ಶೋಕಿ ಜೀವನಕ್ಕಾಗಿ ಸುಲಿಗೆ, ಕಳ್ಳತನಕ್ಕಿಳಿದ ಯುವಕರು: ಪೊಲೀಸರಿಂದ ಎಚ್ಚರಿಕೆ
ಮೈಸೂರು, ಸೆಪ್ಟೆಂಬರ್ 22: ಕೋವಿಡ್-19 ನಿಂದ ಹಲವಾರು ಜನ ಕೆಲಸವನ್ನು ಕಳೆದುಕೊಂಡು ಹಳ್ಳಿಗಳಲ್ಲಿ ಬಂದು ಸೇರಿಕೊಂಡಿರುತ್ತಾರೆ. ಈ ಕಾರಣದಿಂದ ಆದಾಯವಿಲ್ಲದೆ ಹಲವು ಯುವಕರು ತಮ್ಮ ಶೋಕಿ ಜೀವನಕ್ಕಾಗಿ ಕುಡಿತಕ್ಕಾಗಿ, ಕೊಲೆ-ಸುಲಿಗೆ, ಕಳ್ಳತನಕ್ಕೆ ಇಳಿದಿದ್ದಾರೆ ಎಂದು ಮೈಸೂರು ಪೊಲೀಸರು ಎಚ್ಚರಿಸಿದ್ದಾರೆ.
ಕೆಲಸ ಕಳೆದುಕೊಂಡಿರುವ ಯುವಕರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಂಡು ಬರುತ್ತಿವೆ. ಈ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಜಾಗೃತೆಯಲ್ಲಿರುವಂತೆ ತಿ.ನರಸೀಪುರ ಠಾಣೆಯ ಪೊಲೀಸರು ವಿನಂತಿಸಿದ್ದಾರೆ.
ಲಾಕ್ ಡೌನ್ ತೆರವಿನ ಬಳಿಕ ಪ್ರಥಮ ಬಾರಿಗೆ ಮೈಸೂರಿನಲ್ಲಿ ಕರಕುಶಲ ಮೇಳ
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ""ಮನೆಯಲ್ಲಿ ಇರುವ ಎಲ್ಲಾ ಚಿನ್ನದ ಒಡವೆ ಮತ್ತು ಹಣವನ್ನು ಬ್ಯಾಂಕಿನಲ್ಲಿ ಒಂದು ವರ್ಷದ ಮಟ್ಟಿಗಾದರೂ ಇಡಲು ಸಲಹೆ ನೀಡಿದ್ದಾರೆ. ಒಂದು ವರ್ಷದ ಮಟ್ಟಿಗೆ ಯಾವುದೇ ಸಮಾರಂಭಗಳಿಗೆ ಚಿನ್ನದ ಒಡವೆಗಳನ್ನು ಹಾಕಿಕೊಂಡು ಹೋಗಬೇಡಿ, ಜಾಗೃತೆ ವಹಿಸಿ'' ಎಂದು ಮನವಿ ಮಾಡಿಕೊಂಡಿದ್ದಾರೆ.
ಮನೆಗೆ ಉತ್ತಮವಾದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿ
ತಮ್ಮ ಮನೆಗೆ ಉತ್ತಮವಾದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿ, ಸಾಧ್ಯವಾದರೆ ಒಂದು ನಾಯಿಯನ್ನು ಸಾಕುವುದು ಒಳ್ಳೆಯದು. ಒಂದು ವರ್ಷದ ಮಟ್ಟಿಗೆ ಅನಗತ್ಯವಾಗಿ ಮನೆ ಬಿಟ್ಟು ಹೋಗಬೇಡಿ. ಯಾರೇ ಅಪರಿಚಿತರು ಮನೆ ಹತ್ತಿರ ಬಂದರೂ ಅವರೊಂದಿಗೆ ಯಾವುದೇ ವ್ಯಾಪಾರ, ವ್ಯವಹಾರವನ್ನು ಮಾಡಬೇಡಿ ಎಂದಿದ್ದಾರೆ.
ಬ್ಯಾಂಕ್ ಮೂಲಕವೇ ವ್ಯವಹಾರ ಮಾಡಿ
ತಮ್ಮ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ, ಕಂಡ ಕಂಡಲ್ಲಿ ವಾಹನ ನಿಲ್ಲಿಸಬೇಡಿ. ಕಳ್ಳತನ ಆಗುವ ಸಾಧ್ಯತೆ ಇರುತ್ತದೆ. ಬ್ಯಾಂಕುಗಳಿಂದ ಯಾವುದೇ ನಗದು ಹಣ ಡ್ರಾ ಮಾಡಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗುವ ಸಾಹಸ ಮಾಡಬೇಡಿ ಎಲ್ಲವೂ ಬ್ಯಾಂಕ್ ಮೂಲಕವೇ ಮಾಡಿ ಎಂದು ಪೊಲೀಸರು ತಿಳಿಸಿದ್ದಾರೆ.
ಪಿನ್ ನಂಬರ್ ಯಾರಿಗೂ ಹೇಳಬೇಡಿ
""ಹೆಂಗಸರು, ಮಕ್ಕಳು ಹಾಗೂ ವಯಸ್ಸಾದವರು ಸಾಧ್ಯವಾದಷ್ಟು ಬೇಗ ಮನೆ ಸೇರಿಕೊಳ್ಳಿ. ಒಬ್ಬೊಬ್ಬರೇ ಎಲ್ಲೂ ಹೋಗಬೇಡಿ. ವಾಕಿಂಗ್ ಹೋಗುವ ಎಲ್ಲರೂ ಯಾವುದೇ ಚಿನ್ನದ ಒಡವೆಯನ್ನು ಧರಿಸಬೇಡಿ. ನಿಮ್ಮ ಎಟಿಎಂ ಕಾರ್ಡ್ ನಿಂದ ಹಣ ತೆಗೆಯಲು ಯಾರಿಗೂ ಕೊಡಬೇಡಿ. ಪಿನ್ ನಂಬರ್ ಯಾರಿಗೂ ಹೇಳಬೇಡಿ.''
Recommended Video
ಅಪರಾಧವನ್ನು ತಡೆಗಟ್ಟಲು ಸಹಕರಿಸಿ
""ನಿಮ್ಮ ಮೊಬೈಲ್ ಗೆ ದೂರವಾಣಿ ಕರೆ ಮಾಡಿ, ನಿಮ್ಮ ಎಟಿಎಂ ಪಿನ್, ಅಕೌಂಟ್ ನಂಬರ್, ಆಧಾರ್ ನಂಬರ್, ಎಲ್ಲವನ್ನು ಕೇಳುತ್ತಾರೆ. ಯಾವುದನ್ನು ಕೊಡಬೇಡಿ. ಹಳ್ಳಿಗಳಲ್ಲಿರುವ ಜನರು ತಾವು ಸಾಕಿರುವ ಹಸು, ಕುರಿ, ಕೋಳಿ ಹಾಗೂ ನಾಯಿಗಳನ್ನು ಸುರಕ್ಷಿತವಾಗಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ನೋಡಿಕೊಳ್ಳಿ. ಇವುಗಳನ್ನು ಕಡ್ಡಾಯವಾಗಿ ಪಾಲಿಸಿ ಅಪರಾಧವನ್ನು ತಡೆಗಟ್ಟಲು ಸಹಕರಿಸಿ'' ಎಂದು ತಿ.ನರಸೀಪುರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಂಜು ಎಚ್.ಡಿ ಮನವಿ ಮಾಡಿದ್ದಾರೆ.