ಕೊಡಗಿನತ್ತ ಅಕ್ರಮವಾಗಿ ತೆರಳಲು ತೂಗುಸೇತುವೆ ಬಳಕೆ?
ಮೈಸೂರು, ಮೇ 11: ಮೈಸೂರು ಮತ್ತು ಕೊಡಗಿನ ಸಂಪರ್ಕ ಕಲ್ಪಿಸುವ ಕೊಪ್ಪ ಬಳಿ ನಿಯಮಬದ್ಧ ಪಾಸು ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ತಪಾಸಣೆ ಬಳಿಕವಷ್ಟೆ ಇಲ್ಲಿ ಪ್ರವೇಶದ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲವರು ಅಕ್ರಮವಾಗಿ ಕಣಿವೆ ಮತ್ತು ತೆಪ್ಪದಕಂಡಿಯಲ್ಲಿರುವ ತೂಗು ಸೇತುವೆ ಮೂಲಕ ತೆರಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Recommended Video
ತೆಪ್ಪದಕಂಡಿ ಸೇತುವೆ ಮೂಲಕ ಮೈಸೂರು ಜಿಲ್ಲೆಯ ಬೈಲುಕುಪ್ಪೆಯನ್ನು, ಕಣಿವೆ ಮೂಲಕ ಕೊಪ್ಪವನ್ನು ಸಂಪರ್ಕಿಸುತ್ತಿದ್ದು, ತೋಟದ ಕೆಲಸ ಮಾಡಲು ಕಾರ್ಮಿಕರು ಕೊಡಗಿಗೆ ಈ ಸೇತುವೆಗಳ ಮೂಲಕವೇ ಹೆಚ್ಚಾಗಿ ಬರುತ್ತಿದ್ದರು. ಕೊರೊನಾ ಲಾಕ್ ಡೌನ್ ಆಗುತ್ತಿದ್ದಂತೆಯೇ ಈ ತೂಗು ಸೇತುವೆಗಳ ಸಂಪರ್ಕವನ್ನು ಬಂದ್ ಮಾಡಲಾಗಿತ್ತು.
ದಂಧೆಗೆ ತೂಗುಸೇತುವೆ ಬಳಕೆ
ಮೊದಲಿಗೆ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಬೈಲ್ ಕೊಪ್ಪ ಪೊಲೀಸರು ಒಂದು ಭಾಗಕ್ಕೆ ಬೀಗ ಜಡಿದಿದ್ದರು. ಆದರೆ ಬೈಲುಕುಪ್ಪೆ ಮತ್ತು ಕುಶಾಲನಗರ ವ್ಯಾಪ್ತಿಯಲ್ಲಿ ಗಾಂಜಾ ದಂಧೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದು, ಲಾಕ್ ಡೌನ್ ಮಾಡಿರುವ ಕಾರಣ ಮತ್ತು ಕೊಪ್ಪ ಗೇಟ್ನಲ್ಲಿ ಪೊಲೀಸರು ಕಟ್ಟು ನಿಟ್ಟಿನ ತಪಾಸಣೆ ನಡೆಸುತ್ತಿರುವುದರಿಂದ ಕೆಲವರು ತಮ್ಮ ದಂಧೆಗೆ ಈ ತೂಗು ಸೇತುವೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸ್ಥಳೀಯರದ್ದಾಗಿದೆ.
ಬೆಳಗಾವಿಯ ಕೂಗನಳ್ಳಿ ಚೆಕ್ ಪೋಸ್ಟ್ ಬಳಿ ಬಂದಿಳಿದ ಸಾವಿರಾರು ಕನ್ನಡಿಗರು
ತೂಗುಸೇತುವೆ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ
ತೆಪ್ಪದಕಂಡಿ ತೂಗುಸೇತುವೆ ಮೂಲಕ ಬರುವವರಿಗೆ ಒಂದಷ್ಟು ನಿರ್ಬಂಧವಿದ್ದರೂ ಕಣಿವೆಯಲ್ಲಿರುವ ತೂಗುಸೇತುವೆ ಮೂಲಕ ತೆರಳುವವರಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲದ ಕಾರಣ ಜನ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ರಾತ್ರಿ ಹೊತ್ತಿನಲ್ಲಿ ಹೆಚ್ಚಿನ ಜನರು ಓಡಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಮೈಸೂರಿನಿಂದ ಕೊಡಗಿನತ್ತ ಬರುವವರಿಗೆ ಕೊಪ್ಪ ಗೇಟ್ ಬಳಿ ತಪಾಸಣೆ ಮಾಡಲಾಗುತ್ತದೆ.
ಕೊಡಗಿಗೆ ಇದು ಮಾರಕವೂ ಆಗಬಹುದು
ಕೊಪ್ಪ ಗೇಟ್ ಬಳಿ ಪಾಸು ಇದ್ದವರಿಗೆ ಮಾತ್ರ ಒಳ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಉಳಿದಂತೆ ಯಾರನ್ನೂ ಬಿಡುತ್ತಿಲ್ಲ. ಇದನ್ನರಿತ ಕೆಲವರು ಕೊಪ್ಪದ ಕಡೆಯಿಂದ ಜನರನ್ನು ಕರೆತಂದು ತೂಗು ಸೇತುವೆ ಬಳಿ ಇಳಿಸಿ ಹೋಗುತ್ತಿದ್ದು, ಜನ ಸೇತುವೆ ಮೂಲಕ ಕೊಡಗಿನೊಳಗೆ ಪ್ರವೇಶ ಪಡೆಯುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಈಗಾಗಲೇ ಹಸಿರು ವಲಯದಲ್ಲಿರುವ ಕೊಡಗಿಗೆ ಇದು ಮಾರಕವಾಗದರೂ ಅಚ್ಚರಿಪಡಬೇಕಾಗಿಲ್ಲ.
ಕೊಡಗು-ಕೇರಳ ನಡುವಿನ ಸಂಚಾರಕ್ಕೆ ಮಾರ್ಗಸೂಚಿಗಳು
ತೂಗುಸೇತುವೆ ಬಳಕೆಗೆ ಸ್ಥಳೀಯರ ದೂರು
ಕೊಡಗಿನೊಳಗೆ ಪ್ರವೇಶಿಸಿದರೆ ಅಲ್ಲಿಂದ ಮುಂದೆ ತಮಗೆ ಬೇಕಾದಲ್ಲಿಗೆ ತೆರಳಬಹುದು ಎಂಬುದನ್ನು ಅರಿತ ಬಹಳಷ್ಟು ಜನ ಈ ತೂಗುಸೇತುವೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಸ್ಥಳೀಯರು ದೂರುತ್ತಿದ್ದಾರೆ. ಕುಶಾಲನಗರ ಕೊಡಗು, ಹಾಸನ ಮತ್ತು ಮೈಸೂರಿನೊಂದಿಗೆ ಸಂಪರ್ಕ ಹೊಂದಿದ್ದು, ಕುಶಾಲನಗರಕ್ಕೆ ಆಗಮಿಸಿದರೆ ಒಳದಾರಿಯ ಮೂಲಕ ಹಾಸನ, ದಕ್ಷಿಣ ಕನ್ನಡದ ಕಡೆಗೆ ತೆರಳಬಹುದೆಂಬ ಆಲೋಚನೆ ಬಹಳಷ್ಟು ಮಂದಿಯಲ್ಲಿದೆ. ಹೀಗಾಗಿ ಹೇಗಾದರೂ ಮಾಡಿ ಕೊಡಗಿನೊಳಗೆ ಪ್ರವೇಶಿಸಲು ಕೆಲವರು ಮುಂದಾಗುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕಾಗಿದೆ.