ಕೋವಿಡ್ ಮಾರ್ಗಸೂಚಿ ಉಲ್ಲಂಘನೆ; ಮಾಧ್ಯಮಗಳಿಗೆ ಪೊಲೀಸ್ ಆಯುಕ್ತರ ಸಲಹೆ
ಮೈಸೂರು, ನವೆಂಬರ್ 4: ಸಭೆ ಸಮಾರಂಭ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೊರೊನಾ ಮಾರ್ಗಸೂಚಿಯ ವ್ಯಾಪಕ ಉಲ್ಲಂಘನೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್-19 ಸೋಂಕು ತಡೆಯುವ ನಿಟ್ಟಿನಲ್ಲಿ ಕಳೆದ ಒಂಬತ್ತು ತಿಂಗಳಿನಿಂದ ಸತತ ಪ್ರಯತ್ನಗಳು ನಡೆಯುತ್ತಲೇ ಇವೆ. ಕ್ರಮೇಣ ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಿದಾಗ ಜನಜೀವನ ಸಹಜಸ್ಥಿತಿಗೆ ಮರಳುವ ವಿಶ್ವಾಸದ ನಡುವೆಯೇ ಕೋವಿಡ್-19 ನಿಯಂತ್ರಣ ಪ್ರಯತ್ನದಲ್ಲಿ ಎಲ್ಲೋ ಒಂದು ಕಡೆ ಹಿನ್ನಡೆಯಾಗುತ್ತಿರುವುದೂ ಗಮನಕ್ಕೆ ಬರುತ್ತಿದೆ ಎಂದಿದ್ದಾರೆ. ಮುಂದೆ ಓದಿ...
ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ
ಅದರಲ್ಲೂ ಸಭೆ-ಸಮಾರಂಭ, ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳು, ಪ್ರತಿಭಟನೆ, ಧರಣಿ ಇಂತಹ ಸಂದರ್ಭದಲ್ಲಿ ಜನರು ತಮಗರಿವಿಲ್ಲದಂತೆ ಮಾರ್ಗಸೂಚಿಗಳನ್ನು ಧಿಕ್ಕರಿಸುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು, ಮಾಸ್ಕ್ ಧರಿಸದಿರುವುದು, ಒಂದು ವೇಳೆ ಧರಿಸಿಯೂ ಆಗಾಗ ಸರಿಸಿ ಮಾತನಾಡುತ್ತಿರುವುದು, ಪರಸ್ಪರ ಸ್ಪರ್ಶಿಸುವುದು, ಹೀಗೆ ಸೋಂಕು ಹರಡಲು ಆಸ್ಪದ ಮಾಡಿಕೊಡುವ ಸ್ವೇಚ್ಛಾಚಾರದ ವರ್ತನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಕೊರೊನಾ ಸೋಂಕು
ಮಾಧ್ಯಮದ ಸಹಕಾರ ಕೋರಿದ ಪೊಲೀಸ್ ಆಯುಕ್ತ
ಪೊಲೀಸ್ ಇಲಾಖೆ ಗಮನಿಸಿರುವಂತೆ ಇಂತಹ ಕಾರ್ಯಕ್ರಮಗಳಲ್ಲಿ ಜನ ಮಾತ್ರವಲ್ಲ, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಕೂಡ ಫೋಟೊ/ವಿಡಿಯೋಗಳಿಗೆ ಮುಗಿಬೀಳುತ್ತಿದ್ದಾರೆ. ಮಾಧ್ಯಮ/ಪತ್ರಿಕೆಗಳು ಇದುವರೆಗೂ ಸೋಂಕು ನಿಯಂತ್ರಣಕ್ಕೆ ಭಾರೀ ಪ್ರಮಾಣದಲ್ಲಿ ಸಹಕರಿಸುತ್ತ ಬಂದಿವೆ. ಇನ್ನು ಮುಂದೆಯೂ ಈ ಸೋಂಕು ನಿಯಂತ್ರಣ ಹಾಗೂ ಸಾಮಾಜಿಕ ಕಳಕಳಿ ದೃಷ್ಟಿಯಿಂದ ಪೊಲೀಸ್ ಇಲಾಖೆ ನಿಮ್ಮ ಸಹಕಾರ ಕೋರಲಿದೆ ಎಂದಿದ್ದಾರೆ.
ಮಾಧ್ಯಮಗಳಿಗೆ ಆಯುಕ್ತರ ಸಲಹೆ
ಅಷ್ಟೇ ಅಲ್ಲದೆ ಕೆಲವು ಸಲಹೆಗಳನ್ನು ನೀಡಿದ್ದು ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಜನರು ಪಾಲ್ಗೊಂಡಂತಹ ಯಾವುದೇ ಕಾರ್ಯಕ್ರಮದ ಫೋಟೋ, ವಿಡಿಯೋಗಳನ್ನು ತೆಗೆಯುವುದಾಗಲಿ, ಸ್ವೀಕರಿಸುವುದಾಗಲಿ ಹಾಗೂ ಪ್ರಚುರಪಡಿಸುವುದನ್ನು ನಿಷೇಧಿಸಲಾಗಿದೆ. ಸಾಮಾಜಿಕ, ರಾಜಕೀಯ, ಧಾರ್ಮಿಕ ಇನ್ನಾವುದೇ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಫೋಟೊ ಇಲ್ಲವೆ ವಿಡಿಯೋ ತೆಗೆಸಿಕೊಳ್ಳಲು ಮುಂದಾಗುವವರಿಗೆ ಒತ್ತಾಸೆ ನೀಡದೆ ಕೋವಿಡ್-19 ಸೋಂಕು ಬಾಧೆ ಎಚ್ಚರಿಕೆ ನೀಡಿ ಸಾಮಾಜಿಕ ಅಂತರವಿಲ್ಲದೆ ಫೋಟೊ/ವಿಡಿಯೋ ತೆಗೆಯಲ್ಲ ಎಂದು ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.
ಮೈಸೂರು: ಇಂದು ಜಿಲ್ಲಾಡಳಿತ ವತಿಯಿಂದ ಮಾಸ್ಕ್ ಡೇ ಆಚರಣೆ
ಉಲ್ಲಂಘನೆ ಕಂಡುಬಂದರೆ ಇಲ್ಲಿ ಸಂಪರ್ಕಿಸಿ
ಒಂದು ವೇಳೆ ಇಂತಹ ಸಾಮೂಹಿಕ ಸಮಾರಂಭ/ಕಾರ್ಯಕ್ರಮಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲಿಸದೇ ಇರುವುದು, ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ ಕೂಡಲೇ ಕೋವಿಡ್ ಕಂಟ್ರೋಲ್ ರೂಂ 1077,0821-2423800,0821-2957711,-0821-2957811 ಅಥವಾ ಪೊಲೀಸ್ ಕಂಟ್ರೋಲ್ ರೂಂ 100,2418339 ಗೆ ಮಾಹಿಹಿ ನೀಡುವಂತೆ ಕೋರಿದ್ದಾರೆ.
ಮೈಸೂರಿನಲ್ಲಿ ನ.3ರ ವರದಿಯಂತೆ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 48,056ಗೆ ಏರಿಕೆಯಾಗಿದ್ದು, ಇದುವರೆಗೂ 45658 ಮಂದಿ ಗುಣಮುಖರಾಗಿದ್ದಾರೆ. 1437 ಸಕ್ರಿಯ ಪ್ರಕರಣಗಳಿದ್ದು, 961 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.