ಕೆ.ಆರ್.ನಗರದಲ್ಲಿ ನಾಲೆ ಒಡೆದು ಭತ್ತ, ಕಬ್ಬು ನಾಶ
ಮೈಸೂರು, ಸೆಪ್ಟೆಂಬರ್ 6: ಭಾರೀ ಮಳೆಗೆ ನಾಲೆ ಒಡೆದ ಪರಿಣಾಮ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಮತ್ತು ಕಬ್ಬು ಬೆಳೆ ನೀರು ಪಾಲಾಗಿರುವ ಘಟನೆ ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಳೆಗಾಲ ಬರುತ್ತಲೇ ಬೀಜ ಬಿತ್ತಿ ಬೆಳೆಯ ಕನಸು ಕಂಡಿದ್ದ ರೈತರು ಇದೀಗ ಬೆಳೆ ಕಳೆದುಕೊಂಡ ಸಂಕಷ್ಟಕ್ಕೀಡಾಗಿದ್ದಾರೆ.
ಇನ್ನು ಏಕಾ ಏಕಿ ಮಳೆ ಸುರಿದ ಪರಿಣಾಮ ಭೇರ್ಯ ವ್ಯಾಪ್ತಿಯಲ್ಲಿ ಕೆಲವು ಮನೆಗಳು ಕುಸಿದು ಬಿದ್ದಿದ್ದರೆ ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಮಳೆಯ ಪರಿಣಾಮ ಗಂಧನಹಳ್ಳಿ ಗ್ರಾಮದಿಂದ ಹಂಪಾಪುರದ ಕೊನೆ ಹಂತದವರೆಗೆ ಹೋಗುವ ಹಂಪಾಪುರ ಹಳೆ ನಾಲೆಗೆ ಹಳ್ಳಕೊಳ್ಳಗಳಿಂದ ನೀರು ಹರಿದು ಬಂದಿತ್ತು. ಪರಿಣಾಮ ಕಪ್ಪಡಿ ಕ್ಷೇತ್ರದ ಕಾವೇರಿ ನದಿಯ ಪಕ್ಕದಲ್ಲಿ ಹಾದು ಹೋಗಿದ್ದ ನಾಲೆ ಒಡೆದು ಗದ್ದೆಗಳಿಗೆ ನೀರು ಹರಿದಿದೆ. ರಭಸದಿಂದ ನೀರು ನುಗ್ಗಿದ್ದರಿಂದ ಇತ್ತೀಚಿಗಷ್ಟೆ ನಾಟಿ ಮಾಡಿದ್ದ ಭತ್ತದ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿದೆ.
ಹಂಪಾಪುರ ನಾಲೆ ಹಳೆಯದಾಗಿದ್ದು, ಗಂಧನ ಹಳ್ಳಿ ವ್ಯಾಪ್ತಿಯಲ್ಲಿ ಹರಿಯುವ ಹಳ್ಳ ಕೊಳ್ಳದ ನೀರು ನಾಲೆಗೆ ಸೇರಿದ್ದು ನಾಳೆ ಒಡೆಯಲು ಒಂದು ಕಾರಣ. ಇನ್ನೊಂದು ಕಡೆ ಹಳೆಯ ನಾಲೆ ಶಿಥಿಲಗೊಂಡಿತ್ತಲ್ಲದೆ, ಹೂಳು ತುಂಬಿಕೊಂಡಿತ್ತು ಇದರಿಂದ ಮಳೆ ನೀರಿನ ರಭಸಕ್ಕೆ ಸಿಕ್ಕಿ ನಾಲೆ ಒಡೆದು ಹೋಗಿದೆ ಎನ್ನಲಾಗಿದೆ.
ನಾಲೆ ಒಡೆದ ಪರಿಣಾಮ ಹತ್ತಾರು ಎಕರೆಯಲ್ಲಿ ಸಾಲ ಮಾಡಿ ಬೆಳೆದ ಭತ್ತ ಮತ್ತು ಕಬ್ಬಿನ ಬೆಳೆ ನಾಶವಾಗಿದೆ. ಇದರಿಂದ ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೀಡಾಗಿದ್ದಾರೆ.