ಹನಿಟ್ರ್ಯಾಪ್ ಜಾಲ; ಹೆದರದೇ ಮಾಹಿತಿ ನೀಡಿ ಎಂದ ಡಿಸಿಪಿ
ಮೈಸೂರು, ನವೆಂಬರ್ 21: ಈಚೆಗೆ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ, ಬ್ಲ್ಯಾಕ್ ಮೇಲ್ ಮಾಡಿ ಶ್ರೀಮಂತರಿಂದ ಹಣ ಕೀಳುವ ಪ್ರಕರಣ ಹೆಚ್ಚಾಗುತ್ತಿದ್ದು, ಈ ಜಾಲಕ್ಕೆ ಸಿಲುಕಿದವರು ಭಯಪಡದೇ ಪೊಲೀಸರಿಗೆ ಮಾಹಿತಿ ನೀಡಿ. ಇಲ್ಲವೆಂದರೆ ಇದೇ ರೀತಿ ನಡೆಯುತ್ತಲೇ ಇರುತ್ತದೆ ಎಂದು ಡಿಸಿಪಿ ಡಾ. ಎ.ಎನ್. ಪ್ರಕಾಶ್ ಗೌಡ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿರಿಯಾಪಟ್ಟಣದ ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಅವರಿಂದ 31.30 ಲಕ್ಷ ರೂ ವಸೂಲಿ ಮಾಡಿದ್ದಾರೆ. ಅವರು ಮುಂಚೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಹಣ ಕಳೆದುಕೊಳ್ಳುತ್ತಿರಲಿಲ್ಲ. ಇಂತಹ ಘಟನೆಗಳಿಗೆ ಹೆದರದೇ ಮಾಹಿತಿ ನೀಡಿ ಎಂದು ಹೇಳಿದರು.
ಮೈಸೂರಿನಲ್ಲಿ ಶ್ರೀಮಂತರ ಹನಿಟ್ರ್ಯಾಪ್ ಜಾಲ; ಐವರ ಬಂಧನ
ಶುಕ್ರವಾರ ಮೈಸೂರಿನಲ್ಲಿ ಸುಲಭದಲ್ಲಿ ಹಣ ಗಳಿಸುವ ಉದ್ದೇಶದಿಂದ ಯುವತಿಯರನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ನಲ್ಲಿ ತೊಡಗಿದ್ದ ಐವರನ್ನು ಇಲ್ಲಿನ ಕುವೆಂಪು ನಗರ ಪೊಲೀಸರು ಬಂಧಿಸಿದ್ದರು. ಬಂಧಿತರು ಶ್ರೀಮಂತ ವ್ಯಕ್ತಿಗಳಾಗಿದ್ದು, ಎಲ್ಲರೂ ಪಿರಿಯಾಪಟ್ಟಣದವರು ಎಂದು ತಿಳಿದುಬಂದಿತ್ತು. ಇವರ ಜಾಲಕ್ಕೆ ಸಿಲುಕಿ ಕಿರುಕುಳ ತಾಳಲಾರದ ವೈದ್ಯರೊಬ್ಬರು ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವ್ಯಕ್ತಿಯ ವಿಡಿಯೋ ಇಟ್ಟುಕೊಂಡು ಆರೋಪಿಗಳು 31 ಲಕ್ಷ ರೂ. ಹಣ ವಸೂಲಿ ಮಾಡಿದ್ದರು.
ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಮಾರ್ಗದರ್ಶನದಲ್ಲಿ ತಂಡ ರಚಿಸಿದ್ದರು. ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ನಡೆಯುತ್ತಿದೆ. ಈ ಗ್ಯಾಂಗ್ ನಿಂದ ಬ್ಲ್ಯಾಕ್ ಮೇಲ್ ಆದವರು ಪೊಲೀಸರಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.