ಮೈಸೂರಿನಿಂದ ನಡೆದುಕೊಂಡೇ ಬಳ್ಳಾರಿ ಕಡೆ ಸಾಗಿದ ಕೂಲಿ ಕಾರ್ಮಿಕರು
ಮೈಸೂರು, ಮಾರ್ಚ್ 27: ಬಳ್ಳಾರಿಯ ಜಿಲ್ಲೆಯ ಅಂದಾಜು 50 ಕೂಲಿಕಾರ್ಮಿಕರು ಮೈಸೂರಿನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದು, ನಡೆದುಕೊಂಡು ಊರು ಸೇರಲು ಶುಕ್ರವಾರ ಪ್ರಯಾಣ ಶುರು ಮಾಡಿದ್ದಾರೆ.
ಮಾರ್ಚ್ 22ರಿಂದ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಾಗಿದ್ದು, ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಹೊರಡಿಸಿ ಜನರ ಸಂಚಾರ, ವಾಹನ ಸಂಚಾರ ಸೇರಿ ಅನೇಕ ನಿರ್ಬಂಧ ಹೇರಲಾಗಿದೆ. ಇದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅಂತೆಯೇ ಕೂಲಿಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಿದೆ.
ಕೊರೊನಾ; ರೈತರಿಂದ ನೇರವಾಗಿ ಮನೆ ಬಾಗಿಲಿಗೆ ತರಕಾರಿ
ಇದು ಕೈಯಲ್ಲಿರುವ ಕೆಲಸವನ್ನು ಕಿತ್ತುಕೊಂಡಿದೆ. ಇರುವ ಚೂರುಪಾರು ದುಡ್ಡು ಕೂಡ ಕರಗಿದೆ. ಹೋಟೆಲ್, ಬೀದಿಬದಿಯ ಫಾಸ್ಟ್ಫುಟ್ ಅಂಗಡಿಗಳು ಬಂದ್ ಆಗುವ ಮೂಲಕ ದಿನಗೂಲಿ ಕಾರ್ಮಿಕರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದೆ. ಹೀಗಾಗಿ, ತಮ್ಮ ಊರು ಕಡೆ ಹೋಗಲು ಹಾತೊರೆಯುತ್ತಿದ್ದಾರೆ. ಇದಕ್ಕೆ 50 ಕಾರ್ಮಿಕರು ಹೊರತಲ್ಲ.
ಇವರೆಲ್ಲ ಬಳ್ಳಾರಿ ಜಿಲ್ಲೆಯವರು
ಇವರೆಲ್ಲ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಟಿ.ಎಸ್.ಕುಡ್ಲೂರು ಗ್ರಾಮದವರು. ಕೆಲಸ ಅರಸಿ ಅಲ್ಲಿಯಿಂದ ಮೈಸೂರಿಗೆ ಬಂದಿದ್ದಾರೆ. ಈ ಪೈಕಿ ಶೇ.70ರಷ್ಟು ಜನರು ಗಾರೆ ಕೆಲಸ ಮಾಡುತ್ತಿದ್ದಾರೆ. ಉಳಿದವರು ಕಂಪನಿಗಳಲ್ಲಿ ಸಣ್ಣಪುಟ್ಟ ಕೆಲಸ, ಡ್ರೈವರ್ ಕಾರ್ಯ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ, ಲಾಕ್ಡೌನ್ ಇವರ ಜೀವನದ ನೆಮ್ಮದಿಯನ್ನೇ ಕೆಡಿಸಿದೆ.
ಇಲ್ಲಿ ಮಾಡಲು ಕೆಲಸವಿಲ್ಲ. ಕೈಯಲ್ಲಿರುವ ಹಣವೂ ಖಾಲಿ ಆಗಿದೆ. ಊಟಕ್ಕೆ ಪರಿತಪ್ಪಿಸುವಂತಾಗಿದೆ. ಈ ತ್ರಿಶಂಕು ಸ್ಥಿತಿಯಿಂದ ತಪ್ಪಿಸಿಕೊಂಡು ಇಲ್ಲಿಯಿಂದ ಊರಿಗೆ ಹೋಗಲು ಕಷ್ಟಕರವಾಗಿದೆ. 5 ದಿನಗಳ ಕಾಲ ಇಲ್ಲಿ ಊಟ, ತಿಂಡಿವಿಲ್ಲದೆ ನರಕಯಾತನೆ ಅನುಭವಿಸಿರುವ ಕಾರ್ಮಿಕರು, 446 ಕಿಲೋಮೀಟರ್ ದೂರದಲ್ಲಿರುವ ತಮ್ಮ ಊರಿಗೆ ಹೋಗಲು ಅಣಿಯಾಗಿದ್ದಾರೆ.
9ಗಂಟೆ ನಡೆದುಕೊಂಡೆ ಪ್ರಯಾಣ ಶುರು ಮಾಡಿದ್ದಾರೆ
ಇವರೆಲ್ಲ ನೆಲೆಸಿರುವ ಮೈಸೂರಿನ ಹೊರ ಅಂಚಿನ ಗ್ರಾಮದ ದಡ್ಡದಹಳ್ಳಿಯಿಂದ ಶುಕ್ರವಾರ ಬೆಳಗ್ಗೆ 9ಗಂಟೆ ನಡೆದುಕೊಂಡೆ ಪ್ರಯಾಣ ಶುರು ಮಾಡಿದ್ದಾರೆ. ಉಪಾಹಾರ, ಮಧ್ಯಾಹ್ನ ಊಟ ಮಾಡಿಲ್ಲ. ಬಾಳೆಹಣ್ಣು ತಿಂದು ಉರಿಬಿಸಿನಲ್ಲಿ ಹೆಜ್ಜೆ ಹಾಕುತ್ತಿದ್ದರು. ರಿಂಗ್ರೋಡ್ ಮೂಲಕ ದಟ್ಟಗಳ್ಳಿ ಮಾರ್ಗವಾಗಿ ವಿಜಯನಗರಕ್ಕೆ ತಲುಪಿ, ಅಲ್ಲಿಯಿಂದ ಇನ್ನಷ್ಟು ಸಂಗಾತಿಗಳನ್ನು ಸೇರಿಕೊಂಡು ಊರಿಗೆ ಹೋಗಲು ಮುಂದಾಗಿದ್ದಾರೆ.
ಕೊರೊನಾ: ಪ್ರಧಾನಿ ಮೋದಿಯಿಂದ ಮುಖ್ಯಮಂತ್ರಿ ಬಿಎಸ್ವೈಗೆ ಬಂದ ಸೂಚನೆ
ಆಗಮನವನ್ನೇ ಎದುರು ನೋಡುತ್ತಿದ್ದಾರೆ
'ನಮ್ಮೂರಿನಲ್ಲಿರುವ ಕುಟುಂಬಸ್ಥರು ಮೇಲಿಂದ ಮೇಲೆ ಫೋನ್ ಮಾಡಿ ನಮ್ಮ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಯಾವಾಗ ಬರುತ್ತೀರಾ ಎಂದು ಗೋಗರೆಯುತ್ತಿದ್ದಾರೆ. ನಮ್ಮ ಆಗಮನವನ್ನೇ ಎದುರು ನೋಡುತ್ತಿದ್ದಾರೆ. ಒಂದೊಂದು ಮನೆಯ ಸ್ಥಿತಿ ಒಂದೊಂದು ರೀತಿಯ ಕಣ್ಣೀರಿನ ಕಥೆಯಾಗಿದೆ. ಕುಟುಂಬಸ್ಥರು ಅಳುತ್ತಿದ್ದಾರೆ. ಹೀಗಾಗಿ, ಏನಾದರೂ ಆಗಲಿ, ಊರಿಗೆ ಹೋಗಬೇಕು ಎಂದು ನಿರ್ಧರಿಸಿದ್ದೇವೆ. ಊಟ-ತಿಂಡಿ ಸಿಗದಿದ್ದರೂ ಪರವಾಗಿಲ್ಲ. ಊರಿನ ಕಡೆ ಹೊರಟಿದ್ದೇವೆ' ಎಂದು ಡ್ರೈವರ್ ರಮೇಶ್ ತಿಳಿಸಿದರು.
ಮೈಸೂರು ಮತ್ತು ಬಳ್ಳಾರಿ ಜಿಲ್ಲಾಡಳಿತ ನೆರವು ಮಾಡಬೇಕು
ಈ ನಾವುಗಳು ಕಷ್ಟದಲ್ಲಿ ಇದ್ದೇವೆ. ನಾವುಗಳು ಊರು ಸೇರಿಕೊಳ್ಳಲು ಮೈಸೂರು ಮತ್ತು ಬಳ್ಳಾರಿ ಜಿಲ್ಲಾಡಳಿತ ನೆರವು ಮಾಡಬೇಕು. ಈ ಸಹಾಯ ನಿರೀಕ್ಷೆಯಲ್ಲೇ ನಡೆದುಕೊಂಡು ಊರಿನ ಕಡೆ ಮುಖ ಮಾಡಿದ್ದೇವೆ ಎಂದು ಹೇಳಿದರು.