ಇಬ್ಬರು ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡಿ: ಸಾ.ರಾ ಮಹೇಶ್ ಆಗ್ರಹ
ಮೈಸೂರು, ಮೇ 4: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಅಮಾಯಕರ ಸಾವಿಗೆ ಕಾರಣರಾದ ಡ್ರಗ್ ಕಂಟ್ರೋಲರ್, ಮೈಸೂರು ಜಿಲ್ಲಾಧಿಕಾರಿ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡಿ ಎಂದು ಶಾಸಕ ಸಾ.ರಾ ಮಹೇಶ್ ಆಗ್ರಹಿಸಿದರು.
ಆಕ್ಸಿಜನ್ ಕೊರತೆಯಿಂದ ಮೂವರು ಮೃತಪಟ್ಟಿದ್ದಾರೆಂದು ಆರೋಗ್ಯ ಸಚಿವರು ಹೇಳುತ್ತಾರೆ. ಹಾಗಾದರೆ, ಅದು ಸಾವಲ್ಲವೇ? ಇಷ್ಟೆಲ್ಲ ಅದ್ವಾನದ ನಡುವೆಯೂ ಜಿಲ್ಲಾಧಿಕಾರಿಯನ್ನು ಯಾರ ಒತ್ತಡಕ್ಕೆ ಮಣಿದು ಇಲ್ಲೇ ಉಳಿಸಿಕೊಂಡಿದ್ದೀರೋ ಗೊತ್ತಿಲ್ಲ. ತಕ್ಷಣ ಇವರನ್ನು ಅಮಾನತು ಮಾಡದೇ ಏನು ತನಿಖೆ ಮಾಡುತ್ತೀರಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮಂಡ್ಯ, ಚಾಮರಾಜನಗರಕ್ಕೆ ಆಕ್ಸಿಜನ್ ಕೊಡಬಾರದು ಎಂದು ಅಧಿಕಾರಿಗೆ ಯಾರು ಒತ್ತಡ ಹಾಕಿದ್ದರು ಎಂಬುದನ್ನು ಬಹಿರಂಗಪಡಿಸಿ ಕ್ರಮಕೈಗೊಳ್ಳಿ. ಇದು ಜನರ ಜೀವನದ ಪ್ರಶ್ನೆ. ಇಂತಹ ಉದ್ಧಟತನದ ಅಧಿಕಾರಿಗಳನ್ನು ಇಟ್ಟುಕೊಂಡು ಜನರ ಜೀವನ ಜೊತೆ ಆಟ ಆಡಬೇಡಿ. ಮೈಸೂರಂತಹ ದೊಡ್ಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪ್ರಾಮಾಣಿಕ, ದಕ್ಷ, ಅನುಭವಿ ಅಧಿಕಾರಿಯನ್ನು ನೇಮಿಸಿ ಎಂದು ಸಾ.ರಾ ಮಹೇಶ್ ಆಗ್ರಹಿಸಿದರು.
ಇಲ್ಲದಿದ್ದರೆ ಚಾಮರಾಜನಗರದಂತೆ ಮೈಸೂರಿನಲ್ಲೂ ಅದ್ವಾನ ಆಗಬಹುದು. ಡ್ರಗ್ ಕಂಟ್ರೋಲರ್, ಮೈಸೂರು ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಿ, ನಂತರ ತನಿಖೆ ನಡೆಸಿ ಎಂದು ಒತ್ತಾಯಿಸಿದರು.
ಚಾಮರಾಜನಗರ ಜಿಲ್ಲೆಗೆ ದಿನಕ್ಕೆ 350 ಆಕ್ಸಿಜನ್ ಸಿಲಿಂಡರ್ ಬೇಕು. ಆದರೆ, ಐದು ದಿನದಲ್ಲಿ ಬಂದಿದ್ದು ಕೇವಲ 650 ಸಿಲಿಂಡರ್. ಡ್ರಗ್ ಕಂಟ್ರೋಲರ್ ಈ ಬಗ್ಗೆ ಯಾಕೆ ಮಾಹಿತಿ ನೀಡಲಿಲ್ಲ? ಅಷ್ಟು ಪ್ರಮಾಣದಲ್ಲಿ ಯಾಕೆ ಒದಗಿಸಲು ಆಗುವುದಿಲ್ಲ ಎಂಬ ಮಾಹಿತಿಯನ್ನಾದರೂ ಅಧಿಕಾರಿಯು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಬೇಕಿತ್ತು. ಮಾಹಿತಿಯನ್ನೂ ನೀಡದೇ ಅಮಾಯಕರ ಸಾವಿಗೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದರು.
ಮೈಸೂರು ಜಿಲ್ಲಾಡಳಿತದಲ್ಲಿ ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಆಗುತ್ತಿರುವ ಅನುಮಾನ ಇದೆ. 2020ರ ಆಗಸ್ಟ್ನಲ್ಲಿ ಮೋಹನ್ ಭಂಡಾರ್ ಅವರಿಗೆ 3.75 ಲಕ್ಷ ರೂ. ಬಿಲ್ ಆಗಿದೆ. ಈ ರೀತಿ ಕೋಟ್ಯಂತರ ರೂ. ಬಿಲ್ ಆಗಿದೆ. ಕೋವಿಡ್ ಸಂಬಂಧ ಲಾಕ್ಡೌನ್ ಅವಧಿಯಲ್ಲಿ ಶಂಕಿತರಿಗೆ ಹೋಮ್ ಕ್ವಾರಂಟೈನ್ ಮಾಡಿದವರಿಗೆ ಮೋಹನ್ ಭಂಡಾರ್ ವಸ್ತುಗಳನ್ನು ಸರಬರಾಜು ಮಾಡಿರುವ ವಿವರ ಇದೆ. ಜಿಲ್ಲೆಯಲ್ಲಿ ಕ್ವಾರಂಟೈನ್ನಲ್ಲಿರುವ ಯಾರಿಗೆ ಏನೇನು ನೀಡಿದ್ದೀರಾ? ಬಕೆಟ್, ಮನೆ ಒರೆಸುವ ವಸ್ತುಗಳ ವಿವರವನ್ನು ಬಿಲ್ ಉಲ್ಲೇಖಿಸಲಾಗಿದೆ. ಎಷ್ಟು ಬಿಲ್ ಆಗಿದೆ ಎಂಬುದನ್ನು ಡಿಸಿ ಬಹಿರಂಗಪಡಿಸಲಿ ಎಂದು ಹೇಳಿದರು.
Recommended Video
ನೀವು ಸರಿಯಾಗಿದ್ದಿದ್ದರೆ 10ನೇ ತಿಂಗಳಿಂದ ಇಲ್ಲಿಯವರೆಗೂ ಯಾಕೆ ಯಾವುದೇ ಬಿಲ್ಗಳನ್ನು ನೀಡಿಲ್ಲ ಎಂದು ಪ್ರಶ್ನಿಸಿದರಲ್ಲದೇ, ಉದ್ಧಟತನದ ಅಧಿಕಾರಿಯಿಂದ ಮೈಸೂರು ಜಿಲ್ಲೆಗೆ ನ್ಯಾಯ ಸಿಗಲ್ಲ ಎಂದು ಶಾಸಕ ಸಾ.ರಾ ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.