ಗಜಪಡೆ ಅಲಂಕಾರದ ಹಿಂದಿರುವ ಪಾಷಾಗೊಂದು ಸಲಾಂ
ಮೈಸೂರು, ಅಕ್ಟೋಬರ್ 5: ದಸರಾದಲ್ಲಿ ವಿಜೃಂಭಿಸಲಿರುವ ಜಂಬೂಸವಾರಿಗೆ ಗಜಪಡೆಗಳು ಸರ್ವ ರೀತಿಯಲ್ಲಿ ಸನ್ನದ್ಧವಾಗುತ್ತಿವೆ. ಅವುಗಳಿಗೆ ಅಲಂಕಾರ ಮಾಡುವ ಮತ್ತು ಉಡುಗೆ ತೊಡುಗೆ ತೊಡಿಸುವ ಕಾರ್ಯಗಳಿಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮ
ಮೈಸೂರು ದಸರಾ ಅಂದರೆ ಬರೀ ಆನೆಗಳ ಮೆರವಣಿಗೆಯಲ್ಲ. ಇಲ್ಲಿ ಪ್ರತಿಯೊಂದೂ ವಿಶಿಷ್ಟವೇ. ಸರ್ವಾಲಂಕಾರಗೊಂಡು ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕುವ ಗಜಪಡೆಯ ಜಂಬೂ ಸವಾರಿ ನಮ್ಮ ಕಣ್ಣು ಕೋರೈಸುತ್ತದೆ. ಆದರೆ ಆ ಗಜಪಡೆಯ ಅಲಂಕಾರದ ಹಿಂದಿನ ಶ್ರಮ ಮಾತ್ರ ಕಾಣುವುದಿಲ್ಲ.
ಗಾದಿ, ನಮ್ದಾ, ಛಾಪು ತಯಾರಿಸುವ ಪಾಷಾ
ಜಂಬೂ ಸವಾರಿಯಲ್ಲಿ ಆನೆ ಬೆನ್ನ ಮೇಲೆ ಹೊದಿಸಲಾಗುವ ಗಾದಿ, ನಮ್ದಾ, ಛಾಪು ಇವೆಲ್ಲವೂ ಅಲಂಕಾರಕ್ಕೆ ಅಗತ್ಯ. ಇವಿದ್ದರೇನೇ ಜಂಬೂಸವಾರಿಯಲ್ಲಿನ ಆನೆಗಳು ಸರಾಗವಾಗಿ ಚಲಿಸಲು ಸಾಧ್ಯವಾಗುವುದು. ಹೀಗೆ ಒಪ್ಪ ಓರಣವಾಗಿ ಗಜಪಡೆ ತೆರಳಲು ಸಾಧ್ಯವಾಗಿಸಿರುವ ಕೈಗಳನ್ನು ಹುಡುಕಿದಾಗ ಕಂಡಿದ್ದೇ ಪಾಷಾ.
ಚಾಮುಂಡೇಶ್ವರಿ ಮೈಸೂರು ಒಡೆಯರ ಅಧಿದೇವತೆಯಾಗಿದ್ದು ಹೇಗೆ?
ಪಾಷಾಗೆ ಒಲಿದು ಬಂದ ಕಲೆ
ಆನೆ ಬೆನ್ನಿನ ಮೇಲೆ ಅದಕ್ಕೆ ಚುಚ್ಚದಂತೆ ನೋಡಿಕೊಳ್ಳುವ ಉದ್ದೇಶದಿಂದ ಗಾದಿ, ನಮ್ದಾ, ಛಾಪುನ್ನು ಬಳಸಲಾಗುತ್ತದೆ. ಇದನ್ನು ಕಳೆದ ಹಲವು ವರ್ಷಗಳಿಂದ ಪಾಷ ಎಂಬುವರೇ ತಯಾರು ಮಾಡುತ್ತಿದ್ದಾರೆ. ಇವರನ್ನು ಆನೆ ಟೈಲರ್ ಎಂದು ಕರೆದರೂ ತಪ್ಪಾಗಲಾರದು. ಆನೆ ಬೆನ್ನಿನ ಮೇಲೆ ಹಾಕುವ ಗಾದಿ, ನಮ್ದಾ, ಛಾಪು ಎನ್ನುವ ವಿಶೇಷ ತೊಡುಗೆಯನ್ನು ದಬ್ಬಳ ಸೂಜಿಯಿಂದ ಹೊಲಿದು ತಯಾರು ಮಾಡಲಾಗುತ್ತದೆ. ಆನೆಗೆ ನೋವಾಗದಂತೆ ಮೆತ್ತನೆ ಹೊದಿಕೆಯನ್ನು ಅದರ ಬೆನ್ನಿನ ಅಳತೆಗೆ ತಕ್ಕಂತೆ ಅಳೆದು ತಯಾರು ಮಾಡುವುದು ಜಾಣ್ಮೆಯ ಕೆಲಸ. ಪಾಷಾ ಅವರಿಗೆ ಆ ಕಲೆ ಒಲಿದುಬಂದಿದೆ.
ವೃತ್ತಿಯಲ್ಲಿ ಮಾವುತರಾಗಿದ್ದ ಪಾಷಾ
ಪಾಷಾರವರು 1971ರಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. 2006ರಲ್ಲಿ ನಿವೃತ್ತಿಯಾದರೂ ಅರಣ್ಯ ಇಲಾಖೆಗೆ ಈ ಕುಶಲ ಕೆಲಸ ಮಾಡಲು ಪಾಷಾ ಬಿಟ್ಟರೆ ಇನ್ಯಾರೂ ಒಪ್ಪಿಗೆಯಾಗಿಲ್ಲ. ಹಾಗಾಗಿ ದಸರಾ ಆನೆಗಳು ಸೇರಿದಂತೆ ಎಲ್ಲಾ ಆನೆಗಳಿಗೂ ಪಾಷರವರೇ ಹೊದಿಕೆ ತಯಾರು ಮಾಡುತ್ತಾರೆ. ಪಾಷಾ ವೃತ್ತಿಯಲ್ಲಿ ಮಾವುತರಾಗಿದ್ದವರು. ಇವರು ಸರಳ ಆನೆಯ ಮಾವುತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಆನೆಗಳ ಹೊದಿಕೆ ತಯಾರು ಮಾಡುವುದನ್ನು ಚಿಕ್ಕ ಹುಡುಗರಾಗಿದ್ದಾಗ ಈ ಹಿಂದೆ ಅಂಬಾರಿ ಹೊರುತ್ತಿದ್ದ ಬಿಳಿಗಿರಿರಂಗ ಆನೆಯ ಮಾವುತರಾಗಿ ಕೆಲಸ ಮಾಡುತ್ತಿದ್ದ ಸುಲ್ತಾನ್ ಸಾಬ್ ಅವರಿಂದ ಕಲಿತಿದ್ದು. ಇದುವರೆಗೆ ರಾಜೇಂದ್ರ, ದ್ರೋಣ, ಬಲರಾಮ, ಗಜೇಂದ್ರ ಹೀಗೆ ಎಲ್ಲಾ ಆನೆಗಳಿಗೆ ಗಾದಿ ಹೊಲಿಯುತ್ತಾ ಬಂದಿದ್ದಾರೆ. ಇನ್ನು ಮುಂದೆ ಈ ಕಾಯಕವನ್ನು ಬೇರೆಯವರು ಮುಂದುವರೆಸಿಕೊಂಡು ಹೋಗುವುದು ಅನಿವಾರ್ಯವಾಗಿರುವುದರಿಂದ ಇತರ ಮಾವುತರಿಗೂ ಕಾಯಕ ಕಲಿಸಿದ್ದಾರೆ.
ಪಾಷಾರಿಂದ ತರಬೇತಿ
ದಸರಾದ ಜಂಬೂಸವಾರಿಗೆ ಗಜಪಡೆಗಳನ್ನು ತಯಾರಿ ಮಾಡುವ ಕೆಲಸ ಸುಲಭದಲ್ಲ. ಅದರ ಹಿಂದೆ ಶ್ರಮ ಮತ್ತು ಜಾಣ್ಮೆಯ ಕೆಲಸಗಳಿವೆ. ಅವುಗಳನ್ನು ಕಲಿತವರು ಮುಂದಿನ ತಲೆಮಾರಿಗೆ ಕಲಿಸಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಪ್ರತಿವರ್ಷವೂ ಜಂಬೂಸವಾರಿ ಯಾವುದೇ ತೊಂದರೆಯಿಲ್ಲದೆ ಸಾಂಗವಾಗಿ ಸಾಗಲು ಸಾಧ್ಯವಾಗಿದೆ.
ಇದೀಗ ಪಾಷಾರವರು ಮುಂದಿನ ದಿನಗಳಲ್ಲಿ ಅನುಕೂಲವಾಗುವಂತೆ ನಮ್ದಾ ತಯಾರು ಮಾಡುವ ತರಬೇತಿಯನ್ನು ಇತರರಿಗೂ ನೀಡುತ್ತಿದ್ದಾರೆ. ಹೀಗಾಗಿ ಪಾಷಾರವರ ಮಾರ್ಗದರ್ಶನದಲ್ಲಿ ಇತರ ಮಾವುತರು ಗಾದಿ, ನಮ್ದಾ, ಛಾಪು ತಯಾರು ಮಾಡುವುದನ್ನು ಕಲಿಯುತ್ತಿದ್ದಾರೆ.