ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ: ಚರ್ಚೆಗೆ ಆಹ್ವಾನಿಸಿದ ಪೇಜಾವರ ಶ್ರೀ
ಮೈಸೂರು, ಜುಲೈ 30: "ಲಿಂಗಾಯತರು ಎಂದಿಗೂ ಹಿಂದೂಗಳೇ. ಈ ವಿಚಾರವಾಗಿ ನಾನು ಎಂದಿಗೂ ಚರ್ಚೆಗೆ ಸಿದ್ಧ" ಎಂದು ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಪಂಥಾಹ್ವಾನ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಲಿಂಗ, ಇಷ್ಟಲಿಂಗ, ಶಿವನನ್ನು ಆರಾಧನೆ ಮಾಡುವ ಎಲ್ಲರೂ ಹಿಂದೂಗಳು. ವರ್ಣಾಶ್ರಮವನ್ನು ಒಪ್ಪಲಿ, ಒಪ್ಪದೇ ಇರಲಿ, ಶಿವನ ಆರಾಧನೆ ಮಾಡಿದರೆ ಅವರು ಹಿಂದೂಗಳಾಗುತ್ತಾರೆ. ಹಿಂದೂಗಳೆಲ್ಲರೂ ಸಹೋದರರಂತೆ ಇರಬೇಕು. ಈ ವಿಚಾರದ ಬಗ್ಗೆ ನನ್ನ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದೇನೆ. ಯಾವುದೇ ಬಹಿರಂಗ ಚರ್ಚೆಗೆ ನಾನು ಸಿದ್ಧ. ನನ್ನೊಂದಿಗೆ ಸಂವಾದ ನಡೆಸುವ ಧೈರ್ಯ ಯಾರಿಗೂ ಇಲ್ಲ" ಎಂದಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೇಜಾವರ ಶ್ರೀಗಳ 81ನೇ ಚಾತುರ್ಮಾಸ್ಯ
"ಹಲವರು ತಾವು ಪುಸ್ತಕ ಬರೆಯುತ್ತೇವೆ, ಪತ್ರದ ಮೂಲಕ ಚರ್ಚೆ ಮಾಡುತ್ತೇವೆ ಎನ್ನುತ್ತಾರೆ. ಅವರು ಪುಸ್ತಕ ಕಳುಹಿಸಿಕೊಡಲಿ, ಉತ್ತರ ನೀಡಲು ನಾನು ಸಿದ್ಧ. ಪುಸ್ತಕ ಬರೆಯುವುದು ದೀರ್ಘಕಾಲದ ಪ್ರಕ್ರಿಯೆ. ಅದರ ಬದಲಿಗೆ ಮುಖಾಮುಖಿಯಾಗಿ ಸಂವಾದ ಮಾಡುವುದು ಒಳ್ಳೆಯದು. ನಾನು ಚಾತುರ್ಮಾಸ ವ್ರತ ಮಾಡುತ್ತಿದ್ದೇನೆ. ಮೈಸೂರಿನ ಯಾವುದಾದರೂ ಸ್ಥಳಕ್ಕೆ ಬಂದು ಸಂವಾದದಲ್ಲಿ ಪಾಲ್ಗೊಳ್ಳಲು ನಾನು ಸಿದ್ಧನಿದ್ದೇನೆ. ಈ ವಿಚಾರದ ಕುರಿತು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ಅಧ್ಯಕ್ಷ ಜಾಮದಾರ್, ಸಾಣೇಹಳ್ಳಿ ಶ್ರೀ, ಶಾಸಕ ಎಂ.ಬಿ.ಪಾಟೀಲ್ ಅವರಿಗೆ ನಾನು ಸವಾಲೆಸೆದಿದ್ದೇನೆ" ಎಂದರು.
"ಶಿವನೇ ಸರ್ವೋತ್ತಮ. ಶಿವನ ಪಂಚಾಕ್ಷರಿ ಮಂತ್ರವನ್ನು ಎಲ್ಲರೂ ಜಪಿಸುತ್ತಾರೆ. ಶಿವನನ್ನು ಒಪ್ಪಿದ ಮೇಲೆ ಹಿಂದೂಗಳಲ್ಲ ಎಂದು ಹೇಳಲು ಸಾಧ್ಯವೇ? 1955ರಿಂದಲೂ ನಾನು ಎಲ್ಲಾ ಲಿಂಗಾಯತ, ವೀರಶೈವ ಮಠಾಧೀಶರ ಸ್ನೇಹ ಸಂಪರ್ಕ ಹೊಂದಿದ್ದೇನೆ. ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲು ನಿಮಗೇನು ಅಧಿಕಾರವಿದೆ ಎಂದು ಜಾಮದಾರರನ್ನೊಳಗೊಂಡಂತೆ ಅನೇಕರು ಕೇಳಿದ್ದಾರೆ" ಎಂದು ಕಿಡಿಕಾರಿದರು.
ಮಳೆಗಾಗಿ ಪೇಜಾವರ ಶ್ರೀಗಳಿಂದ ತಲಕಾವೇರಿಯಲ್ಲಿ ಪೂಜೆ
"ಹಿಂದೂ ಧರ್ಮ ಬಲಗೊಳಿಸುವುದು ಎಂದರೆ ದಲಿತ ವರ್ಗವನ್ನು ಮುಖ್ಯವಾಹಿನಿಗೆ ತರುವುದು. ಬೌದ್ಧ ಧರ್ಮ ಆಗಬಹುದು, ಜೈನ ಧರ್ಮ ಆಗಿರಬಹುದು, ಅವರೆಲ್ಲರೂ ಹಿಂದೂಗಳೇ. ಗುರು ಪೂರ್ಣಿಮೆಯಂದು ಮೋದಿ ಅವರನ್ನು ಭೇಟಿಯಾದಾಗ ಗಂಗಾನದಿ ಸ್ವಚ್ಛತೆ ಹಾಗೂ ರಾಮಮಂದಿರ ನಿರ್ಮಾಣಕ್ಕೆ ಸೂಚಿಸಿದ್ದೇನೆ" ಎಂದರು.
"ನಮ್ಮ ಸಹೋದರ ನಮ್ಮೊಂದಿಗೆ ಇರುವುದಿಲ್ಲ, ಬೇರೆ ಮನೆ ಮಾಡುತ್ತೇನೆಂದು ಹೇಳಿದರೆ, ಉಳಿದವರು 'ಬೇರೆ ಮನೆಗೆ ಹೋಗುವುದು ಬೇಡ, ಜೊತೆಗೆ ಇರು' ಎಂದರೆ ತಪ್ಪಾಗುತ್ತದೆಯೇ...? ಎಂದು ತಮ್ಮ ಟೀಕಾಕಾರರನ್ನು ಪೇಜಾವರ ಶ್ರೀಗಳು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.