ಮೈಸೂರಿನಲ್ಲಿ ಕೇಳಿಬಂದ ಆ ನಿಗೂಢ ಶಬ್ದದ ರಹಸ್ಯ ಬಯಲಾಯಿತು!
Recommended Video
ಮೈಸೂರು, ಸೆಪ್ಟೆಂಬರ್.28: ಮೈಸೂರಿನ ಜನ ಸೆ.25ರಂದು ಕೇಳಿ ಬಂದ ನಿಗೂಢ ಶಬ್ದದಿಂದ ಬೆಚ್ಚಿ ಬಿದ್ದಿದ್ದರು. ಇನ್ನು ಕೆಲವರು ದಸರಾ ಗಜಪಡೆಗಳಿಗೆ ನಡೆಸಿದ ಸಿಡಿಮದ್ದಿನ ತಾಲೀಮು ಎಂದು ನಂಬಿಕೊಂಡು ಸುಮ್ಮನಾಗಿದ್ದರು. ಆದರೆ ಆ ಶಬ್ದ ಇದ್ಯಾವುದೂ ಅಲ್ಲ.
ಇಷ್ಟಕ್ಕೂ ಈ ಶಬ್ದ ಎಲ್ಲಿಂದ ಬಂತು ಎಂಬುದೇ ಗೊತ್ತಿಲ್ಲ ಎಂದು ಜನ ಮಾತನಾಡಿಕೊಳ್ಳಲು ಶುರು ಮಾಡಿದ ಕೂಡಲೇ ಅದರ ಸುತ್ತಲೂ ಊಹಾಪೋಹದ ಕಥೆಗಳು ಗಿರಕಿಹೊಡೆಯಲಾರಂಭಿಸಿದವು. ಕೊಡಗಿನಲ್ಲಿ ಇದೇ ರೀತಿ ಶಬ್ದ ಬಂದ ಬಳಿಕ ಜಲಪ್ರಳಯವಾಯಿತು.
ಬೆಂಗಳೂರಿನಲ್ಲಿಯೂ ನಿಗೂಢ ಶಬ್ದ ಕೇಳಿಬಂದಿತ್ತು. ಅಲ್ಲೂ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತವಾಯಿತು. ಇದೀಗ ಮೈಸೂರು ಸರದಿ ಇಲ್ಲಿ ಇನ್ನೇನು ಅನಾಹುತ ಸಂಭವಿಸಲಿದೆಯೋ? ಎಂಬಂತಹ ಸುದ್ದಿಗಳು ಹರಿದಾಡಿದವು. ಇದೊಂದು ರೀತಿಯ ಆತಂಕದ ವಾತಾವರಣಕ್ಕೆ ದಾರಿ ಮಾಡಿಕೊಟ್ಟಿದಂತು ನಿಜ.
ಜೋಡುಪಾಲ ನಿಗೂಢ ಸ್ಫೋಟ ಭೇದಿಸಲಿಕ್ಕೆ ಹೋದಾಗ ಒನ್ಇಂಡಿಯಾಗೆ ಕಂಡದ್ದು...
ಆದರೆ ಇದೀಗ ಅವತ್ತು ಕೇಳಿ ಬಂದ ನಿಗೂಢ ಶಬ್ದಕ್ಕೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತನ್ನ ವರದಿ ಮೂಲಕ ಉತ್ತರ ನೀಡಿದೆ ಅಲ್ಲದೆ ಆತಂಕಕ್ಕೂ ತೆರೆ ಎಳೆದಿದೆ. ಅದೇನೆಂದು ತಿಳಿಯಲು ಈ ಲೇಖನ ಓದಿ...
ಎರಡು ಬಾರಿ ಸ್ಫೋಟ
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಕಾವಲ್ ಪ್ರದೇಶ ವ್ಯಾಪ್ತಿಯಲ್ಲಾದ ಸ್ಫೋಟದಿಂದ ಆ ಶಬ್ದ ಉಂಟಾಗಿಯಂತೆ.
ಕೆಆರ್ ಎಸ್ ಜಲಾಶಯದಿಂದ 10.5 ಕಿ.ಮೀ. ದೂರದ ವ್ಯಾಪ್ತಿಯಲ್ಲಿರುವ ಬೇಬಿ ಬೆಟ್ಟದ ಕಾವಲು ಪ್ರದೇಶದಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಸೆ.25ರಂದು ಮಧ್ಯಾಹ್ನ 2.37ರ ಸುಮಾರಿಗೆ 6 ಸೆಕೆಂಡ್ ಅವಧಿಯಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಭೂಮಿಯಡಿಯಿಂದ ಕೇಳಿ ಬರುತ್ತಿರುವ ಶಬ್ದ: ನಿರ್ಲಕ್ಷ್ಯ ಬೇಡ ಎಂದ ತಜ್ಞರು
ನಿಷೇಧಿತ ಸ್ಫೋಟಕಗಳು ಹೆಚ್ಚು ಬಳಕೆ
ಈ ಮಾಹಿತಿ ಕೆಆರ್ ಎಸ್ ಸಮೀಪವಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ದಾಖಲಾಗಿದ್ದು, ಸ್ಫೋಟ ಸಂಭವಿಸಿದ ಸ್ಥಳದ ಉಪಗ್ರಹ ಚಿತ್ರ ಹಾಗೂ ಸ್ಫೋಟದಿಂದ ಉಂಟಾದ ಕಂಪನದ ಪ್ರಮಾಣವನ್ನು ಚಿತ್ರ ಸಹಿತ ವರದಿಯಲ್ಲಿ ತಿಳಿಸಲಾಗಿದೆ.
ಭಾರೀ ಶಬ್ದಕ್ಕೆ ನಿಷೇಧಿತ ಸ್ಫೋಟಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿರುವುದೇ ಕಾರಣವಾಗಿದೆ ಎಂದು ಹೇಳಲಾಗಿದ್ದು, ಕೆಆರ್ ಎಸ್ ಸುತ್ತ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಸ್ಫೋಟದಿಂದ ಅಣೆಕಟ್ಟೆಗೆ ಅಪಾಯ ಉಂಟಾಗಿದೆಯೇ ಇಲ್ಲವೇ ಎಂಬುದನ್ನು ಈಗಲೇ ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳುವುದು ಉತ್ತಮ.
ಕೊಡಗು ಗಡಿಭಾಗದಲ್ಲಿ ಭೂಮಿಯಡಿಯಿಂದ ಮತ್ತೆ ಕೇಳಿಬರುತ್ತಿದೆ ನದಿ ಹರಿಯುವ ಶಬ್ದ!
ಜಿಲ್ಲಾಧಿಕಾರಿಗೆ ನಿರ್ದೇಶನ
ಕೃಷ್ಣರಾಜಸಾಗರ ಜಲಾಶಯ ನಿರ್ಮಾಣಗೊಂಡು 80 ವರ್ಷ ಕಳೆದಿದೆ. ಈ ಅಣೆಕಟ್ಟೆಯಿಂದ ನೂರಾರು ನಗರಗಳಿಗೆ ನೀರು ಪೂರೈಕೆಯಾಗುತ್ತಿದೆ. ಕರ್ನಾಟಕ ಹಾಗೂ ತಮಿಳುನಾಡಿನ ರೈತರ ವ್ಯವಸಾಯಕ್ಕೆ ಅನುಕೂಲ ಕಲ್ಪಿಸಿಕೊಟ್ಟಿದೆ.
ಆದ್ದರಿಂದ ಗಣಿಗಾರಿಕೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸುವುದು ಉತ್ತಮ ಎಂದು ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಅಕ್ರಮ ಕಲ್ಲು ಗಣಿಗಾರಿಕೆಗೆ ನಿಷೇಧ ಹೇರಿ
ಕೆಆರ್ ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಅಪಾಯವಿರುವ ಬಗ್ಗೆ ಪದೇ ಪದೇ ವರದಿಗಳು ಬರುತ್ತಿವೆ. ಆದರೂ, ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಜನಪ್ರತಿನಿಧಿಗಳೂ ಸೇರಿದಂತೆ ಜಿಲ್ಲಾಡಳಿತ ಕಾಳಜಿ ತೋರುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬೇಬಿಬೆಟ್ಟದ ಕಾವಲ್ನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ನಿಷೇಧ ಹೇರಲು ಮುಂದಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.