ಮೈಸೂರು-ಕೊಡಗು ಕ್ಷೇತ್ರದಲ್ಲಿ ಶುರುವಾಗಿದೆ ಜಾತಿ ಲೆಕ್ಕಾಚಾರ
ಮೈಸೂರು, ಫೆಬ್ರವರಿ 7: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸದ್ಯ ಲೋಕಸಭಾ ಚುನಾವಣೆಗೆ ಜಾತಿ ಲೆಕ್ಕಾಚಾರಗಳು ಶುರುವಿಟ್ಟುಕೊಂಡಿದೆ. ಈಗಾಗಲೇ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಪಕ್ಷ ಸ್ಪರ್ಧಿಸಲಿ ಒಕ್ಕಲಿಗ ಸಮಾಜಕ್ಕೆ ಸೇರಿದ ಅಭ್ಯರ್ಥಿಗೆ ಟಿಕೆಟ್ ನೀಡಲು ಚಿಂತನೆ ನಡೆಸಲಾಗಿದೆ. ಈ ರೀತಿಯಾದ ಚರ್ಚೆಯೊಂದು ಮೈಸೂರು ಮೈತ್ರಿ ಪಕ್ಷಗಳಲ್ಲಿ ಶುರುವಿಟ್ಟುಕೊಂಡಿದೆ.
ದೋಸ್ತಿಗಳಲ್ಲಿ ಯಾವ ಪಕ್ಷ ಕಣಕ್ಕಿಳಿದರೂ ಒಕ್ಕಲಿಗ ಸಮಾಜಕ್ಕೆ ಸೇರಿದವರಿಗೆ ಟಿಕೆಟ್ ನೀಡಿದರೆ ಗೆಲುವಿನ ಸನಿಹ ತಲುಪಲಿದ್ದೇವೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಎಂದಿಗೂ ಗೆದ್ದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಇಲ್ಲಿ ಪೈಪೋಟಿ ಹೆಚ್ಚು. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದ ಮತದಾರರು ಬಿಜೆಪಿಗೆ ಕೈ ಹಿಡಿದಿದ್ದಾರೆ.
ನಾನು ಕೂಡ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ:ಮಾಜಿ ಶಾಸಕ ವಾಸು
ಬದಲಾದ ರಾಜಕೀಯ ಸ್ಥಿತಿಯಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಬಿಜೆಪಿಗೆ ಸೆಡ್ಡು ಹೊಡೆದು ನಿಂತಿದೆ. ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ನಡೆಸಿದರೆ ಗೆಲುವು ಸಾಧ್ಯ ಎಂಬುದು ಉಭಯ ಪಕ್ಷಗಳ ನಾಯಕರ ಅನಿಸಿಕೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಮತದಾರರೇ ಹೆಚ್ಚು. ಹೀಗಾಗಿ ಈ ಸಮಾಜಕ್ಕೆ ಸೇರಿದವರಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ವಿಜಯ ಸಾಧಿಸಬಹುದೆಂಬ ಮಾತು ಈಗಾಗಲೇ ಕೇಳತೊಡಗಿದೆ.
ಸಿದ್ದರಾಮಯ್ಯ ಬೆಂಬಲಿಗರು ತಯಾರಿಲ್ಲ
ದೋಸ್ತಿ ಪಕ್ಷಗಳ ಒಕ್ಕಲಿಗ ನಾಯಕರ ಈ ಅನಿಸಿಕೆಯನ್ನು ಕಾಂಗ್ರೆಸ್ಸಿನ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರು ತಯಾರಿಲ್ಲ. ಸಿದ್ದರಾಮಯ್ಯ ಅವರ ಆಪ್ತ ಮಾಜಿ ಸಚಿವ ವಿಜಯಶಂಕರ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬೆಂಬಲಿಗರು ಕುರುಬ ಸಮಾಜದ ವಿಜಯಶಂಕರ್ ಪರ ಬ್ಯಾಟ್ ಮಾಡುತ್ತಿದ್ದರೆ, ಕಾಂಗ್ರೆಸ್ಸಿನ ಒಕ್ಕಲಿಗ ನಾಯಕರು ಈ ವಿಚಾರದಲ್ಲಿ ಜೆಡಿಎಸ್ ನಾಯಕರ ಲೆಕ್ಕಾಚಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಯಾರೇ ಕಣಕ್ಕಿಳಿಯಲಿ ಒಕ್ಕಲಿಗ ಸಮಾಜದವರಿಗೆ ಟಿಕೆಟ್ ನೀಡಿದರೆ ಮಾತ್ರ ದೋಸ್ತಿಗಳು ಸಂಘಟಿತವಾಗಿ ಹೋರಾಡಿ ಗೆಲುವು ಕಾಣಲು ಸಾಧ್ಯ ಎಂಬ ಅಭಿಪ್ರಾಯವ್ಯಕ್ತಪಡಿಸುತ್ತಾರೆ. ಆದರೆ ತಮ್ಮ ಈ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಲು ಅವರು ತಯಾರಿಲ್ಲ.
ಮೈಸೂರು-ಕೊಡಗು ಟಿಕೆಟ್ಗೆ ಬೇಡಿಕೆ ಇಟ್ಟ ಬಿಜೆಪಿ ಶಾಸಕ!
ಬಿಜೆಪಿಗೆ ಲಾಭವಾಗಲಿದೆ
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಇಲ್ಲಿನ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಮೂರು ಕ್ಷೇತ್ರಗಳನ್ನು ಗೆದ್ದಿದೆ. ಆದರೆ ಕಾಂಗ್ರೆಸ್ ಗೆದ್ದಿರುವುದು ಕೇವಲ ಒಂದು ಕ್ಷೇತ್ರ. ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಒಕ್ಕಲಿಗ ಸಮಾಜದವರು. ಕಾಂಗ್ರೆಸ್ ಈ ಕ್ಷೇತ್ರವನ್ನು ಪಡೆದ ಒಕ್ಕಲಿಗರನ್ನು ಹೊರತುಪಡಿಸಿ ಬೇರೆ ಸಮಾಜದವರಿಗೆ ಟಿಕೆಟ್ ನೀಡಿದರೆ ಜೆಡಿಎಸ್ ಸಾಂಪ್ರದಾಯಿಕ ಮತಗಳನ್ನು ಕಾಂಗ್ರೆಸ್ ಗೆ ಸೆಳೆಯುವುದು ಕಷ್ಟವಾಗುತ್ತದೆ. ಆಗ ಬಿಜೆಪಿಗೆ ಈ ಪರಿಸ್ಥಿತಿ ನೆರವಾಗಲಿದೆ.
ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ
ಒಕ್ಕಲಿಗರಿಗೆ ಟಿಕೆಟ್ ನೀಡಬೇಕು
ಒಕ್ಕಲಿಗ ಸಮಾಜದ ಪ್ರತಾಪ್ ಸಿಂಹ ಅವರನ್ನು ಮಣಿಸಬೇಕಾದರೆ ಅದೇ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂಬುದು ಕಾಂಗ್ರೆಸ್ ನ ಒಂದು ಬಣದ ಅಭಿಪ್ರಾಯ. ಇದನ್ನು ಜೆಡಿಎಸ್ ನ ಪ್ರಮುಖ ಒಕ್ಕಲಿಗ ನಾಯಕರು ಒಪ್ಪಿಕೊಳ್ಳುತ್ತಾರೆ. ಈ ಮಧ್ಯೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳು ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ. ಈ ಮಧ್ಯೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಮಾಜಿ ಸಂಸದ ವಿಜಯಶಂಕರ್, ಮಾಜಿ ಶಾಸಕ ವಾಸು, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಎಂ. ಲಕ್ಷ್ಮಣ್ ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಇವರೆಲ್ಲಾ ಟಿಕೆಟ್ ಆಕಾಂಕ್ಷಿಗಳು
ಜೆಡಿಎಸ್ ನಿಂದ ದೇವೇಗೌಡರ ಕುಟುಂಬದ ಸದಸ್ಯರ ಹೆಸರು ಸಹ ಈ ಪಂಕ್ತಿಯಲ್ಲೇ ಬರುತ್ತದೆ. ಈಗ ವಿಶ್ರಾಂತ ಕುಲಪತಿ ಕೆ. ಎಸ್ ರಂಗಪ್ಪ, ಉನ್ನತ ಶಿಕ್ಷಣ ಸಚಿವ ಜಿ. ಟಿ ದೇವೇಗೌಡರ ಅವರ ಪುತ್ರ ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ ಗೌಡ ಅವರ ಹೆಸರುಗಳು ಕೂಡ ಪ್ರಮುಖವಾಗಿ ಕೇಳಿ ಬರುತ್ತಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.