ಮುಂಬೈ ದುಡ್ಡು, ಕಾಂಗ್ರೆಸ್ಗೆ ವೋಟು: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಮೈಸೂರು, ಡಿಸೆಂಬರ್ 3: ಉಪ ಚುನಾವಣೆಯಲ್ಲಿ ಜನರು ಬಿಜೆಪಿಯ ದುಡ್ಡಿಗೆ ಕರಗುವುದಿಲ್ಲ. ಎಲ್ಲಾ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರು ಸಿಕ್ಕಾಪಟ್ಟೆ ದುಡ್ಡು ಕೊಟ್ಟಿದ್ದು, ಎಲ್ಲಾ ಕ್ಷೇತ್ರದಲ್ಲೂ ಬೇಕಾದಷ್ಟು ಹಣ ಖರ್ಚು ಮಾಡುವ ಜೊತೆಗೆ ಮತದಾರರಿಗೆ ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದ್ದಾರೆ. ಆದರೆ ಜನ ದುಡ್ಡಿಗೆ ಕರಗುವುದಿಲ್ಲ" ಎಂದರು.
ಬಿಜೆಪಿ ದುಡ್ಡು, ಕಾಂಗ್ರೆಸ್ ಗೆ ವೋಟು
ನಾನು ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ದುಡ್ಡು, ಕಾಂಗ್ರೆಸ್ಗೆ ವೋಟು ಅಂತಲೇ ಹೇಳಿದ್ದೇನೆ. "ಮುಂಬೈ ದುಡ್ಡು, ಕಾಂಗ್ರೆಸ್ಗೆ ವೋಟು" ಎಂದು ವ್ಯಂಗ್ಯವಾಡಿದ ಅವರು, ಪ್ರಚಾರದ ಕೊನೆಯ ದಿನಕ್ಕೆ ತಲುಪಿದ್ದೇವೆ. ಎಷ್ಟು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎನ್ನುವುದು ಪ್ರಶ್ನೆಯೇ ಅಲ್ಲ ಎಂದರು.
15 ಕ್ಷೇತ್ರದ ಉಪ ಚುನಾವಣೆ; ಬಿಜೆಪಿ ಆಂತರಿಕ ಸಮೀಕ್ಷೆ ವರದಿ
ಅವರಿಗೆ ಇನ್ನೂ ಬುದ್ಧಿ ಬಂದಿಲ್ಲ
ಸಿದ್ದರಾಮಯ್ಯ ಕಾಂಗ್ರೆಸ್ ವೈಟ್ ವಾಶ್ ಮಾಡುತ್ತಾರೆ ಎಂಬ ಸಂಸದ ವಿ. ಶ್ರೀನಿವಾಸ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಶ್ರೀನಿವಾಸ್ ಪ್ರಸಾದ್ಗೆ ಇನ್ನೂ ಬುದ್ದಿ ಬಂದಿಲ್ಲ. ನಂಜನಗೂಡು ಉಪ ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದು ಯಾರು? ಬಿಜೆಪಿಯಿಂದ ಸ್ಪರ್ಧೆ ಮಾಡಿ ನಂಜನಗೂಡಿನಲ್ಲಿ ಸೋತರು. ಅವರ ಎಲ್ಲಾ ಹೇಳಿಕೆಗಳಿಗೂ ಉತ್ತರ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
15 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದರ್ಥ
ಮಲ್ಲಿಕಾರ್ಜುನ ಖರ್ಗೆ ಡಿಸೆಂಬರ್ 9ರ ನಂತರ ಸಿಹಿ ಹಂಚುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಹಿ ಹಂಚುತ್ತಾರೆ ಎಂದರೆ 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಅಂತ ಅರ್ಥ. ಕುಮಾರಸ್ವಾಮಿ ಏನು ಭಾಷಣ ಮಾಡಿದ್ದಾರೋ ಗೊತ್ತಿಲ್ಲ. ನಿಮಗೆ ಬೇಕಾದಂತೆ ಅರ್ಥ ಮಾಡಿಕೊಳ್ಳಬೇಡಿ ಎಂದು ಮಾಧ್ಯಮದವರ ವಿರುದ್ಧ ಗರಂ ಆದ ಸಿದ್ದರಾಮಯ್ಯ, ದಲಿತ ಮುಖ್ಯಮಂತ್ರಿ ವಿಚಾರ ಅಲ್ಲಗಳೆದರಲ್ಲದೇ, ಈ ರೀತಿಯ ಯಾವುದೇ ವಿದ್ಯಮಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಸುಧಾಕರ್ ಒಂಥರಾ ಊಸರವಳ್ಳಿ ಇದ್ದಂಗೆ ಎಂದ ಸಿದ್ದರಾಮಯ್ಯ
ಅನರ್ಹರ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ
ಉಪ ಚುನಾವಣೆಯಲ್ಲಿ ಅನರ್ಹರನ್ನು ತಿರಸ್ಕರಿಸಿ, ಅರ್ಹರಿಗೆ ಮತ ನೀಡಿ. ಈ ಚುನಾವಣೆಯ ಫಲಿತಾಂಶ ಪಕ್ಷಾಂತರಿಗಳಿಗೆ ಒಂದು ಪಾಠವಾಗಲಿ, ದೇಶಕ್ಕೆ ಮಾದರಿಯಾಗಲಿ, ದೇಶದ ಜನರು ಕರ್ನಾಟಕದ ಬಗ್ಗೆ ಹೆಮ್ಮೆ ಪಡುವಂತಾಗಲಿ ಎಂದು ಸಿದ್ದರಾಮಯ್ಯ ನಿನ್ನೆ ಟ್ವೀಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಆಪ್ತವಲಯದಲ್ಲಿದ್ದು, ಈಗ ಪಕ್ಷ ತೊರೆದು ಹೋಗಿರುವ ಪ್ರತಿಯೊಬ್ಬ ಶಾಸಕರ ಮೇಲೂ ವಾಗ್ದಾಳಿ ನಡೆಸಿದ್ದರು