೆ ನಡೆದುಕೊಂಡು ಎಲ್ಲರಿಂದ ಪ್ರಶಂಸೆ ಪಡೆದಿದ್ದರು.
ಅಂಬಾರಿ ಹೊತ್ತ ಈ ಆನೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರ ಪರಿಣಾಮ ಕಾವಾಡಿಯಾಗಿ ಮೂರು ವರ್ಷಗಳ ಹಿಂದೆ ಅವರಿಗೆ ಬಡ್ತಿ ಸಹ ಸಿಕ್ಕಿತ್ತು. ಇದಾದ ಬಳಿಕ 2017ರಲ್ಲಿ ಬಳ್ಳೆ ಆನೆ ಶಿಬಿರದಲ್ಲಿದ್ದ ರುಕ್ಮಿಣಿ ಎಂಬ ಹೆಣ್ಣಾನೆ ಅಕಾಲಿಕ ಮರಣಕ್ಕೀಡಾಗಿದ್ದ ಹಿನ್ನೆಲೆಯಲ್ಲಿ ಅದರ ಮಾವುತರಾಗಿದ್ದ ವಿನು ಅವರನ್ನು ಅರ್ಜುನ ಆನೆಯ ಮಾವುತನನ್ನಾಗಿ ಅರಣ್ಯ ಇಲಾಖೆ ನಿಯೋಜಿಸಿತು. ಆಗ ವಿನೂಗೆ ಅವಕಾಶ ಒಲಿದಿತ್ತು. ಆಗಲೂ ಈ ರೀತಿ ಗೊಂದಲ ಉಂಟಾಗಿತ್ತು.
ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆಗೆ ಈ ಬಾರಿ ಮೈಸೂರಲ್ಲಿ ಭರ್ಜರಿ ತಯಾರಿ
1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಸೆರೆ ಹಿಡಿಯಲಾಗಿದ್ದ ಅರ್ಜುನನು ಬಳ್ಳೆ ಶಿಬಿರದಲ್ಲಿ ಆಶ್ರಯ ಪಡೆದಿದ್ದಾನೆ. ಎಂಟನೇ ಬಾರಿ ಅಂಬಾರಿ ಹೊರಲು ಸಜ್ಜಾಗಿದ್ದಾನೆ. ಈ ವೇಳೆಯಲ್ಲಿ ಏಕಾಏಕಿ ಬದಲಾವಣೆಗಳು ಜಂಬೂಸವಾರಿ ಮೇಲೆ ಪರಿಣಾಮ ಬೀರದಿರಲಿ ಎಂಬುದು ಸಾರ್ವಜನಿಕರ ಆಶಯ.