ಜೊತೆಗಿದ್ದವರೇ ಸೋಲಿಗೆ ಕಾರಣರಾದರು: ವಿಜಯ್ ಶಂಕರ್
ಮೈಸೂರು, ಮೇ 24 : ನನಗೆ ಮೈಸೂರು - ಕೊಡಗು ಕ್ಷೇತ್ರದಿಂದ ಗೆಲ್ಲುವ ವಿಶ್ವಾಸವಿತ್ತು. ನಂಬಿಕೆ ಎಂಬುದು ತಾಯಿಗೆ ಸಮಾನ. ಆದರೆ, ನನ್ನ ಜೊತೆಯಲ್ಲಿದ್ದವರೇ ಮೋಸ ಮಾಡಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಕಾಂಗ್ರೆಸ್ನ ಸಿ.ಎಚ್.ವಿಜಯಶಂಕರ್ ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಹಾಗೂ ಸಿದ್ದರಾಮಯ್ಯ 2 ಲಕ್ಷಕ್ಕೂ ಹೆಚ್ಚು ಮತದ ಅಂತರದಲ್ಲಿ ಸೋತರು. ಆ ಮತಗಳು ನನಗೆ ವರ್ಗಾವಣೆ ಆಗಿದ್ದರೂ 50 ಸಾವಿರ ಮುನ್ನಡೆ ಲಭಿಸುತ್ತಿತ್ತು. ಆದರೆ, ಆ ಕ್ಷೇತ್ರದಲ್ಲಿ ಏನೂ ಇಲ್ಲದ ಬಿಜೆಪಿಗೆ ಈ ಬಾರಿ ಮುನ್ನಡೆ ಲಭಿಸಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ವರಿಷ್ಠರು ಗಮನ ಹರಿಸಬೇಕು ಎಂದರು.
ಚುನಾವಣಾ ಫಲಿತಾಂಶ: ಗೆದ್ದ ಪ್ರತಾಪ್ ಸಿಂಹ, ಸೋತ ವಿಜಯ್ ಶಂಕರ್ ಹೇಳಿದ್ದೇನು?
ಸಿದ್ದರಾಮಯ್ಯ ಅವರು ನೇರ ನಡೆನುಡಿಯ ನಾಯಕ. ಹೋರಾಟಗಾರ. ಅವರಿಗೀಗ ತಾತ್ಕಾಲಿಕವಾಗಿ ಹಿನ್ನಡೆ ಉಂಟಾಗಿದೆ ಅಷ್ಟೆ. ಇದೇನು ಶಾಶ್ವತ ಅಲ್ಲ. ಮೈತ್ರಿ ಪಕ್ಷ ಜೊತೆಯಾಗಿ ಕೆಲಸ ಮಾಡಿದ್ದರೆ ಖಂಡಿತ ನಾನು ಸೋಲುತ್ತಿರಲಿಲ್ಲ. ಪ್ರತಿ ಕ್ಷೇತ್ರದಲ್ಲಿನ ವಿದ್ಯಮಾನಗಳ ಬಗ್ಗೆ ವಿಮರ್ಶೆ ಮಾಡುವಂತೆ ಮನವಿ ಮಾಡುತ್ತೇನೆ. ಅದೇನೇ ಇರಲಿ; ಜನರ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇನೆ. ಜನಾದೇಶ ಪಾಲಿಸುತ್ತೇನೆ ಎಂದು ಸೋಲನ್ನು ಸ್ವೀಕರಿಸಿದರು.