ಮೈಸೂರಿನಲ್ಲಿ ಅಕ್ರಮ ಕುದುರೆ ರೇಸ್ ಬೆಟ್ಟಿಂಗ್: ಎಂಟು ಮಂದಿ ವಶಕ್ಕೆ
ಮೈಸೂರು, ಮಾರ್ಚ್ 9: ನಗರದ ರೇಸ್ ಕೋರ್ಸ್ ನಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಸರ್ಕಾರದ ನಿಯಮಾನುಸಾರ ಇರುವ ಜೂಜಾಟದ ಹೊರತಾಗಿ ಪ್ರತ್ಯೇಕವಾಗಿ ಬೆಟ್ಟಿಂಗ್ ಕಟ್ಟಿಕೊಂಡು ಕುದುರೆ ಜೂಜಾಟದಲ್ಲಿ ತೊಡಗಿದ್ದ ಎಂಟು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಗ್ರಹಾರದ ವಿಶ್ವನಾಥ್, ಬಸವೇಶ್ವರ ರಸ್ತೆಯ ಹರೀಶ್, ಮಂಗಳೂರಿನ ಅಮೀನ್, ಕೆಬಿಎಲ್ ಲೇಔಟ್ನ ಸುನಿಲ್ಕುಮಾರ್, ಕೋಲಾರದ ಸಿ.ಎನ್.ಪ್ರಕಾಶ, ಮಂಡಿಮೊಹಲ್ಲಾದ ಶ್ರೀನಿವಾಸ್, ಆಲನಹಳ್ಳಿಯ ಶಶಿಕುಮಾರ್, ಮೇಟಗಳ್ಳಿಯ ಶಂಕರ್ ಬಂಧಿತರಾಗಿದ್ದಾರೆ.
ನಗರದ ರೇಸ್ ಕೋರ್ಸ್ ನಲ್ಲಿ ಅಧಿಕೃತ ರೇಸ್ ಅಲ್ಲದೆ ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ-ಪೊಲೀಸ್ ಅಯುಕ್ತ ಡಾ. ಎ.ಎನ್.ಪ್ರಕಾಶ್ಗೌಡ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದು, ಈ ವೇಳೆ ಅಕ್ರಮವಾಗಿ ಕುದುರೆ ರೇಸ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಎಂಟು ಮಂದಿ ಸಿಕ್ಕಿ ಬಿದ್ದಿದ್ದಾರೆ. ಬೆಟ್ಟಿಂಗ್ ದಂಧೆಗೆ ಹೂಡಿದ್ದ ಒಟ್ಟು 2,32,910 ರೂ.ಗಳು ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.