ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ಪೊಲೀಸ್ ವಿಚಾರಣೆ ಮುಕ್ತಾಯ: ಸಂದೇಶ್ ಹೇಳಿದ್ದೇನು?
ಮೈಸೂರು, ಜುಲೈ 16: ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಆರೋಪದ ವಿಚಾರವಾಗಿ ಪೊಲೀಸ್ ವಿಚಾರಣೆ ಮುಕ್ತಾಯವಾಗಿದೆ.
ಪೊಲೀಸ್ ವಿಚಾರಣೆ ಬಳಿಕ ಹೋಟೆಲ್ ಮಾಲೀಕ ಸಂದೇಶ್ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದು, "ಘಟನೆ ನಡೆದು ಹಲವು ದಿನಗಳ ನಂತರ ಯಾಕೆ ಈ ವಿಚಾರ ಸುದ್ದಿಯಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಅಂದು ನಮ್ಮ ಸಿಬ್ಬಂದಿ ಮೇಲೆ ನಟ ದರ್ಶನ್ ಗರಂ ಆಗಿದ್ದು ನಿಜ, ಆದರೆ ಯಾರ ಮೇಲೂ ಹಲ್ಲೆ ಮಾಡಿಲ್ಲ,'' ಎಂದು ತಿಳಿಸಿದರು.
"ಈ ಸಂಬಂಧ ಶುಕ್ರವಾರ ಬೆಳಿಗ್ಗೆ ಪೊಲೀಸ್ ನೋಟಿಸ್ ಬಂದಿತ್ತು, ಇದೀಗ ವಿಚಾರಣೆ ಕೂಡ ಮುಗಿದಿದೆ. ಹೋಟೆಲ್ನಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಕೊಂಡೊಯ್ದಿದ್ದಾರೆ. 10 ದಿನಗಳ ವರೆಗಿನ ಸಿಸಿಟಿವಿ ಫುಟೇಜ್ ಮಾತ್ರ ಇಲ್ಲಿ ದಾಖಲಾಗಿರುತ್ತದೆ. ಪೊಲೀಸರು ಅವರಿಗೆ ಅಗತ್ಯವಿರುವ ವಿಡಿಯೋಗಳನ್ನು ಕೊಂಡೊಯ್ದಿದ್ದಾರೆ." ಎಂದು ಹೇಳಿದರು.
"ಪ್ರತಿ 10 ದಿನಗಳಿಗೊಮ್ಮೆ ಸಿಸಿಟಿವಿ ಫುಟೇಜ್ ಎರೈಸ್ ಆಗುತ್ತದೆ, ಘಟನೆ ನಡೆದ ದಿನದ ವಿಡಿಯೋ ಎರೈಸ್ ಆಗಿದೆ. ಇಂದ್ರಜಿತ್ ಲಂಕೇಶ್ ಯಾಕೆ ಈ ರೀತಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ. ಈ ಘಟನೆಯಿಂದ ನನ್ನ ಹೋಟೆಲ್ ಬ್ಯುಸಿನೆಸ್ಗೆ ತೊಂದರೆಯಾಗುತ್ತಿದೆ. ದಯಮಾಡಿ ಈ ವಿಚಾರವನ್ನು ಇಲ್ಲಿಗೆ ಬಿಡುವುದು ಒಳ್ಳೆಯದು," ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
"ನನಗೆ ಇಬ್ಬರೂ ಒಳ್ಳೆಯ ಸ್ನೇಹಿತರೇ, ಅವರವರ ವೈಯಕ್ತಿಕ ವಿಚಾರ ಇದ್ದರೆ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ಏನಾದರೂ ಮಾಡಿಕೊಳ್ಳಲಿ," ಎಂದು ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ಅಭಿಪ್ರಾಯಪಟ್ಟರು.
ಹೋಟೆಲ್ ಸಿಬ್ಬಂದಿ ಗಂಗಾಧರ್ ಮೇಲೆ ಹಲ್ಲೆ ಪ್ರಕರಣದ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಸಂದೇಶ್ ದಿ ಪ್ರನ್ಸ್ ಹೋಟೆಲ್ನ ಮತ್ತೋರ್ವ ಸಿಬ್ಬಂದಿ ಬಿಹಾರ ಮೂಲದ ಸಮೀರ್, "ಅಂದು ಫುಡ್ ಸಪ್ಲೈ ಮಾಡುವುದು ಸ್ವಲ್ಪ ತಡವಾಯಿತು. ಹಾಗಾಗಿ ದರ್ಶನ್ ಕೋಪಗೊಂಡಿದ್ದು ನಿಜ. ಆದರೆ ಯಾರ ಮೇಲೂ ಹಲ್ಲೆ ಮಾಡಿಲ್ಲ, ದರ್ಶನ್ ಕೋಪಗೊಂಡ ಕೂಡಲೇ ನಮ್ಮ ಹೋಟೆಲ್ ಎಂಡಿ ಸಂದೇಶ್ರಿಗೆ ವಿಚಾರ ತಿಳಿಸಿದೆವು.''
"ಕೂಡಲೇ ಸ್ಥಳಕ್ಕೆ ಬಂದ ಸಂದೇಶ್, ದರ್ಶನ್ರನ್ನು ಸಮಾಧಾನಪಡಿಸಿದರು. ಘಟನೆ ನಡೆದ ಸಂದರ್ಭದಲ್ಲಿ ಅವರು ಯಾರ ಮೇಲೂ ದೈಹಿಕ ಹಲ್ಲೆ ನಡೆಸಿಲ್ಲ,'' ಎಂದು ಹೋಟೆಲ್ ಸಿಬ್ಬಂದಿ ಸಮೀರ್ ಹೇಳಿದರು.