ಅ.26ಕ್ಕೆ ದಸರಾ ಜಂಬೂಸವಾರಿ; ಪೊಲೀಸ್ ಆಯುಕ್ತರ ಪರಿಶೀಲನೆ
ಮೈಸೂರು, ಅಕ್ಟೋಬರ್ 24: ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಈ ಬಾರಿ ಜಂಬೂಸವಾರಿಯ ಮೆರವಣಿಗೆಯನ್ನು 30 ರಿಂದ 40 ನಿಮಿಷಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.
ಅರಮನೆ ಆವರಣದಲ್ಲಿ ಶನಿವಾರ ದಸರಾ ಅಂತಿಮ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಬಲರಾಮ ಗೇಟ್ನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ ಮೆರವಣಿಗೆ ನಡೆಯಲಿದೆ. ಆಹ್ವಾನಿತರಿಗೆ ಮಾತ್ರ ಅರಮನೆ ಒಳಗೆ ಪ್ರವೇಶವಿದ್ದು, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಹೇಳಿದರು.
ಮೈಸೂರು ದಸರಾ; 30 ನಿಮಿಷದಲ್ಲಿ ಮುಗಿಯಲಿದೆ ಜಂಬೂಸವಾರಿ ಮೆರವಣಿಗೆ
30 ರಿಂದ 40 ನಿಮಿಷಕ್ಕೆ ಜಂಬೂಸವಾರಿ ಅವಧಿಯನ್ನು ಸೀಮಿತಗೊಳಿಸಲಾಗಿದೆ. ಜಂಬೂಸವಾರಿ ದಿನ ಅರಮನೆ ಸುತ್ತ ಇರುವ ಎಲ್ಲ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಇರುತ್ತದೆ. ಕೇವಲ 300 ಜನರಿಗೆ ಅರಮನೆಯಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಅವಕಾಶ ಇದ್ದು, ದೂರದರ್ಶನದಲ್ಲಿ ನೇರ ಪ್ರಸಾರ ಇರಲಿದೆ. ಆದ್ದರಿಂದ ಕೋವಿಡ್ ಸಂದರ್ಭದಲ್ಲಿ ಜನರು ಮನೆಯಿಂದಲೇ ಸರಳ ದಸರಾವನ್ನು ವೀಕ್ಷಣೆ ಮಾಡಬೇಕೆಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.