ಮೈಸೂರು: ದೃಶ್ಯಂ ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ಸಿಕ್ಕಿಬಿದ್ದ ಆರೋಪಿಗಳು!
ಮೈಸೂರು , ಜೂ. 27: ದೃಶ್ಯಂ ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ಶವವನ್ನು ಬೀಸಾಕಿ ತಮಗೆ ಏನೂ ಗೊತ್ತಿಲ್ಲ ಎಂಬಂತಿದ್ದ ಇಬ್ಬರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಸಿಕ್ಕಿಹಾಕಿಕೊಳ್ಳಲೇ ಬಾರದು ಎಂದು ದೃಶ್ಯಂ ಸಿನಿಮಾವನ್ನು ಆರೋಪಿಗಳು ಅನೇಕ ಸಲ ವೀಕ್ಷಣೆ ಮಾಡಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ..
Recommended Video
ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲೆ ಮಾಡಿಸಿ, ತನಗೇ ಏನೂ ಗೊತ್ತಿಲ್ಲ ಎಂಬಂತಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದರೂ ಸಿಕ್ಕಿಹಾಕಿಕೊಳ್ಳಬಾರದು ಎಂಬ ಉದ್ದೇಶದಿಂದ ಇಬ್ಬರೂ ಆರೋಪಿಗಳು ದೃಶ್ಯಂ ಸಿನಿಮಾ ನೋಡಿ ಸಂಚು ರೂಪಿಸಿದ್ದರು. ಅಂದುಕೊಂಡಂತೆ ಕೊಲೆಯನ್ನು ಮಾಡಿದ್ದರು. ಆದರೆ ಕೊಲೆ ಜಾಡು ಹಿಡಿದು ತನಿಖೆ ಆರಂಭಿಸಿದ್ದ ಪೊಲೀಸರು ಕೆಲವೇ ದಿನಗಳಲ್ಲಿ ಇಬ್ಬರೂ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಸಿನಿಮಾ ಬೇರೆ ಜೀವನವೇ ಬೇರೆ ಎಂಬುದನ್ನು ಪೊಲೀಸರು ಮತ್ತೊಮ್ಮೆ ತೋರಿಸಿದ್ದಾರೆ.
ಟ್ರಾನ್ಸಫಾರ್ಮರ್ ಪಕ್ಕ ಮೃತದೇಹ
ಮೈಸೂರು ಜಿಲ್ಲೆ ಕೆಆರ್ ನಗರ ತಾಲೂಕಿನ ಸಾಲಿಗ್ರಾಮದ ಚುಂಚನಕಟ್ಟೆ ಮುಖ್ಯ ರಸ್ತೆ ಬಳಿ ಅದೇ ಊರಿನ ಆನಂದ್ (33) ಎಂಬುವರ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಅದು ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿ ಮೃತಪಟ್ಟಂತೆ ಕಾಣುತ್ತಿತ್ತು.
ಜೂನ್ 22 ರಂದು ರಾತ್ರಿ ತನ್ನ ಡಿಯೊ ಸ್ಕೂಟರ್ನಲ್ಲಿ ಮನೆಯಿಂದ ಹೊರಗೆ ಹೋಗಿದ್ದ ಆನಂದ್, ಮರುದಿನ ಬೆಳಗ್ಗೆ (ಜೂ.23) ಬೆಳಗ್ಗೆ ಚುಂಚನಕಟ್ಟೆ ಸಮೀಪ ಕಾಲುವೆ ಅಮ್ಮನ ದೇವಸ್ಥಾನದ ಹತ್ತಿರ ವಿದ್ಯುತ್ ಟ್ರಾನ್ಸಫಾರ್ಮರ್ ಪಕ್ಕ ರಕ್ತಸಿಕ್ತ ಶವವಾಗಿ ಪತ್ತೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಾಲಿಗ್ರಾಮ ಪೊಲೀಸರು ತನಿಖೆ ಆರಂಭಿಸಿದ್ದರು.
ಮದ್ಯಪಾನ ಮಾಡಲು ಹೋಗಿದ್ದ
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಮೊದಲು ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ. ಆದರೆ ಮೃತ ಆನಂದ್ ಅದೇ ಊರಿನ ಬಾಬು ಎಸ್.ಆರ್. ಎಂಬುವನ ಜೊತೆಗೆ ಮದ್ಯಪಾನ ಮಾಡಲು ತೋಟದ ಮನೆಗೆ ಹೋಗಿದ್ದ ಎಂಬ ಮಾಹಿತಿ ಜಾಡು ಹಿಡಿದು ತನಿಖೆ ನಡೆಸಿದಾಗ ಸಂಪೂರ್ಣ ಸಂಚು ಬಯಲಾಗಿದೆ.
ಆರೋಪಿ ಎಸ್.ಆರ್. ಬಾಬು ಎಂಬುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಾಲಿಗ್ರಾಮ ಪೊಲೀಸರಿಗೆ ಮತ್ತಷ್ಟು ಭಯಾನಕ ಸ್ಕೆಚ್ ವಿವರಗಳು ಸಿಕ್ಕಿವೆ.
ಅಪಘಾತದಂತೆ ದೃಶ್ಯ ಸೃಷ್ಟಿ
ಆರೋಪಿ ಎಸ್.ಆರ್. ಬಾಬು ತನಗೆ ಸೇರಿದ್ದ ಸಾಲಿಗ್ರಾಮದ ಹೊರ ಭಾಗದಲ್ಲಿದ್ದ ತೋಟದ ಮನೆಗೆ ಆನಂದ್ನನ್ನು ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿದ್ದಾನೆ. ನಂತರ ಕೊಡಲಿಯ ಹಿಂಬಾಗದಿಂದ ಆನಂದ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ನಂತರ ಆನಂದ್ ಮೃತದೇಹವನ್ನು ಚೀಲದಲ್ಲಿ ಹಾಕಿ ಹುಲ್ಲಿನ ಹೊರೆಯ ರೀತಿಯಲ್ಲಿ ಮಾಡಿಕೊಂಡು ತನ್ನ ಮೋಟರ್ ಬೈಕ್ನಲ್ಲಿ ಚುಂಚನಕಟ್ಟೆ- ಸಾಲಿಗ್ರಾಮ ರಸ್ತೆಯ ಕಾಲುವೆಯಮ್ಮ ದೇವಸ್ಥಾನದ ಬಳಿಯ ಟ್ರಾನ್ಸಫಾರ್ಮರ್ ಪಕ್ಕದಲ್ಲಿ ಹಾಕಿದ್ದಾನೆ. ನಂತರ ಆನಂದನ ಡಿಯೊ ಬೈಕ್ನ್ನೂ ತಂದು ಶವದ ಪಕ್ಕದಲ್ಲಿ ಹಾಕಿದ್ದಾನೆ. ಜನರು ನೋಡಿದರೆ ಅಪಘಾತವಾಗಿರುವತೆ ಘಟನೆಯ ದೃಶ್ಯವನ್ನು ಸೃಷ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ಹೀಗೆ ಕೊಲೆ ಮಾಡಲು ಕಾರಣ ಅನೈತಿಕ ಸಂಬಂಧ!
ಅನೈತಿಕ ಸಂಬಂಧ
ಕೊಲೆಯಾಗಿರುವ ಆನಂದ್ ಪತ್ನಿ ಶಾರದಾ ಜೊತೆಗೆ ಅದೇ ಊರಿನ ಎಸ್.ಆರ್. ಬಾಬು ಕಳೆದ ಹಲವು ತಿಂಗಳುಗಳಿಂದ ಅನೈತಿಕ ಸಂಬಂಧ ಹೊಂದಿದ್ದಳು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಹೀಗೆ ಅನೈತಿಕ ಸಂಬಂಧ ಹೊಂದಿದ್ದ ಶಾರದಾ, ತನ್ನ ಗಂಡ ಆನಂದ್ ದಿನವೂ ಕುಡಿದು ಬಂದು ತೊಂದರೆ ಕೊಡುತ್ತಾನೆ. ಅವನಿಂದ ನನಗೆ ಮುಕ್ತಿ ಕೊಡಿಸು. ಜೀವನಪೂರ್ತಿ ನಿನ್ನೊಂದಿಗೆ ಇರುತ್ತೇನೆ ಎಂದು ಹೇಳಿದ್ದಾಳೆ. ಶಾರದಾಳ ಮಾತಿನಂತೆ ಆನಂದ್ನನ್ನು ಕೊಲೆ ಮಾಡಿದ್ದ ಬಾಬು, ಅದು ಅಪಘಾತ ಎಂಬಂತೆ ಬಿಂಬಿಸಿದ್ದಾನೆ.
ಆರೋಪಿ ಆನಂದ್ ಹಾಗೂ ಶಾರದಾ ಕೊಲೆ ಮಾಡಿ ನಂತರ ತಪ್ಪಿಸಿಕೊಳ್ಳಲು ಮೊದಲೇ ದೃಶ್ಯಂ ಸಿನಿಮಾ ನೋಡಿ ಪ್ರೇರಣೆ ಪಡೆದಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಸಾಲಿಗ್ರಾಮ ಪೊಲೀಸರು ತಿಳಿಸಿದ್ದಾರೆ.
ವಿಶೇಷ ತನಿಖಾ ತಂಡ
ಮೇಲ್ನೋಟಕ್ಕೆ ಅಪಘಾತದಂತೆ ಕಂಡು ಬಂದಿದ್ದ ಪ್ರಕರಣ ಬೇಧಿಸಲು ಮೈಸೂರು ಎಸ್ಪಿ ಸಿ.ಬಿ. ರಿಷ್ಯಂತ್ ಅವರು ಕೆಆರ್ ನಗರ ಸರ್ಕಲ್ ಇನ್ಸ್ಪೆಕ್ಟರ್ ರಾಜು. ಪಿ.ಕೆ. ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದರು.
ತಂಡದಲ್ಲಿದ್ದ ಪಿಎಸ್ಐಗಳಾದ ಚೇತನ್ ವಿ, ಆರತಿ ಟಿ, ಮಾದಪ್ಪ ಪಿ.ಎಂ., ರಮೇಶ್ ಕರ್ಕಿಕಟ್ಟಿ ಜೊತೆಗೆ ಪೊಲೀಸ್ ಸಿಬ್ಬಂದಿ ಬಸಪ್ಪ, ಮಹೇಶ್, ಮಲ್ಲೇಶ್, ಡಿ.ಜಿ. ನಾರಾಯಣಶೆಟ್ಟಿ, ಮಧುಕುಮಾರ್ ಕೆ.ಎಚ್., ಮುದ್ದುರಾಜು, ಕುಮಾರ್, ಗುರುಪ್ರಸಾದ್, ಸಂಜಯ್ ಕುಮಾರ್, ಪ್ರದೀಪ್, ಕಾಂತರಾಜು, ಇಂದಾದ್ ಅಲಿ, ದಿನೇಶ್, ಅನಿತ್, ಸುನಿತಾ, ನಾಗರತ್ನ, ವಿನಯಶ್ರೀ, ಸಿಡಿಆರ್ ವಿಭಾಗದ ವಸಂತ್ ಅವರು ಪ್ರಕರಣದ ತನಿಖೆ ನಡೆಸಿದ್ದರು.
ದೃಶ್ಯಂ ಸಿನಿಮಾ ನೋಡಿ ಸಿಕ್ಕಿಹಾಕಿಕೊಳ್ಳದಂತೆ ಕೊಲೆ ಮಾಡಿದ್ದ ಆರೋಪಿಗಳ ಕ್ರಮಿನಿಲ್ ಬುದ್ದಿಯ ಹೊರತಾಗಿಯೂ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.