ಮೈಸೂರು, ಚಾಮರಾಜನಗರ ರೈತರಿಗೆ ಈ ಬಾರಿ ನಷ್ಟ ಕೊಟ್ಟ ಅವರೆಕಾಯಿ
ಮೈಸೂರು, ಜನವರಿ 26: ಈಗ ಅವರೆಕಾಯಿಯ ಕಾಲ. ಮನೆಗಳಲ್ಲಂತೂ ಅವರೆಕಾಯಿಯದ್ದೇ ಘಮಲು... ಆದರೆ ಅವರೆ ಬೆಳೆದು ಒಂದಷ್ಟು ಹಣ ಸಂಪಾದನೆ ಮಾಡಿಕೊಳ್ಳಬೇಕೆಂದು ಆಸೆಪಟ್ಟಿದ್ದ ರೈತರಿಗೆ ಮಾತ್ರ ನಿರಾಸೆಯಾಗಿದೆ. ಕಾರಣ, ಬಹಳಷ್ಟು ಕಡೆಗಳಲ್ಲಿ ಹಸಿರು ಹುಳಗಳು ಅವರೆಕಾಯಿ, ಎಲೆಯನ್ನೆಲ್ಲ ತಿಂದು ಹಾಕುತ್ತಾ ರೈತರಿಗೆ ಶತ್ರುವಾಗಿ ಪರಿಣಮಿಸಿವೆ.
ಸಾಮಾನ್ಯವಾಗಿ ಹಿಂಗಾರು ಮಳೆಯ ನಂತರ ಹೆಚ್ಚಿನ ರೈತರು ಅವರೆಕಾಯಿಯನ್ನು ಬೆಳೆಯುತ್ತಾರೆ. ಈ ಅವರೆಕಾಯಿ ಬೆಳೆಯ ಕತೆಯೂ ಅಷ್ಟೆ ಒಂಥರಾ ಜೂಜು ಇದ್ದಂತೆ. ಕೆಲವೊಮ್ಮೆ ಉತ್ತಮ ದರ ಸಿಕ್ಕಿ ರೈತರಿಗೆ ಹಣ ತಂದುಕೊಡಬಹುದು. ಇನ್ನು ಕೆಲವೊಮ್ಮೆ ನಷ್ಟ ಹೊಂದಿ ಕೃಷಿಗೆ ಖರ್ಚು ಮಾಡಿದ ಹಣವೂ ಬಾರದೆ ಸಂಕಷ್ಟಕ್ಕೆ ಸಿಲುಕಿಸಲೂಬಹುದು.
ರೈತರಿಗೆ ತಲುಪುತ್ತಿರುವುದೇ ಕಡಿಮೆ ಹಣ
ಪಟ್ಟಣಗಳಲ್ಲಿ ಅವರೆಕಾಯಿ ಕೆ.ಜಿ.ಗೆ 30-40 ರೂಪಾಯಿಗೆ ಮಾರಾಟವಾಗುತ್ತಿದ್ದರೂ ರೈತರಿಗೆ ಮಾತ್ರ ಹದಿನೈದೋ ಇಪ್ಪತ್ತೋ ರೂಪಾಯಿ ಸಿಗುತ್ತದೆ. ಕೆಲವೊಮ್ಮೆ ಮಧ್ಯವರ್ತಿಗಳ ಹಾವಳಿಯಿಂದ ಮಾರಾಟ ಮಾಡುವುದೇ ಸಮಸ್ಯೆಯಾಗಿದೆ. ಹೀಗಿರುವಾಗ ಮೈಸೂರಿನ ಕೆಲವು ಭಾಗಗಳು ಹಾಗೂ ಚಾಮರಾಜನಗರದ ಗುಂಡ್ಲುಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಅವರೆ ಕಾಯಿಗೆ ಹಸಿರು ಹುಳುವಿನ ಕಾಟ ಆರಂಭವಾಗಿದೆ. ಈ ಹುಳುವಿನ ಕಾಟದಿಂದ ರೈತರು ಹೈರಾಣಾಗಿದ್ದಾರೆ.
ಗುಂಡ್ಲುಪೇಟೆಯಲ್ಲಿ ಅವರೆಕಾಯಿಗೆ ಹುಳು ಹಾವಳಿ
ಅದರಲ್ಲೂ ಗುಂಡ್ಲುಪೇಟೆ ತಾಲೂಕಿನ ಹಂಗಳ, ದೇವರಹಳ್ಳಿ ಬೇರಂಬಾಡಿ, ಗೋಪಾಲಪುರ, ಕೊಡಸೊಗೆ, ತೆರಕಣಾಂಬಿ ಸೇರಿದಂತೆ ಹಲವು ಕಡೆ ಅವರೆಕಾಯಿ ಬೆಳೆದ ರೈತರು ಹುಳುವಿನ ಬಾಧೆಯಿಂದಾಗಿ ನಷ್ಟ ಹೊಂದಿದ್ದಾರೆ. ಹಿಂಗಾರು ಮಳೆಯನ್ನು ಅವಲಂಬಿಸಿ ರೈತರು ಅವರೆಕಾಯಿ, ರಾಗಿ, ಜೋಳ ಬೆಳೆದಿದ್ದರು. ಆದರೆ ಅವರೆಕಾಯಿ ಕಾಯಿಕಟ್ಟುವ ಹಂತ ತಲುಪುತ್ತಿದ್ದಂತೆ ಗೊಂಚಲುಗಳ ನಡುವೆ ಪೊರೆ ಕಟ್ಟಿದ ಹುಳುಗಳು ಕಾಣಿಸಿಕೊಂಡವು. ತೂತು ಬಿದ್ದ ಎಲೆಗಳು ಗೋಚರಿಸಿತು.
ಬೆಂಗಳೂರು ಅವರೆ ಮೇಳದ ಬಗ್ಗೆ ಮೇಯರ್ ಏನಂದ್ರು?
ಅವರೆ ಇಳುವರಿ ಮೇಲೆ ಪರಿಣಾಮ
ಅಲ್ಲೊಂದು ಇಲ್ಲೊಂದು ಹಸಿರು ಕಂಬಳಿ ಹುಳು ಕಾಯಿ ಕೊರೆದು ಹೊರಬರಲು ತೊಡಗಿದವು. ಇದರಿಂದಾಗಿ ಕಾಯಿ ಸುರುಟಿಕೊಂಡು ಇಳುವರಿಗೆ ತೊಂದರೆಯಾಯಿತು.
ಮುಂಜಾನೆ ಹುಳುಗಳು ಎಲೆ ಮತ್ತು ಕಾಯಿ ಸುತ್ತ ಹರಿದಾಡುತ್ತಾ ಬಿಸಿಲು ಬರುತ್ತಿದ್ದಂತೆಯೇ ಗಿಡ ಮತ್ತು ಕಾಯಿಗಳ ನಡುವೆ ಸೇರಿ ಗೂಡು ಕಟ್ಟಿ ಲಾರ್ವ ಸ್ಥಿತಿಯಲ್ಲಿದ್ದು, ನಂತರ ಹೊರಬಂದು ಎಲೆ ತಿನ್ನುತ್ತವೆ. ಆ ಮೂಲಕ ಫಸಲು ಮಾತ್ರವಲ್ಲದೆ ಗಿಡವನ್ನೇ ತಿಂದು ಹಾಕಿ ರೈತರಿಗೆ ನಷ್ಟವನ್ನುಂಟು ಮಾಡಿದೆ.
ಔಷಧ ಪ್ರಯೋಗವೂ ಯಶಸ್ವಿಯಾಗಲಿಲ್ಲ
ಇದನ್ನು ಒಂದು ಲೀಟರ್ ನೀರಿಗೆ ಎರಡು ಎಂಎಲ್ ಕ್ಲೋರೋಫೈರಿಪಾಸ್, ಇಲ್ಲವೇ ಮಾನೋ ಕ್ರೋಟೋಪಾಸ್ ಮಿಶ್ರಣ ಮಾಡಿ ಸಿಂಪಡಣೆ ಮಾಡಿ ನಿಯಂತ್ರಣಕ್ಕೆ ತರುವ ಪ್ರಯತ್ನವನ್ನು ಕೆಲವು ರೈತರು ಮಾಡಿದರು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅವರೆಕಾಯಿ ಕೆಲವೇ ಕೆಲವು ರೈತರಿಗೆ ಒಂದಿಷ್ಟು ಆದಾಯ ತಂದಿದೆ. ಉಳಿದಂತೆ ನಷ್ಟವೇ ಜಾಸ್ತಿ ಆಗಿದೆ.