ಆಂಬ್ಯುಲೆನ್ಸ್ ಗಾಗಿ ಪ್ರತಿಭಟನೆ; ಮದ್ದೂರಿನಲ್ಲಿ ಪೊಲೀಸರಿಂದ ಲಾಠಿ ಪ್ರಹಾರ
ಮೈಸೂರು, ಜುಲೈ 1: ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ಚಾಲಕ ಇಲ್ಲದ ಕಾರಣ ಆಕ್ರೋಶಗೊಂಡ ಸಾರ್ವಜನಿಕರು ಆಂಬುಲೆನ್ಸ್ ಜಖಂಗೊಳಿಸಲು ಯತ್ನಿಸಿದ ಘಟನೆ ಮದ್ದೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಅಕ್ರಮವೆಸಗುವ ಪ್ರವೃತ್ತಿಗೆ ತಡೆ: ಹೊಸ ರೂಪದಲ್ಲಿ 108 ಆಂಬ್ಯುಲೆನ್ಸ್
ಸಾರ್ವಜನಿಕರು ಆಂಬ್ಯುಲೆನ್ಸ್ ಜಖಂಗೊಳಿಸಲು ಮುಂದಾದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಮದ್ದೂರು ಸಮೀಪದ ಶಿವಪುರ ಮೇಲ್ಸೇತುವೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದೇಶಹಳ್ಳಿ ಗ್ರಾಮದ ಸುರೇಶ್ ಸಾವನ್ನಪ್ಪಿದ್ದರು. ದಾಸ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಗಾಯಗೊಂಡ ದಾಸ ಅವರನ್ನು ಸಾರ್ವಜನಿಕರು ತಕ್ಷಣ ಮದ್ದೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ತಕ್ಷಣ ಮಂಡ್ಯದ ಮಿಮ್ಸ್ ಗೆ ಕರೆದೊಯ್ಯಲು ಸೂಚನೆ ನೀಡಿದ ಹಿನ್ನೆಲೆ, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ.
ಈ ವೇಳೆ ಆಂಬುಲೆನ್ಸ್ ಇದ್ದರೂ ಚಾಲಕ ಇಲ್ಲದಿರುವುದಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು. ಸಿಟ್ಟಿಗೆದ್ದ ಪ್ರತಿಭಟನಾಕಾರರು ಆಂಬುಲೆನ್ಸನ್ನು ಜಖಂಗೊಳಿಸಲು ಮುಂದಾಗಿದ್ದಾರೆ. ಕೆಲವರು ಕಲ್ಲು ತೂರಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ಗಂಭೀರ ಸ್ವರೂಪ ಬೆಳೆಯುತ್ತಿದ್ದಂತೆ ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದರು. ನಂತರ ಸ್ಥಳಕ್ಕೆ ಬಂದ ಚಾಲಕ, ಗಾಯಾಳುವನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.