ವಾಟ್ಸಾಪ್ ವದಂತಿ: ನವಜಾತ ಶಿಶುಗಳಿಗೆ ಲಸಿಕೆ ಹಾಕಿಸಲು ಪೋಷಕರ ಹಿಂದೇಟು
ಮೈಸೂರು, ಜುಲೈ. 10: ನಗರದಲ್ಲಿ ಹರಡಿರುವ ವಾಟ್ಸಾಪ್ ವದಂತಿಯಿಂದ ಪೋಷಕರು ನವಜಾತ ಶಿಶುಗಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಪರದಾಡುತ್ತಿದೆ.
ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ, ಕಳೆದ ಕೆಲ ದಿನಗಳಿಂದ ವಾಟ್ಸಾಪ್ ನಲ್ಲಿ ಲಸಿಕೆ ಹಾಕಿಸಿಕೊಂಡ ನವಜಾತ ಶಿಶುಗಳು ಮೈಸೂರಿನಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂಬ ಸಂದೇಶ ಯಾರೋ ಕಿಡಿಗೇಡಿಗಳು ಹರಿಬಿಡುತ್ತಿದ್ದಾರೆ.
ವದಂತಿಯ ಹರಿವಿಗೆ ಕಡಿವಾಣ: ವಾಟ್ಸಾಪ್ಗೆ ಕೇಂದ್ರ ಸರ್ಕಾರ ಸೂಚನೆ
ಇದರ ಪರಿಣಾಮ ಪೋಷಕರು, ತಾಯಂದಿರು ಮಕ್ಕಳಿಗೆ ಲಸಿಕೆ ಹಾಕಿಸಬೇಕೋ...? ಅಥವಾ ಬೇಡವೋ..? ಎಂಬ ಆತಂಕದಲ್ಲಿದ್ದಾರೆ. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ್ ಈ ಕುರಿತು ಸ್ಪಷ್ಟನೆ ನೀಡಿದ್ದು, ಲಸಿಕೆಯಿಂದ ಈವರೆಗೆ ಮೈಸೂರಿನಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಪೋಷಕರು ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.
ಕಳೆದೆರೆಡು ತಿಂಗಳುಗಳಲ್ಲಿ ವಾಟ್ಸಾಪ್ ನಲ್ಲಿ ಹರಡುತ್ತಿರುವ ವದಂತಿಗಳು ಒಂದೊಂದಲ್ಲ. ಇತ್ತೀಚೆಗೆ ವಾಟ್ಸಾಪ್ ನಲ್ಲಿ ಹರಿದಾಡಿದ ಒಂದು ವದಂತಿ ಕಳೆದ ಮೇನಿಂದ ಈಚೆಗೆ 29 ಪ್ರಾಣಗಳನ್ನು ಬಲಿ ತೆಗೆದುಕೊಂಡಿದೆ.
ಮಕ್ಕಳ ಕಳ್ಳರ ಗುಂಪಿದೆ ಎಂಬ ವದಂತಿ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. "ಅವರು ಬರ್ತಾರೆ. ನಿಮ್ಮ ಮಕ್ಕಳನ್ನು ಎತ್ತಿಕೊಂಡು ಓಡಿಹೋಗ್ತಾರೆ" ಈ ರೀತಿಯಾದ ಒಂದು ವದಂತಿ ತಮಿಳುನಾಡಿನಿಂದ ತ್ರಿಪುರಾದವರೆಗೆ ಹರಿಬಿಟ್ಟಿದ್ದು, ದೇಶದಾದ್ಯಂತ ಕಾಳ್ಗಿಚ್ಚಿನಂತೆ ಈ ವದಂತಿ ಹರಿದಾಡುತ್ತಿದೆ.
ಆ ಸಂದೇಶದ ಜತೆಗೆ ಸಿಸಿಟಿವಿ ಫೂಟೇಜು ಇರುತ್ತದೆ. ಮೋಟಾರ್ ಸೈಕಲ್ ನಲ್ಲಿ ಬಂದ ವ್ಯಕ್ತಿಯೊಬ್ಬ ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯವದು. ಆ ವಿಡಿಯೋ ಪಾಕಿಸ್ತಾನದ ಕರಾಚಿಯದು.
ಮಕ್ಕಳ ಅಪಹರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ತೆಗೆದ ವಿಡಿಯೋ ಅದು. ವಿಡಿಯೋದ ಕೊನೆ ಭಾಗವನ್ನು ಎಡಿಟ್ ಮಾಡಿ, ಯಾರೋ ಭಾರತದಾದ್ಯಂತ ಹರಿಬಿಟ್ಟಿದ್ದಾರೆ.
ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಅಂತಲೇ ತ್ರಿಪುರಾ ಸರಕಾರ ಒಬ್ಬ ವ್ಯಕ್ತಿಯನ್ನು ನೇಮಿಸಿ, ಸಾರ್ವಜನಿಕ ಸ್ಥಳದಲ್ಲಿ ಅರಿವು ಮೂಡಿಸಲು ಯತ್ನಿಸಿತು. ಆದರೆ ಆತ ಈ ಬಗ್ಗೆ ಅರಿವು ಮೂಡಿಸಲು ಹೋದಾಗ ಸಾರ್ವಜನಿಕರು ಆತನ ಮೇಲೆ ಮುಗಿಬಿದ್ದರು.
ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ, ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಅಂತ. ಆದರೂ ಪ್ರಯೋಜನವಾಗಿಲ್ಲ. ಜಾರ್ಖಂಡ್, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಗುಜರಾತ್, ತ್ರಿಪುರಾ ಹೀಗೆ ನಾನಾ ರಾಜ್ಯಗಳಲ್ಲಿ ಸಾರ್ವಜನಿಕರ ಗುಮಾನಿಗೆ ಸಾವನ್ನಪ್ಪಿದ್ದಾರೆ. ಇನ್ನು ಹಲ್ಲೆಗೊಳಗಾದ ಪ್ರಕರಣಗಳಂತೂ ಬೇಕಾದಷ್ಟಿವೆ.