ಬೆಟ್ಟದಪುರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಮಾನತು
ಮೈಸೂರು, ಮೇ 6: ಶಿಸ್ತಿನ ಇಲಾಖೆ ಎಂದೇ ಪರಿಗಣಿತವಾಗಿರುವ ಪೊಲೀಸ್ ಇಲಾಖೆ ದುಷ್ಟರ ಶಿಕ್ಷಕ, ಶಿಷ್ಟರ ರಕ್ಷಕನ ಕಾರ್ಯವನ್ನು ನಿರ್ವಹಿಸಬೇಕಿದೆ. ಆದರೆ ಇದಕ್ಕೆ ಅಪವಾದವೆಂಬಂತೆ ಅಲ್ಲೊಂದು ಇಲ್ಲೊಂದು ಪೊಲೀಸ್ ಇಲಾಖೆ ತಲೆ ತಗ್ಗಿಸುವ, ಮುಜುಗರ ಪಡುವ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆಗಳಿಂದ ಇಲಾಖೆಯ ಘನತೆ, ಗೌರವಕ್ಕೆ ಕುಂದು ಉಂಟಾಗುತ್ತಿದೆ.
Recommended Video
ಖಾಕಿ ಗೌರವಕ್ಕೆ ಕುಂದು ಉಂಟಾಗುವ ಘಟನೆಯೊಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ತಡವಾಗಿ ವರದಿ ಆಗಿದೆ.
ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್ಐ ಲೋಕೇಶ್ ಅವರು ರೌಡಿಯೊಂದಿಗೆ ಮದ್ಯ ಸೇವಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಣ್ಣಯ್ಯ ಎಂಬುವವರು ಹುಣಸೂರು ಡಿವೈಎಸ್ಪಿ, ಎಸ್ಪಿ, ಹಾಗೂ ಐಜಿಪಿ ಅವರಿಗೆ ದೂರು ನೀಡಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಪಿ.ಲೋಕೇಶ್ ಅವರು ಏಪ್ರಿಲ್ 17, 2020 ರಂದು ಸಂಜೆ 8 ಗಂಟೆಯಿಂದ ತಡರಾತ್ರಿ 2 ಗಂಟೆಯವರೆಗೆ ರೌಡಿ ಶೀಟರ್ ಬಿ.ಬಿ ದಿನೇಶ್ ಎಂಬಾತನ ಜೊತೆಯಲ್ಲಿ ಮದ್ಯಪಾನ ಮಾಡಿ ಇತರರೊಂದಿಗೆ ತಬ್ಬಿಕೊಂಡಿರುವ ಪೋಟೋವನ್ನು ತೆಗೆಸಿಕೊಂಡಿರುತ್ತಾರೆ.
ಶಿಸ್ತಿನ ಇಲಾಖೆಯಾದ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತಂದು ಇಲಾಖೆ ನಿಯಮಕ್ಕೆ ವಿರುದ್ಧವಾಗಿ ರೌಡಿಗಳೊಂದಿಗೆ ಶಾಮೀಲಾಗಿರುವುದು ಕಂಡು ಬಂದಿದೆ. ಈ ಕುರಿತು ಸಮಗ್ರ ತನಿಖೆ ಮಾಡಿ ಇಲಾಖೆಯ ಗೌರವವನ್ನು ಎತ್ತಿ ಹಿಡಿದು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಡಿವೈಎಸ್ಪಿ ಸುಂದರ್ ರಾಜ್ ಅವರನ್ನು "ಒನ್ಇಂಡಿಯಾ ಕನ್ನಡ' ಸಂಪರ್ಕಿಸಿದಾಗ, ಮದ್ಯಪಾನ ಮಾಡಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ ಎಂದರು.
ಎಸ್ಪಿ ಸಿ.ಬಿ ರಿಶ್ವಂತ್ ಅವರನ್ನು ಸಂಪರ್ಕಿಸಿದಾಗ, ಸಬ್ ಇನ್ಸ್ಪೆಕ್ಟರ್ ಅವರನ್ನು ಈಗಾಗಲೇ ಅಮಾನತು ಮಾಡಿರುವುದಾಗಿ ತಿಳಿಸಿದರು.