ಮೈಸೂರು; ಮನೆಗೆಲಸ ಮಾಡಿಕೊಂಡು ಮನೆಗೇ ಹಾಕಿದ ಕನ್ನ
ಮೈಸೂರು, ಅಕ್ಟೋಬರ್ 20: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಹತ್ತು ತಿಂಗಳಿನಿಂದ ಗೌಪ್ಯವಾಗಿ ಚಿನ್ನಾಭರಣ ಕದಿಯುತ್ತಿದ್ದ ಖದೀಮನನ್ನು ನಂಜನಗೂಡು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಹೇಮಂತ್ ಕುಮಾರ್ ಬಂಧಿತ ಆರೋಪಿ. ಈತ ನಂಜನಗೂಡು ತಾಲೂಕಿನ ಯರಗನಹಳ್ಳಿ ಗ್ರಾಮದವನಾಗಿದ್ದು, ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಶಿವನಾಗು ಎಂಬುವವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ. ಕಳೆದ 10 ತಿಂಗಳಿನಿಂದ ಮನೆಯವರಿಗೆ ಗೊತ್ತಾಗದಂತೆ ಈತ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ರಾಮನಗರ: ದ್ವಿಚಕ್ರ ವಾಹನದಲ್ಲಿದ್ದ 300 ಗ್ರಾಂ ಚಿನ್ನ ದೋಚಿದ ಕಳ್ಳರು
ಮನೆಯಲ್ಲಿ ಹೀಗೆ ಕಳ್ಳತನ ಆಗುತ್ತಿರುವ ಕುರಿತು ಮನೆ ಮಾಲೀಕ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು, ಮನೆಗೆಲಸ ಮಾಡುತ್ತಿದ್ದ ಹೇಮಂತ್ ನನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಒಂದೊಂದೇ ಒಡವೆಗಳನ್ನು ಕದ್ದು ಸಾಗಿಸುತ್ತಿದ್ದುದಾಗಿ ತಿಳಿಸಿದ್ದಾನೆ. ಬಂಧಿತನಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ, 500 ಗ್ರಾಂ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.