ಮೈಸೂರು: ಜಿಡಿಪಿ ಕುಸಿತಕ್ಕೆ ಮೋದಿ ತಪ್ಪು ನಿರ್ಧಾರವೇ ಕಾರಣ
ಮೈಸೂರು, ಸೆಪ್ಟೆಂಬರ್ 7: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಪ್ಪು ನಿರ್ಧಾರಗಳಿಂದಲೇ ದೇಶದ ಜಿಡಿಪಿ ಕುಸಿಯಲು ಕಾರಣವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಜಿಡಿಪಿ ಮೈನಸ್ 23.9ಕ್ಕೆ ಇಳಿಕೆಯಾಗಿರುವುದು ಆತಂಕದ ವಿಷಯವಾಗಿದ್ದು, ದೇಶದ ಒಟ್ಟಾರೆ ಜಿಡಿಪಿ 200 ಲಕ್ಷ ಕೋಟಿ ರುಪಾಯಿಗಳಾಗಿದ್ದು, ವರ್ಷಕ್ಕೆ 14 ಲಕ್ಷ ಕೋಟಿ ಹೆಚ್ಚಾಗಬೇಕಿತ್ತು. ಆದರೆ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಋಣಾತ್ಮಕ ಬೆಳವಣಿಗೆ ದಾಖಲಿಸಿದೆ. ಇದರಿಂದಾಗಿ 46 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಟೀಕಿಸಿದರು.
ಕೊರೊನಾ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ; ದೇವನೂರು ಮಹಾದೇವ
ಮಾತು ಮುಂದುವರೆಸಿದ ಅವರು, ನೋಟ್ ಬ್ಯಾನ್, ಲಾಕ್ ಡೌನ್ ಗಳು, ಅವೈಜ್ಞಾನಿಕ ಜಿಎಸ್ಟಿ, ಸರ್ಕಾರಿ ಸಂಸ್ಥೆಗಳ ಖಾಸಗೀಕರಣವೇ ಇದಕ್ಕೆ ಕಾರಣ. ಎನ್.ಎಸ್.ಎಸ್.ಒ ಅಂಕಿ ಅಂಶದ ಪ್ರಕಾರ 50 ವರ್ಷದಲ್ಲಿ 4.5 ಕೋಟಿ ಉದ್ಯೋಗ ಕಡಿತಗೊಂಡಿದೆ. ಮೋದಿಯವರೆ ನಿಮ್ಮ ಮನ್ ಕೀ ಬಾತ್ ನಿಲ್ಲಿಸಿ ಉದ್ಯೋಗ ಕೊಡಿ ಅಂತ ಯುವಕರು ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈಗ ಯುವ ಪೀಳಿಗೆ ಎಚ್ಚೆತ್ತುಕೊಳ್ಳುತ್ತಿದೆ. ಈ ಬಗ್ಗೆ ರಾಹುಲ್ ಗಾಂಧಿ ಸಾಕಷ್ಟು ಪತ್ರ ಬರೆದಿದ್ದರೂ ಅದನ್ನು ಗಂಭೀರವಾಗಿ ಪ್ರಧಾನಿಯವರು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವುದಕ್ಕೆ ಡ್ರಗ್ ಹೆಸರು ಬಳಸಿಕೊಳ್ಳುತ್ತಿದೆ. ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಕೆಲ ನಟ-ನಟಿಯರ ಹೆಸರೇ ಈ ವಿಚಾರದಲ್ಲಿ ಕೇಳಿ ಬರುತ್ತಿದೆ. ಪ್ರಮುಖವಾಗಿ ರಾಗಿಣಿ, ಸಿಎಂ ಬಿಎಸ್ವೈ ಪುತ್ರರ ಜೊತೆ ಗುರುತಿಸಿಕೊಂಡಿದ್ದಾರೆ. 100ಕ್ಕೆ 100 ರಷ್ಟು ರಾಗಿಣಿ ಬಿಜೆಪಿಗೆ ಸೇರಿದವರು. ಪಕ್ಷದಲ್ಲಿ ಯಾವುದೇ ಹುದ್ದೆ ನೀಡದಿದ್ದರೂ ಅವರು ಬಿಜೆಪಿ ಸ್ಟಾರ್ ಪ್ರಚಾರಕರೇ. ಈ ವಿಚಾರದಲ್ಲಿ ಯಾರೇ ಭಾಗಿಯಾಗಿದರೂ ಅವರಿಗೆ ಶಿಕ್ಷೆಯಾಗಬೇಕು ಎಂದರು.
ಜಿಎಸ್ಟಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. 4 ತಿಂಗಳಿನಿಂದ 13,764 ಕೋಟಿ ರೂ. ನಷ್ಟವಾಗಿದೆ. ನಮ್ಮ ದುಡ್ಡನ್ನು ನಮಗೆ ಕೊಡದೇ ಕೇಂದ್ರ ಸರ್ಕಾರ ದೇವರ ಆಟ ಅಂತ ಕೈ ತೊಳೆದು ಕುಳಿತಿದೆ. ಇಂತಹ ಮೋಸವನ್ನು ಯಾರೂ ಕ್ಷಮಿಸುವುದಿಲ್ಲ. ಅಭಿವೃದ್ಧಿ ಕುಂಠಿತವಾಗಿರುವ ಇಂತಹ ಸಂದರ್ಭದಲ್ಲಿ ಜಿಎಸ್ಟಿ ಬಿಡುಗಡೆ ಮಾಡದಿರುವುದು ಸರಿಯಲ್ಲ. ನಮ್ಮ ಸಂಸದರು ಈ ವಿಚಾರವಾಗಿ ಧ್ವನಿಯತ್ತಬೇಕು ಆಗ್ರಹಿಸಿದರು.