ಮೈಸೂರಿನ ಪಿಯುಸಿ ಪರೀಕ್ಷಾ ಕೇಂದ್ರಗಳಲ್ಲಿ ಔಷಧಿ ಸಿಂಪಡಣೆ
ಮೈಸೂರು, ಜೂನ್ 17: ಜೂನ್ 18 ರ ಗುರುವಾರದಂದು ಬಾಕಿ ಉಳಿದಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.
Recommended Video
ಕೊರೊನಾ ವೈರಸ್ ಸೋಂಕು ಹರಡುತ್ತಿದ್ದ ಹಿನ್ನೆಲೆ ಲಾಕ್ ಡೌನ್ ಜಾರಿಗೆ ತರಲಾಗಿತ್ತು, ಆದ್ದರಿಂದ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯ ಪರೀಕ್ಷೆ ಬಾಕಿ ಉಳಿದಿತ್ತು. ಈ ಪರೀಕ್ಷೆ ನಾಳೆ ಅಂದರೆ ಗುರುವಾರ ನಡೆಯಲಿದ್ದು, ಕೊರೊನಾ ವೈರಸ್ ಭೀತಿಯಿಂದಾಗಿ ಪಿಯು ಪರೀಕ್ಷೆ ನಡೆಯುವ ಕಾಲೇಜುಗಳಲ್ಲಿ ಔಷಧಿ ಸಿಂಪಡಿಸಲಾಗುತ್ತಿದೆ.
ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಿಎಂಟಿಸಿ ವ್ಯವಸ್ಥೆ
ನಗರ ಪಾಲಿಕೆ ವತಿಯಿಂದ ಪರೀಕ್ಷಾ ನಡೆಯುವ ಕಾಲೇಜು ಆವರಣ, ಕೊಠಡಿಗೆ ಪಾಲಿಕೆ ಸಿಬ್ಬಂದಿಗಳು ಔಷಧಿ ಸಿಂಪಡಿಸುತ್ತಿದ್ದಾರೆ. ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು ನೇತೃತ್ವದಲ್ಲಿ ಕೊರೊನಾ ವೈರಸ್ ತಡೆಯುವ ಮುನ್ನೆಚ್ಚರಿಕೆಯಾಗಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.
ಮೈಸೂರಿನ ಮರಿಮಲ್ಲಪ್ಪ, ಸದ್ವಿದ್ಯಾ, ಡಿ ಬನುಮಯ್ಯ, ಮಹಾರಾಜ ಸೇರಿದಂತೆ ಅನೇಕ ಪಿಯು ಕಾಲೇಜುಗಳಲ್ಲಿ ಪಾಲಿಕೆ ಸಿಬ್ಬಂದಿಯಿಂದ ಔಷಧಿ ಸಿಂಪಡಣೆ ಜೊತೆಗೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.
ಕೊರೊನಾ ವೈರಸ್ ಬಿಕ್ಕಟ್ಟಿನ ನಂತರ ನಡೆಯುತ್ತಿರುವ ಮೊದಲ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು 31,569. ಮೈಸೂರಿನಲ್ಲಿ ಪರೀಕ್ಷೆ ಬರೆಯುವ ಹೊರ ಜಿಲ್ಲೆಯವರು 436. ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯುವ ಮೈಸೂರು ಜಿಲ್ಲೆಯವರು 504. ಅಂತರಾಜ್ಯದ 9 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವವರಾಗಿದ್ದಾರೆ.
ಮೈಸೂರು ನಗರದಲ್ಲಿ 26 ಪರೀಕ್ಷಾ ಕೇಂದ್ರಗಳು ಇದ್ದು, ಗ್ರಾಮಾಂತರ ಪ್ರದೇಶದಲ್ಲಿ 24 ಪರೀಕ್ಷಾ ಕೇಂದ್ರಗಳು ಇವೆ. 900 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ 3 ಕೇಂದ್ರಗಳಿದ್ದು, 800 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ 10 ಕೇಂದ್ರಗಳಿವೆ.
ಮಾರ್ಕಿಂಗ್, ಡಿಸ್ಇನ್ಫೆಕ್ಷನ್, ನೋಂದಣಿ ಸಂಖ್ಯೆ ಬರೆಯುವುದು ಸೇರಿದಂತೆ ಅಂತಿಮ ಹಂತದ ಸಿದ್ಧತೆಗಳು ಮಾತ್ರ ಬಾಕಿ ಇದ್ದು, ಆಯಾ ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡುವ ಜವಾಬ್ದಾರಿ ನೀಡಲಾಗಿದೆ. ಡಿಡಿಪಿಐ ಜಿ.ಆರ್ ಗೀತಾ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮದ ಕೆಲಸ ನಡೆಯುತ್ತಿದೆ.