ವಿಧವೆಯರೇ ಇವನ ಟಾರ್ಗೆಟ್; ಈತ ಮಾಡುತ್ತಿದ್ದ ಅಸಲಿ ಕೆಲಸ ಇದು...
ಮೈಸೂರು, ಡಿಸೆಂಬರ್ 23: ವಿಧವೆಯರ ಜೊತೆ ಸ್ನೇಹ ಬೆಳೆಸಿ, ಮದುವೆಯಾಗುತ್ತೇನೆ ಎಂದು ನಂಬಿಸಿ ವಂಚನೆ ಎಸಗುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಮೈಸೂರಿನ ಕೃಷ್ಣರಾಜ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ತಮಿಳುನಾಡಿನ ಕೊಯಮತ್ತೂರು ನಿವಾಸಿ 47 ವರ್ಷದ ವಿನೀತ್ ರಾಜ್ ಎಂದು ಗುರುತಿಸಲಾಗಿದೆ.
ಮೈಸೂರಿನಲ್ಲಿ, ವಿಧವೆಯೊಬ್ಬಳನ್ನು ಮದುವೆಯಾಗುವುದಾಗಿ ಭರವಸೆ ನೀಡಿ, ನಂತರ 80 ಸಾವಿರ ರೂಪಾಯಿ ಮೌಲ್ಯದ ಮಂಗಳ ಸೂತ್ರವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಮಹಿಳೆಯ ದೂರಿನ ಮೇರೆಗೆ ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ವೈವಾಹಿಕ ತಾಣಗಳ ಮೂಲಕ ಭೇಟಿ
ಆರೋಪಿಯು ವೈವಾಹಿಕ ತಾಣಗಳಲ್ಲಿ ತಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದ. ನಂತರ ವಿಧವೆಯರನ್ನೇ ಸಂಪರ್ಕಿಸಿ ಪರಿಚಯ ಬೆಳೆಸುತ್ತಿದ್ದ. ತಾನು ಕೊಯಮತ್ತೂರಿನ ಆಟೋಮೊಬೈಲ್ ಉದ್ಯಮಿ ಎಂದು ಪರಿಚಯಿಸಿಕೊಂಡು ತನ್ನ ಪತ್ನಿ ತೀರಿಕೊಂಡು 5 ವರ್ಷವಾಗಿದೆ, ಎರಡನೇ ಮದುವೆ ಮಾಡಿಕೊಳ್ಳುವುದಾಗಿ ಮಹಿಳೆಯರನ್ನು ನಂಬಿಸುತ್ತಿದ್ದ.
ಆನ್ ಲೈನ್ ನಲ್ಲಿ ಖರೀದಿಸಿ ನಂತರ ಮೈಸೂರಿನ ಈ ಗೃಹಿಣಿ ಮಾಡುತ್ತಿದ್ದುದೇನು?
ಅರ್ಚಕರು ಹೇಳಿದ್ದಾರೆಂದು ಸರ ಬದಲಿಸಿಕೊಂಡ
ಕಳೆದ ತಿಂಗಳು ಮೈಸೂರಿನಲ್ಲಿ ವಿಧವೆಯೊಬ್ಬರನ್ನು ಸೈಟ್ ಮೂಲಕ ಸಂಪರ್ಕಿಸಿದ ಈತ, ಮದುವೆಯ ಆಸಕ್ತಿ ವ್ಯಕ್ತಪಡಿಸಿದ್ದ. ಇಬ್ಬರೂ ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ಭೇಟಿಯಾಗಲು ನಿರ್ಧರಿಸಿದರು. ನವೆಂಬರ್ 18ರಂದು ಕಾರಿನಲ್ಲಿ ಬೆಟ್ಟಕ್ಕೆ ಬಂದಿದ್ದ ವಿನೀತ್ ರಾಜ್, "ಮದುವೆಗೆ ಮುಂಚಿತವಾಗಿ, ಇಬ್ಬರೂ ದುಷ್ಟ ಶಕ್ತಿಗಳನ್ನು ದೂರವಿಡಬೇಕು. ಇದಕ್ಕಾಗಿ ದಂಪತಿ ತಮ್ಮ ಚಿನ್ನದ ಸರಗಳನ್ನು ವಿನಿಮಯ ಮಾಡಿಕೊಳ್ಳಬೇಕು" ಎಂದು ಅರ್ಚಕರು ಹೇಳಿದ್ದಾರೆ ಎಂದು ವಿಧವೆಯನ್ನು ನಂಬಿಸಿ ಆಕೆಯ ಕತ್ತಲ್ಲಿದ್ದ ಚಿನ್ನದ ಸರವನ್ನು ಪಡೆದಿದ್ದ.
ಕಾಫಿ ಕುಡಿಯಲು ಹೋದಾಗ ಪರಾರಿ
ಆಕೆಯ ಕತ್ತಲ್ಲಿದ್ದ 80 ಸಾವಿರ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ತಾನು ತೆಗೆದುಕೊಂಡು ತನ್ನ ಸರಪಳಿಯಂತಿದ್ದ ನಕಲಿ ಚೈನನ್ನು ಆಕೆಗೆ ನೀಡಿದ. ಬೆಟ್ಟದಿಂದ ಹಿಂತಿರುಗಿದ ನಂತರ ಸರಗಳನ್ನು ಬದಲಾಯಿಸಿಕೊಳ್ಳಬಹುದೆಂದೂ ಆತ ನಂಬಿಸಿದ್ದ.
ಅದರಂತೆ ದೇವರ ದರ್ಶನ ಮಾಡಿಕೊಂಡು ಕೆಳಗೆ ಬಂದು ಹೋಟೆಲ್ ಒಂದರಲ್ಲಿ ಕಾಫಿ ಕುಡಿಯಲು ಇಬ್ಬರೂ ಹೋದರು. ಆಗ ಮಹಿಳೆ ಶೌಚಾಲಯಕ್ಕೆ ಹೋದಾಗ ಆರೋಪಿಯು ಮಹಿಳೆಯ ಸರದೊಂದಿಗೆ ಪರಾರಿಯಾಗಿದ್ದ. ನಂತರ ಈತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
"ಮೂಡ"ಕ್ಕೆ ಸುಳ್ಳು ಮಾಹಿತಿ ನೀಡಿ ಸರ್ಕಾರಿ ನೌಕರ ಪಡೆದಿರುವ ಸೈಟುಗಳೆಷ್ಟು ಗೊತ್ತೆ?
ವಿಧವೆಯರಿಗೆ ವಂಚಿಸಿದವ ಕೊನೆಗೂ ಕೊಯಮತ್ತೂರಿನಲ್ಲಿ ಸಿಕ್ಕಿಬಿದ್ದ
ನಂತರ ವಿಧವೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಆರೋಪಿಯ ಕಾರಿನ ಸಂಖ್ಯೆಯನ್ನು, ಸಿಸಿ ಟಿವಿ ದೃಶ್ಯಾವಳಿಗಳ ಮೂಲಕ ಪತ್ತೆ ಹಚ್ಚಿದ ಪೊಲೀಸರು ಕೊಯಮತ್ತೂರಿಗೆ ತೆರಳಿ ಆತನನ್ನು ಬಂಧಿಸಿದ್ದಾರೆ. ಈತನು ಇದೇ ರೀತಿ ಬೆಂಗಳೂರಿನ ಇಂದಿರಾ ನಗರದ ಮಹಿಳೆಯೊಬ್ಬರಿಗೆ ಹಾಗೂ ಮೈಸೂರಿನ ಇನ್ನೂ ಇಬ್ಬರು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು, ಪೋಲೀಸರು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈತನು ಅಮಾಯಕ ವಿಧವೆಯರಿಗೆ ಮೋಸ ಮಾಡುವುದನ್ನೇ ಪೂರ್ಣಾವಧಿ ಉದ್ಯೋಗ ಮಾಡಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.