ದಸರೆಯೇನೋ ಮುಗಿಯಿತು, ಕಸಮಯವಾಯ್ತು ಅಂಬಾವಿಲಾಸ ಅರಮನೆ
ಮೈಸೂರು, ಅಕ್ಟೋಬರ್ 20 : ನಾಡಹಬ್ಬದ ಸಂಭ್ರಮದಲ್ಲಿ ಕಳೆದ ಹತ್ತು ದಿನಗಳಿಂದ ನವವಧುವಿನಂತೆ ಸಿಂಗಾರಗೊಂಡಿದ್ದ ಮೈಸೂರು ಇಂದು ಮತ್ತೆ ಯಥಾಸ್ಥಿತಿಗೆ ಮರಳಿದೆ. ಜಂಬೂಸವಾರಿಯನ್ನು ಆರಂಭಗೊಳಿಸುವ ಸ್ಥಳ ಅರಮನೆಯ ಆವರಣವನ್ನು ಕಸವೇ ಆವರಿಸಿದಂತಿದೆ.
ಮೈಸೂರು ದಸರಾ: ಅದ್ಧೂರಿ ಜಂಬೂಸವಾರಿ ಕಣ್ ತುಂಬಿಕೊಂಡ ಜನ ಸಾಗರ
ಜಂಬೂಸವಾರಿ ಮೆರವಣಿಗೆ ಹೊರಡುವ ಮೂಲಕ ಹತ್ತುದಿನಗಳ ಕಾಲ ನಡೆದ ಸಂಭ್ರಮದ ದಸರಾಕ್ಕೆ ತೆರೆ ಬಿತ್ತು. ದಸರಾ ಜಂಬೂ ಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಅರಮನೆಯ ಆವರಣದೊಳಗೆ ಜನರಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ ಜನತೆ ಮಾತ್ರ ಸ್ವಚ್ಛತೆಯ ಕುರಿತು ಕಿಂಚಿತ್ತೂ ಗಮನ ಹರಿಸಿಲ್ಲದಿರುವುದು ಮಾತ್ರ ವಿಪರ್ಯಾಸ.
ಅಂಬಾರಿ ಹೊರುವ ಅರ್ಜುನನ ಸಂಪೂರ್ಣ ವಿವರ ಇಲ್ಲಿದೆ ಓದಿ...
ಇಂದು ಅರಮನೆಯ ಆವರಣದಲ್ಲಿಂದು ಎತ್ತ ನೋಡಿದರೂ ಕಸದ ರಾಶಿಯೇ ಕಂಡು ಬರುತ್ತಿದೆ. ಕುರುಕಲು ತಿಂಡಿ ತಿಂದು ಬಿಸಾಡಿದ ಪ್ಲಾಸ್ಟಿಕ್ ಕವರ್ ಗಳು, ತಂಪು ಪಾನೀಯಗಳ ಪ್ಯಾಕೇಟ್ ಗಳು, ನೀರಿನ ಬಾಟಲ್ ಗಳು ಎಲ್ಲೆಂದರಲ್ಲಿ ಬಿದ್ದು ಗಾಳಿಗೆ ಹಾರಾಡುತ್ತಿವೆ.
ನಿಗದಿತ ಸ್ಥಳದಲ್ಲಿ ಕಸದ ಡಬ್ಬವನ್ನಾದರೂ ಇಟ್ಟಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲವೇನೋ. ಆದರೆ ಸಮೀಪದಲ್ಲಿ ಎಲ್ಲೂ ಕಸದ ಡಬ್ಬಿಗಳು ಇಲ್ಲದ ಕಾರಣ ಜನರು ತಾವು ತಂದ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದರು. ಅಕ್ಷರಸ್ಥರೇ ಈ ರೀತಿ ಕಸ ಬಿಸಾಡಿ ಹೊರಟರೆ ಇನ್ನು ಏನೂ ಅರಿಯದವರ ಪಾಡೇನು?
ಆಗಮಿಸುವ ಜನತೆ ತಾವೇ ಒಂದು ಕವರ್ ತಂದು ತಾವು ತಿನ್ನುವ, ಕುಡಿಯುವ ವಸ್ತುಗಳನ್ನು ಬಳಿಕ ತಮ್ಮ ಜೊತೆಯೇ ಕೊಂಡೊಯ್ದು ವ್ಯವಸ್ಥಿತವಾಗಿ ಕಸದ ಡಬ್ಬಕ್ಕೆ ಹಾಕುವ ಬದಲು ಈ ರೀತಿ ಇಲ್ಲಿಯೇ ಸುರಿದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಇನ್ನಾದರೂ ನಮ್ಮ ಜನರು ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಈ ತೆರನಾದ ಘಟನೆಗಳು ಮರುಕಳಿಸದಂತೆ ನೋಡಿಕೊಂಡರೆ ಒಳಿತು.