ಎಚ್ ವಿಶ್ವನಾಥ್ಗೆ ಕೈ ಕೊಟ್ಟರಾ ರಮೇಶ ಜಾರಕಿಹೊಳಿ?
ಮೈಸೂರು, ಮೇ 25: ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಕಾಂಗ್ರೆಸ್, ಜೆಡಿಎಸ್ನ ಕೆಲ ಬಂಡಾಯ ಶಾಸಕರು ಬಿಜೆಪಿ ಸೇರಿ ಸಚಿವರಾದರು.
ಆದರೆ, ಹಿರಿಯ ರಾಜಕಾರಣಿ ಎಚ್ ವಿಶ್ವನಾಥ್ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಯಾವುದೇ ಹುದ್ದೆ ಸಿಗದೇ ಸದ್ಯ ಮನೆಯಲ್ಲಿದ್ದಾರೆ. 'ವಿಶ್ವನಾಥ್ ಅವರಿಗೆ ಅನ್ಯಾಯ ಆಗುವುದಿಲ್ಲ' ಎಂದು ಹೇಳುತ್ತಾ ಬಂದಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಈಗ ಉಲ್ಟಾ ಹೊಡೆದಿದ್ದಾರೆ.
ಸುತ್ತೂರು ಮಠಕ್ಕೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ
ಈ ವಿಚಾರವಾಗಿ ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಎಚ್. ವಿಶ್ವನಾಥ್ ಗೆ ಎಂ.ಎಲ್.ಸಿ ಸ್ಥಾನ ನೀಡುವ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ' ಎಂದು ಹೇಳಿದ್ದಾರೆ.
ಮುಂದಿನ ತಿಂಗಳು ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಚುನಾವಣೆ ನಡೆಯಲಿದೆ. ನಾಲ್ಕು ಸ್ಥಾನಗಳು ಬಿಜೆಪಿ ಬಳಿ ಇವೆ. ಇದರಲ್ಲಿ ಎಚ್ ವಿಶ್ವನಾಥ್ ಅವರನ್ನು ವಿಧಾನಸಭೆಗೆ ಕಳುಹಿಸಿ ಸಚಿವರನ್ನಾಗಿ ಮಾಡಲಾಗುತ್ತದೆ ಎಂದು ಈ ಮೊದಲು ಜಾರಕಿಹೊಳಿ ಹೇಳುತ್ತಾ ಬಂದಿದ್ದರು. ಆದರೆ, ಈಗ 'ಈ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಯಾರಿಗೆ MLC ಸ್ಥಾನ ಕೊಡಬೇಕು ಎಂಬುದನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ' ಎಂದು ರಮೇಶ ಹೇಳಿದ್ದಾರೆ.