ಗೋಡಂಬಿ ಕೊಡಿಸುತ್ತೇನೆಂದು 10 ಲಕ್ಷ ವಂಚಿಸಿದ್ದವ ಕೊನೆಗೂ ಸಿಕ್ಕಿಬಿದ್ದ
ಮೈಸೂರು, ನವೆಂಬರ್ 6: ಅತಿ ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುತ್ತೇನೆಂದು 10 ಲಕ್ಷ ರೂಪಾಯಿ ತೆಗೆದುಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಪಳನಿಮಲೈ ಬಂಧಿತ ಆರೋಪಿ. ಮೈಸೂರಿನ ಉದಯಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ, ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಮೈಸೂರಿನ ಉದಯಗಿರಿಯ ನಿವಾಸಿ ರೋಹನ್ ಖಾನ್ ಎಂಬುವರಿಗೆ ಹತ್ತು ಲಕ್ಷ ವಂಚಿಸಿದ್ದ.
ಪೂಜೆ ಮಾಡುವೆನೆಂದು 21 ಲಕ್ಷ ರೂ ಮೌಲ್ಯದ ಚಿನ್ನದೊಂದಿಗೆ ಪರಾರಿಯಾಗಿದ್ದ ಪೂಜಾರಿ ಬಂಧನ
ರೋಹನ್ ಖಾನ್ ಇಂಪೋರ್ಟ್-ಎಕ್ಸ್ ಪೋರ್ಟ್ ವ್ಯವಹಾರ ನಡೆಸುತ್ತಿದ್ದು, ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ ಆರ್ ಟಿಜಿಎಸ್ ಮೂಲಕ ಪಳನಿ ಹಾಗೂ ಆತನ ಪತ್ನಿ ರಾಧಿಕಾ ಪಳನಿ ಮಲೈ ಹತ್ತು ಲಕ್ಷ ಪಡೆದಿದ್ದರು. ಈ ದಂಪತಿ ತಮಿಳುನಾಡಿನ ಸೇಲಂ ಜಿಲ್ಲೆಯ ಪನೃತ್ತಿ ಪಟ್ಟಣದಲ್ಲಿ ಎಸ್ಪಿಆರ್ ಎಂಬ ಹೆಸರಿನಲ್ಲಿ ಕಂಪನಿ ನಡೆಸುತ್ತಿದ್ದರು. ಕೊನೆಗೆ ಗೋಡಂಬಿಯನ್ನೂ ಕೊಡದೆ ಹಣವನ್ನೂ ಹಿಂದಿರುಗಿಸದೆ ತಲೆಮರೆಸಿಕೊಂಡಿದ್ದರು.
ನಾಲ್ಕು ವರ್ಷಗಳ ಪ್ರಯತ್ನದ ನಂತರ ಉದಯಗಿರಿ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಳನಿ ಮಲೈ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಮಿಳುನಾಡಿನ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.