ಮೈಸೂರು : ಬೋರನಕಟ್ಟೆ ಹಾಡಿ ಜನರ ನಿದ್ದೆಗೆಡಿಸಿದ ಮಳೆಗಾಲ
ಮೈಸೂರು, ಜುಲೈ 23 : ಈ ಬಾರಿಯ ಮಳೆಗಾಲ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಅದರಲ್ಲೂ ಗುಡಿಸಲು ಕಟ್ಟಿಕೊಂಡು ಜೀವನ ಮಾಡುತ್ತಿರುವ ಗಿರಿಜನ ಕುಟುಂಬಗಳು ಮಳೆಯಿಂದಾಗಿ ಕಂಗೆಟ್ಟಿದ್ದಾರೆ. ಆದರೆ, ಇವರ ಕಷ್ಟ ಅರಣ್ಯರೋಧನವಾಗಿದೆ.
ಗಿರಿಜನರ ಕ್ಷೇಮಾಭಿವೃದ್ದಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ತಲುಪಬೇಕಾದವರಿಗೆ ತಲುಪುತ್ತಿಲ್ಲ. ಇದಕ್ಕೆ ಸಾಕ್ಷಿ ಪಿರಿಯಾಪಟ್ಟಣ ತಾಲೂಕಿನ ಅರಣ್ಯದ ಅಂಚಿನಲ್ಲಿರುವ ಬೋರನಕಟ್ಟೆ ಗಿರಿಜನ ಹಾಡಿಯ ಜನರ ಪರಿಸ್ಥಿತಿ.
ಕೊಡಗಿನಲ್ಲಿ ತಗ್ಗಿದ ಪ್ರವಾಹ ಮುಂದುವರೆದ ಮಳೆ
ಇಲ್ಲಿರುವ ಹಾಡಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, 350ಕ್ಕೂ ಹೆಚ್ಚು ಜನರಿದ್ದಾರೆ. ಇವರೆಲ್ಲರೂ ಜೇನುಕುರುಬ ಜನಾಂಗಕ್ಕೆ ಸೇರಿದವರು. ಇವರೆಲ್ಲರೂ ಕಳೆದ ನಾಲ್ಕು ದಶಕಗಳ ಹಿಂದೆ ಭೂ ಸೇನಾ ನಿಗಮದ ವತಿಯಿಂದ ನಿರ್ಮಿಸಲಾಗಿರುವ ಮನೆಯಲ್ಲೇ ವಾಸವಿದ್ದಾರೆ. ಈ ಮನೆಗಳು ಇದೀಗ ಶಿಥಿಲಾವಸ್ಥೆಗೆ ತಲುಪಿದ್ದು ಈ ಬಾರಿಯ ಮಳೆಗಾಲ ಇವರ ನಿದ್ದೆಗೆಡಿಸಿದೆ.
ಮಳೆ ಸುರಿದರೆ ಎಲ್ಲಿ ಮನೆ ನೆಲಕ್ಕುರುಳುತ್ತದೆಯೋ? ಎಂಬ ಭಯ ಇಲ್ಲಿನ ನಿವಾಸಿಗಳದ್ದು. ಕೆಲವರ ಮನೆ ಮಳೆಗೆ ನೀರು ಸೋರಿ ಬೀಳುವ ಹಂತ ತಲುಪಿದ್ದು ಆತಂಕದಲ್ಲಿ ಜನರು ದಿನಗಳನ್ನು ಕಳೆಯುತ್ತಿದ್ದಾರೆ.
ಮಡಿಕೇರಿಯಲ್ಲಿ ಮಳೆ ಹಾನಿ : 100 ಕೋಟಿ ಅನುದಾನ ಘೋಷಿಸಿದ ಸಿಎಂ
21 ಶತಮಾನಕ್ಕೆ ಕಾಲಿಟ್ಟಿದ್ದು, ಎಲ್ಲವೂ ಆಧುನೀಕರಣವಾಗುತ್ತಿರುವ ಈ ಕಾಲದಲ್ಲಿ ಇಲ್ಲಿನ ಹಾಡಿಯ ಜನ ಇನ್ನು ವಿದ್ಯುತ್ ಇಲ್ಲದೆ ಬದುಕುತ್ತಿದ್ದಾರೆ. ಇನ್ನು ಇಲ್ಲಿನ ಬೀದಿಗೆ ಅಳವಡಿಸಿರುವ ಸೋಲಾರ್ ದೀಪಗಳು ದುಸ್ಥಿತಿಗೀಡಾಗಿದ್ದು, ರಿಪೇರಿ ಮಾಡುವ ಗೋಜಿಗೆ ಹೋಗದ ಕಾರಣ ಕತ್ತಲು ಆವರಿಸಿದೆ.
ಹಾಡಿಯನ್ನು ಬಯಲು ಶೌಚ ಮುಕ್ತ ಮಾಡುವ ಉದ್ದೇಶದಿಂದ ಇರುವ ಅಲ್ಪ-ಸ್ವಲ್ಪ ಜಾಗದಲ್ಲಿ ಶೌಚಾಲಯ ನಿರ್ಮಿಸಲು ಗ್ರಾಮ ಪಂಚಾಯತಿಯಿಂದ ಅಡಿಪಾಯ ಹಾಗೂ ಗುಂಡಿಗಳನ್ನು ತೆಗೆದು ಆರು ತಿಂಗಳಾದರೂ ಶೌಚಾಲಯ ಮಾತ್ರ ನಿರ್ಮಾಣವಾಗಿಲ್ಲ.
ಅರಣ್ಯದಂಚಿನಲ್ಲಿ ಕಾಡಾನೆಗಳು ಬಾರದಂತೆ ಕಂದಕ ತೋಡಲಾಗಿದ್ದು, ಅದು ಮುಚ್ಚಿದ ಕಾರಣ ಆನೆಗಳು ಸೇರಿದಂತೆ ವನ್ಯಪ್ರಾಣಿಗಳು ನಾಡಿಗೆ ಬರುತ್ತಿದ್ದು ಕಷ್ಟಪಟ್ಟು ಬೆಳೆದ ಬೆಳೆಯನ್ನು ತಿಂದು ಹಾಳು ಮಾಡುತ್ತಿವೆ.
ಈ ಹಾಡಿಗೆ ಕಳೆದ 15ವರ್ಷಗಳ ಹಿಂದೆ ನಿರ್ಮಿಸಲಾದ ಕಾಂಕ್ರಿಟ್ ರಸ್ತೆ ಹಾಳಾಗಿದ್ದು ಇದರಲ್ಲೇ ಸರ್ಕಸ್ ಮಾಡುತ್ತಾ ಓಡಾಡಬೇಕಾಗಿದೆ. ಒಟ್ಟಾರೆ ಹತ್ತಾರು ಸಮಸ್ಯೆಗಳಿಂದ ನರಳುತ್ತಿರುವ ಬೋರನಕಟ್ಟೆ ಹಾಡಿಯತ್ತ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕಾಗಿದೆ.