ಮೈಸೂರು; ಕಾರ್ಮಿಕರಿಂದ ಹಣ ಸುಲಿಗೆ ಮಾಡುತ್ತಿದ್ದ ಮೂವರ ಬಂಧನ
ಮೈಸೂರು, ನವೆಂಬರ್ 23: ಬೆಂಗಳೂರು-ಮೈಸೂರು ರಸ್ತೆಯ ಸಿದ್ದಲಿಂಗಪುರದ ಬಳಿ ದರೋಡೆ ನಡೆಸಿದ್ದ ಮೂವರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್ ಎದುರು ಹೆದ್ದಾರಿ ಕಾಮಗಾರಿ ಮಾಡುವ ಕೆಲಸಗಾರರು ಶೆಡ್ ನಲ್ಲಿ ಮಲಗಿದ್ದಾಗ ನ.18ರಂದು ಕೆಲವು ದುಷ್ಕರ್ಮಿಗಳು ದೊಣ್ಣೆಯಿಂದ ಕೆಲಸಗಾರರ ಮೇಲೆ ಹಲ್ಲೆ ಮಾಡಿ ಅವರಿಗೆ ಬೆದರಿಕೆ ಒಡ್ಡಿ ಹಣ ಮತ್ತು ಮೊಬೈಲ್ ಫೋನ್ ಗಳನ್ನು ಕಿತ್ತುಕೊಂಡು ಹೋಗಿರುವ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿತ್ತು.
ವ್ಯಾಪಾರಿಯಿಂದ 37 ಲಕ್ಷ ದರೋಡೆ : ಪ್ರಮುಖ ಆರೋಪಿ ಸೆರೆ
ಇದರ ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಮೇರೆಗೆ ನ.22ರಂದು ಪಾಂಡವಪುರದ ಮನು (19), ಕ್ಯಾತನಹಳ್ಳಿಯ ಬಸವಣ್ಣ (20) ಮತ್ತು ಮಂಡಿ ಮೊಹಲ್ಲಾದ ಕೃಷ್ಣಪ್ಪ (32) ಇವರನ್ನು ದಸ್ತಗಿರಿ ಮಾಡಿದ್ದಾರೆ.
ವಿಚಾರಣೆಯಲ್ಲಿ ಮನು ಈ ಹಿಂದೆ ಹೊಳೆನರಸೀಪುರದಲ್ಲಿ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿಕೊಂಡು ಬಂದಿದ್ದು ಅದೇ ಬೈಕಿನಲ್ಲಿ ಉಳಿದಿಬ್ಬರು ಆರೋಪಿಗಳೊಂದಿಗೆ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ ಸುಲಿಗೆ ಮಾಡಿ ಕಿತ್ತುಕೊಂಡು ಹೋಗಿದ್ದ 2 ಮೊಬೈಲ್ ಫೋನ್ ಗಳು, ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ ದಾಖಲಾದ ಮೂರೇ ದಿನದಲ್ಲಿ ಇದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ತಂಡವನ್ನು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಪ್ರಶಂಸಿಸಿದ್ದಾರೆ.
ಪ್ರವಾಸಿಗನ ಲಕ್ಷಾಂತರ ರೂ ಮೌಲ್ಯದ ಚೈನ್, ಲ್ಯಾಪ್ ಟಾಪ್ ಕಳವು: ವಾರಾಂತ್ಯ ಕಳೆಯಲು ಬೆಂಗಳೂರಿನಿಂದ ಬಂದು ಕಬಿನಿ ಹಿನ್ನೀರಿನ ಸಮೀಪದ ರೆಸಾರ್ಟ್ವೊಂದರಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರೊಬ್ಬರ ಚಿನ್ನಾಭರಣ, ಹಣ, ಲ್ಯಾಪ್ ಟಾಪ್ ಕಳವಾಗಿರುವ ಘಟನೆ ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಬೆಂಗಳೂರಿನ ಸುಧೀರ್ ಯಜವತ್ ಎಂಬುವವರು ಶನಿವಾರ ಬಂದು ಬದನಗುಪ್ಪೆ ಗ್ರಾಮದಲ್ಲಿರುವ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು. ಅದೇ ದಿನ ರಾತ್ರಿ ಊಟಕ್ಕೆಂದು ರೆಸಾರ್ಟ್ ನ ಡೈನಿಂಗ್ ಹಾಲ್ ಗೆ ಹೋಗಿದ್ದಾಗ ಇವರ ರೂಮಿನಿಂದ 60 ಸಾವಿರ ನಗದು, ಚಿನ್ನದ ಕೈ ಚೈನ್, ಲ್ಯಾಪ್ ಟಾಪ್ ಕಳುವಾಗಿದೆ. ಕಳುವಾಗಿರುವ ವಸ್ತುಗಳ ಒಟ್ಟು ಮೌಲ್ಯ 1.5 ಲಕ್ಷ ರೂಪಾಯಿ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೆಸಾರ್ಟ್ ನಲ್ಲಿದ್ದ ನೌಕರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.