ಲಕ್ಷ್ಮಣ ತೀರ್ಥದ ಜಲವೈಭವದಾಚೆಯ ಆತಂಕ ದೂರವಾಗಿಲ್ಲ...!
ಮೈಸೂರು, ಆಗಸ್ಟ್ 16: ಹಿಂದಿನಿಂದಲೂ ಕೊಡಗಿನಲ್ಲಿ ಮಳೆಯಾಗಿ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿದಾಗಲೆಲ್ಲ ಹುಣಸೂರು ತಾಲೂಕಿನ ಹನಗೋಡಿನಲ್ಲಿರುವ ಅಣೆಕಟ್ಟೆಯಲ್ಲಿನ ಜಲವೈಭವ ನಿಸರ್ಗ ಪ್ರೇಮಿಗಳಲ್ಲಿ ಹುಮ್ಮಸ್ಸು ಮೂಡಿಸುತ್ತಿತ್ತು. ಜತೆಗೆ ಪ್ರವಾಹ ಪರಿಸ್ಥಿತಿ ತಲೆದೋರಿದರೆ ಮಾಡೋದೇನು? ಎಂಬ ಸಣ್ಣಗಿನ ಆತಂಕ ನದಿ ತಟದ ಜನರನ್ನು ಕಾಡುತ್ತಿತ್ತು.
ಇಷ್ಟು ವರ್ಷಗಳಲ್ಲಿ ಕಾಣದ ಪ್ರವಾಹವನ್ನು ಜನ ಇದೀಗ ನೋಡಿದ್ದು, ಲಕ್ಷ್ಮಣನದಿಯ ಉಗ್ರ ಸ್ವರೂಪ ಅದರ ಆಸುಪಾಸಿನಲ್ಲಿ ವಾಸಿಸುವ ಜನರು ಮತ್ತು ರೈತರನ್ನು ಇನ್ನಿಲ್ಲದಂತೆ ಕಾಡಿದ್ದಂತು ಸತ್ಯ. ಆ ಭಯ ಇನ್ನೂ ಜನರಿಂದ ಮಾಸಿಲ್ಲ. ಕೊಡಗಿನಿಂದ ಆರಂಭವಾಗಿ ಅದು ಹಾದು ಹೋಗಿ ಕಾವೇರಿಯನ್ನು ಸೇರುವವರೆಗಿನ ನದಿ ತಟದ ವಾಸಿಗಳನ್ನು ಇನ್ನಿಲ್ಲದಂತೆ ಕಾಡಿದೆ. ಸದ್ಯ ಪ್ರವಾಹ ಇಳಿಮುಖವಾಗಿದ್ದರೂ ರೌದ್ರತೆ ಮಾತ್ರ ಕಡಿಮೆಯಾಗಿಲ್ಲ. ಕೊಡಗಿನಲ್ಲಿ ಈಗ ಸಾಧಾರಣ ಮಳೆ ಬರುತ್ತಿದ್ದು, ಒಂದೊಮ್ಮೆ ಮತ್ತೆ ಮಳೆ ತನ್ನ ಮಗ್ಗಲು ಬದಲಿಸಿದರೆ ಪ್ರವಾಹ ಪರಿಸ್ಥಿತಿ ಎದುರಾದರೂ ಅಚ್ಚರಿ ಪಡಬೇಕಾಗಿಲ್ಲ.
ತುಂಬಿ ಹರಿವ ಲಕ್ಷ್ಮಣತೀರ್ಥವನ್ನು ನೋಡುವುದೇ ಆನಂದ
2013ರಲ್ಲಿ ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಕಂಡುಬಂದಿತ್ತು. ಅದಾದ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಪ್ರವಾಹೋಪಾದಿಯಲ್ಲಿ ನದಿ ಹರಿದಿರಲಿಲ್ಲ. ನಂತರ 2018ರ ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ನದಿಯಲ್ಲಿ ಪ್ರವಾಹ ಕಂಡು ಬಂದಿತ್ತು. ಇದು ರೈತರಲ್ಲಿ ಹರ್ಷ ಮೂಡಿಸಿತ್ತು. ಹಾಗೆ ನೋಡಿದರೆ ಹನಗೋಡಿನಲ್ಲಿ ಲಕ್ಷ್ಮಣತೀರ್ಥ ನದಿಗೆ ಕಟ್ಟಿರುವ ಪುಟ್ಟದಾದ ಅಣೆಕಟ್ಟೆಯಿಂದ ರೈತರಿಗೆ ಅನುಕೂಲವಾಗಿದೆಯಲ್ಲದೆ ಹುಣಸೂರು ಹಾಗೂ ಎಚ್.ಡಿ.ಕೋಟೆ ತಾಲೂಕಿನ 40 ಕೆರೆಗಳಿಗೂ ಇದರ ನೀರು ಹರಿಯುತ್ತಿದೆ. ಇದಕ್ಕೆ ಹನುಮಂತಪುರ ಹಾಗೂ ಉದ್ದೂರು ಮುಖ್ಯ ನಾಲೆಗಳನ್ನು ನಿರ್ಮಿಸುವ ಮೂಲಕ ರೈತರ ಜಮೀನಿಗೆ ನೀರನ್ನು ಹಾಯಿಸಲಾಗುತ್ತಿದೆ.
ಈ ಬಾರಿ ಅಣೆಕಟ್ಟೆಯ ಮೇಲೆ ಭಾರೀ ನೀರು ಹರಿದು ಹೋಗಿದೆ. ಇನ್ನು ಕೆಲವು ದಿನ ಪ್ರವಾಹ ಮುಂದುವರೆದಿದ್ದರೆ ಅಣೆಕಟ್ಟೆಗೆ ಅಪಾಯವಾಗುವ ಭಯ ಜನರಲ್ಲಿ ನಿರ್ಮಾಣವಾಗಿತ್ತು. ನದಿಯ ಪ್ರವಾಹಕ್ಕೆ ಒಬ್ಬ ವ್ಯಕ್ತಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದು, ಉಳಿದಂತೆ ಭಾರೀ ಪ್ರಮಾಣದಲ್ಲಿ ರೈತರ ಕೃಷಿ ಬೆಳೆಗಳು ನಾಶವಾಗಿವೆ.
ಕೊಡಗಿನಲ್ಲಿ ಬತ್ತಿದ ಲಕ್ಷ್ಮಣತೀರ್ಥ ನದಿ: ಆತಂಕ ಶುರು
ಮೊದಲು ಕೊಡಗಿನಲ್ಲಿ ಮಳೆಯಾಗಿ ಲಕ್ಷ್ಮಣತೀರ್ಥ ನದಿ ಮೈತುಂಬಿ ಹರಿದು ಹನಗೋಡು ಅಣೆಕಟ್ಟೆ ಮೇಲೆ ಭೋರ್ಗರೆಯುತ್ತಿದ್ದರೆ ಅದರ ಸೌಂದರ್ಯ ನೋಡಿ ಖುಷಿಪಡುತ್ತಿದ್ದರು, ತಂಡೋಪತಂಡವಾಗಿ ಬಂದು ನದಿಯ ಸೌಂದರ್ಯವನ್ನು ಕಣ್ತುಂಬಿಸಿಕೊಂಡು ಹೋಗುತ್ತಿದ್ದರು. ಆದರೆ ಪ್ರಸಕ್ತ ವರ್ಷದ ಮಳೆ ಲಕ್ಷ್ಮಣ ತೀರ್ಥನದಿಯ ಮತ್ತೊಂದು ಮುಖವನ್ನು ತೋರಿಸಿದೆ. ಜತೆಗೆ ಜನರ ನೆಮ್ಮದಿಯನ್ನು ಕಸಿದಿದೆ. ಆದರೆ ಏನೂ ಮಾಡುವಂತಿಲ್ಲ. ನಾವೇ ಎಚ್ಚರಿಕೆಯಿಂದ ಇರಬೇಕಷ್ಟೆ. ಏಕೆಂದರೆ ಎಲ್ಲವೂ ಪ್ರಕೃತಿ ನಿಯಮ, ಅದಕ್ಕೆ ನಾವೇ ಹೊಂದಿಕೊಳ್ಳುವುದು ಅನಿವಾರ್ಯ.