ಮೈಸೂರಿನಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭಕ್ಕೆ ಪೊಲೀಸರ ದಾಳಿ; ಆಯೋಜಕ ಪರಾರಿ
ಮೈಸೂರು, ಸೆಪ್ಟೆಂಬರ್ 26: ನಗರದಲ್ಲಿ ನಕಲಿ ವಿಶ್ವವಿದ್ಯಾಲಯದ ಹೆಸರಿನಲ್ಲಿ ಡಾಕ್ಟರೇಟ್ ಪದವಿ ಪ್ರದಾನ ದಂಧೆ ನಡೆಯುತ್ತಿದೆ ಎಂಬ ಆರೋಪದ ಮೇರೆಗೆ ಇಂದು ಹುಣಸೂರು ರಸ್ತೆಯ ಹೋಟೆಲ್ ವೊಂದರಲ್ಲಿ ನಡೆಯುತ್ತಿದ್ದ ಪದವಿ ಪ್ರದಾನ ಕಾರ್ಯಕ್ರಮದ ವೇಳೆ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಕಾರ್ಯಕ್ರಮದ ಆಯೋಜಕರು ಪರಾರಿಯಾಗಿದ್ದಾರೆ. ಇನ್ನಿತರ ಮೂರಕ್ಕೂ ಹೆಚ್ಚು ಆಯೋಜಕರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಮುಖ್ಯ ಅತಿಥಿಯಾಗಿ ನಕಲಿ ಕಾರ್ಯಕ್ರಮದಲ್ಲಿ ಹರಿಹರ ಶಾಸಕ ರಾಮಪ್ಪ ಭಾಗಿಯಾಗಿದ್ದರು. ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹೆಸರಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮ ನಡೆಯುತ್ತಿತ್ತು...
ದೆಹಲಿ ವಿವಿ ವಿದ್ಯಾರ್ಥಿ ಅಧ್ಯಕ್ಷನ ಸಂಘಟನೆಯಿಂದ ವಜಾ ಮಾಡಿದ ಎಬಿವಿಪಿ
150ಕ್ಕೂ ಹೆಚ್ಚು ಜನರಿಂದ ಹಣ
ಈ ಡಾಕ್ಟರೇಟ್ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಡಾಕ್ಟರೇಟ್ ಪದವಿ ನೀಡಲು ಕಾರ್ಯಕ್ರಮ ಆಯೋಜಕರು ಮುಂದಾಗಿದ್ದರು ಎನ್ನಲಾಗಿದೆ. ನಕಲಿ ಗೌರವ ಡಾಕ್ಟರೇಟ್ ಪದವಿ ನೀಡುತ್ತಿರುವ ಕುರಿತು ಹಲವಾರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಕ್ರಮ ಕೈಗೊಳ್ಳುವಂತೆ ಈ ಹಿಂದೆ ಸರ್ಕಾರವನ್ನು ಒತ್ತಾಯಿಸಿದ್ದರು.
ನೋಟೀಸ್ ನೀಡುವಂತೆ ಆದೇಶಿಸಿದ್ದ ಕೋರ್ಟ್
ಇಷ್ಟೇ ಅಲ್ಲದೆ ಹಣ ಪಡೆದು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಆರೋಪಿಸಿ ಮದ್ದೂರಿನ ಸಿ.ಎಸ್.ಸುರೇಶ್ ಎಂಬುವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾವೆ ದಾಖಲಿಸಿದ್ದರು. ಈ ಕುರಿತು ಕೇಂದ್ರಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಾಗೂ ವಿವಿ ಅನುದಾನ ಆಯೋಗಕ್ಕೆ ನೋಟೀಸ್ ನೀಡುವಂತೆ ಕೋರ್ಟ್ ಆದೇಶಿಸಿತ್ತು.
ಬೆಂಗಳೂರಿನಲ್ಲೂ ಇಂಥದ್ದೇ ಕಾರ್ಯಕ್ರಮ ನಡೆದಿತ್ತು
ಕಳೆದ ವಾರ ಮದರ್ ಥೆರೇಸಾ ಹೆಸರಿನ ಯೂನಿವರ್ಸಿಟಿಯೊಂದು ಬೆಂಗಳೂರಿನಲ್ಲಿ ಇದೇ ರೀತಿಯ ಕಾರ್ಯಕ್ರಮ ಆಯೋಜಿಸಿ ನೂರಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡಿತ್ತು. ಇಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳಿಂದ ಡಾಕ್ಟರೇಟ್ ಪದವಿ ಆಕಾಂಕ್ಷಿಗಳು ಬಂದಿದ್ದು, ಪ್ರತಿಯೊಬ್ಬರಿಂದ 50 ಸಾವಿರದಿಂದ 1 ಲಕ್ಷ ರೂ.ಪಡೆದು ಪದವಿ ನೀಡಲಾಗುತ್ತಿತ್ತು.
Recommended Video
ಪ್ರಶಸ್ತಿ ಪತ್ರ, ಫಲಕಗಳು ಪೊಲೀಸರ ವಶಕ್ಕೆ
ಇಂದು ಸೇರಿದ್ದ ಡಾಕ್ಟರೇಟ್ ಪದವಿ ಆಕಾಂಕ್ಷಿಗಳಲ್ಲಿ ರಾಜಕಾರಣಿಗಳು, ಪತ್ರಕರ್ತರು, ಸಮಾಜ ಸೇವಕರು, ಮಠಾಧೀಶರುಗಳೂ ಇದ್ದರು. ಹಣ ಪಡೆದು ಗೌರವ ಡಾಕ್ಟರೇಟ್ ನೀಡುವ ಪದವಿ ಪ್ರದಾನ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮದ ಪ್ರಶಸ್ತಿ ಪತ್ರ, ಫಲಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ,