40 ಕೋಟಿ ರುಪಾಯಿ ಆಫರ್ ರಹಸ್ಯ ಬಿಚ್ಚಿಟ್ಟ ಜೆಡಿಎಸ್ ಶಾಸಕ ಕೆ.ಮಹದೇವ್
ಮೈಸೂರು, ಜುಲೈ 2: ದೋಸ್ತಿ ಸರಕಾರದಿಂದ ಅದೆಷ್ಟು ಶಾಸಕರು ಹೊರಗೆ ಬರುತ್ತಾರೋ ಗೊತ್ತಿಲ್ಲ. ಆದರೆ ಹೊರಗೆ ಹೋಗುತ್ತಾರೆ ಎನ್ನುವ ಶಾಸಕರ ಪಟ್ಟಿ ಮಾತ್ರ ಆಗೊಮ್ಮೆ ಈಗೊಮ್ಮೆ ಬರುತ್ತಲೇ ಇದೆ. ಈ ಸುದ್ದಿಯಿಂದ ಮೈತ್ರಿ ಸರಕಾರದಲ್ಲಿ ಆತಂಕ ಶುರುವಾಗಿದ್ದರೆ, ಪ್ರತಿಪಕ್ಷ ಬಿಜೆಪಿಯಲ್ಲಿ ಸಂಭ್ರಮದ ವಾತಾವರಣ ಕಂಡುಬರುತ್ತಿದೆ.
ಬಳ್ಳಾರಿ ಜಿಲ್ಲೆ ವಿಜಯನಗರ ಶಾಸಕ ಆನಂದಸಿಂಗ್ ಮತ್ತು ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಒಂದಷ್ಟು ಅತೃಪ್ತರ ಹೆಸರು ಕೇಳಿ ಬಂದಿದ್ದವು. ಅದರಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಮಹದೇವ್ ಅವರ ಹೆಸರು ಕೂಡ ಇತ್ತು.
ಇದು ಬಿಜೆಪಿಯವರು ಆಪರೇಷನ್ ಕಮಲವನ್ನು ಸದ್ದಿಲ್ಲದೆ ಮಾಡುತ್ತಿದ್ದಾರಾ ಎಂಬ ಸಂಶಯಕ್ಕೆ ಕಾರಣವಾಗಿತ್ತು. ಇದೀಗ ಈ ವಿಚಾರಕ್ಕೆ ಪೂರಕ ಎಂಬಂತೆ ಬಿಜೆಪಿಯಿಂದ 40 ಕೋಟಿ ರುಪಾಯಿ ಆಫರ್ ಬಂದಿತ್ತು ಎಂದು ಸ್ವತಃ ಕೆ.ಮಹದೇವ್ ಅವರೇ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ರಮೇಶ್ ಜಾರಕಿಹೊಳಿ ಮುಂದೆ 4 ಪ್ರಶ್ನೆ ಇಟ್ಟ ಅತೃಪ್ತ ಶಾಸಕರು!
ನಾನು ಬಿಜೆಪಿಗೆ ಸೇರುತ್ತೇನೆ ಎಂಬ ವದಂತಿ ಹರಡಿದ್ದು, ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ ಹೋಗಲ್ಲ. ಜೆಡಿಎಸ್ ಗೆ ನಿಷ್ಠಾವಂತನಾಗಿದ್ದೇನೆ ಎನ್ನುವ ಮೂಲಕ ಪಕ್ಷದ ನಾಯಕರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರಾ ಎಂಬ ಸಂಶಯ ಮೂಡುವಂತೆ ಮಾಡಿದ್ದಾರೆ.
ಮೈತ್ರಿ ಸರಕಾರದಲ್ಲಿ ಪವರ್ ಫುಲ್ ಆಗಲು ಯತ್ನ
ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಹೇಳಿಕೆಗಳನ್ನು ನೀಡಿದರೆ ಮಾತ್ರ ಮೈತ್ರಿ ಸರಕಾರದಲ್ಲಿ ಒಂದಷ್ಟು ಪವರ್ ಫುಲ್ ಆಗಲು ಸಾಧ್ಯ. ಹೀಗಾಗಿ ಶಾಸಕ ಕೆ.ಮಹದೇವ್ ಆಫರ್ ವಿಚಾರವನ್ನು ಸಾರ್ವಜನಿಕವಾಗಿ ಹೇಳಿದ್ದಾರೆಯೇ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಹೇಳಿರುವಂತೆ ನಾನು ಕಲುಷಿತ ರಾಜಕಾರಣಕ್ಕೆ ಕೈ ಹಾಕಿ ಹೊಲಸು ಮಾಡಿಕೊಂಡು, ಕ್ಷೇತ್ರದ ಜನಕ್ಕೆ ದ್ರೋಹ ಮಾಡಲು ಮನಸ್ಸಾಕ್ಷಿ ಒಪ್ಪುತ್ತಿಲ್ಲ. ಕೆಲವು ಮಾಧ್ಯಮಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಪಕ್ಷ ಸೇರುತ್ತಾರೆಂದು ಪ್ರಚಾರ ಮಾಡಲಾಗುತ್ತಿದೆ. ನನಗೆ ಬಿಜೆಪಿ ಪಕ್ಷದಿಂದ 40 ಕೋಟಿ ರುಪಾಯಿ ಆಮಿಷವೊಡ್ಡಿದ್ದು ನಿಜ. ಅಲ್ಲದೆ ರಮೇಶ್ ಜಾರಕಿಹೊಳಿ ಕೂಡ ನನ್ನ ಕಣ್ಣ ಮುಂದೆಯೇ ಬಿಜೆಪಿ ಪಕ್ಷಕ್ಕೆ ಸೇರಲು ಎಂಬತ್ತು ಕೋಟಿ ರುಪಾಯಿ ಬೇಡಿಕೆಯಿಟ್ಟಿದ್ದರು ಎಂಬ ಬಾಂಬ್ ಸಿಡಿಸಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದಿದ್ದಾರೆ.
ಮಾಧ್ಯಮಗಳಲ್ಲಿ ಬರುತ್ತಿರುವುದು ಸುಳ್ಳು ಸುದ್ದಿ
ನಾನು ಯಾವುದೇ ಕಾರಣಕ್ಕೂ ಬೇರೆ ಪಕ್ಷ ಸೇರುವುದಿಲ್ಲ. ಆದ್ದರಿಂದ ಮಾಧ್ಯಮದಲ್ಲಿ ಬರುತ್ತಿರುವುದು ಸುಳ್ಳು ಸುದ್ದಿಯಾಗಿದೆ. ನನಗೆ ಆಗದವರು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾಗಿ ಒಂದು ವರ್ಷವಷ್ಟೆ ಆಗಿದೆ. ಸಾಧ್ಯವಾದಷ್ಟು ಸರಕಾರದ ವತಿಯಿಂದ ಅನುದಾನವನ್ನು ತಂದಿದ್ದು, ಗ್ರಾಮೀಣ ಭಾಗದ ಜನತೆಗೆ ಮೂಲಸೌಲಭ್ಯವನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಆದರೂ ಜನತೆ ನನ್ನನ್ನು ದೂರುತ್ತಿದ್ದಾರೆ ಎನ್ನುವ ಮೂಲಕ ಸಿಂಪಥಿ ಗಳಿಸುವ ಪ್ರಯತ್ನ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ವೆಂಕಟೇಶ್ ಗೆ ಚುಚ್ಚಿದ್ದಾರೆ
ಈ ಮಧ್ಯೆ ಮಾತನಾಡಿದ ಅವರು, ಹಿಂದೆ ಇದ್ದ ಸರಕಾರದಲ್ಲಿ ಶಾಸಕರಾಗಿ ಇದ್ದವರು ತಾಲೂಕಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನಸಾಮಾನ್ಯರ ಬಗ್ಗೆ ಚಿಂತಿಸಿದ್ದರೆ ಸಾಧ್ಯವಾದಷ್ಟು ಸುಧಾರಣೆ ಕಾಣಬಹುದಿತ್ತು. ಆದರೆ ಇವರು ಬೊಜ್ಜು ಬೆಳೆಸಿಕೊಂಡು ಐಷಾರಾಮಿ ಜೀವನ ಅನುಭವಿಸುತ್ತಾ ಕಾಲ ಹರಣ ಮಾಡಿದ್ದರಿಂದ ಇಂದು ಎಷ್ಟೇ ಅನುದಾನ ತಂದರೂ ತಾಲೂಕಿನ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ.ವೆಂಕಟೇಶ್ ಅವರನ್ನು ಇದೇ ಸಂದರ್ಭ ಚುಚ್ಚಿದ್ದಾರೆ.
ಹಾವು-ಮುಂಗುಸಿಯಂತೆ ಜೆಡಿಎಸ್-ಕಾಂಗ್ರೆಸ್ ಕಿತ್ತಾಟ
ಹಾಗೆ ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರಕಾರವಿದ್ದರೂ ಪಿರಿಯಾಪಟ್ಟಣದಲ್ಲಿ ಮಾತ್ರ ಇವೆರಡು ಪಕ್ಷಗಳ ನಾಯಕರು, ಕಾರ್ಯಕರ್ತರು ಹಾವು- ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ. ಈ ನಡುವೆ ಬಿಜೆಪಿಯಿಂದ ನನಗೆ 40 ಕೋಟಿ ರುಪಾಯಿ ಆಫರ್ ಬಂದಿತ್ತು ಎಂದು ಹೇಳಿರುವುದು ಮಾತ್ರ ಚರ್ಚೆಯನ್ನು ಹುಟ್ಟು ಹಾಕಿದೆ. ಮುಂದಿನ ದಿನಗಳಲ್ಲಿ ಇನ್ನು ಏನೆಲ್ಲ ಬೆಳವಣಿಗೆಗಳು ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ರಾಜ್ಯ ಸರಕಾರವಂತೂ ದಿನದಿನಕ್ಕೆ ಹೊಸ ಗೊಂದಲಕ್ಕೆ ಎಡೆ ಮಾಡಿಕೊಡುತ್ತಿರುವುದು ಸತ್ಯ.