ನಿವಾರ್ ಚಂಡಮಾರುತ ಎದುರಿಸಲು ಸಜ್ಜು: ಸಿಎಂ ಯಡಿಯೂರಪ್ಪ
ಮೈಸೂರು, ನವೆಂಬರ್ 25: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಎರಡು ದಿನಗಳಿಂದ ಮೈಸೂರು ಪ್ರವಾಸದಲ್ಲಿದ್ದಾರೆ. ಇಂದು ಅಪ್ಪಳಿಸಲಿರುವ ನಿವಾರ್ ಚಂಡಮಾರುತ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತಮಿಳುನಾಡು ಕರಾವಳಿ ತೀರದಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸಲಿದೆ ಎಂಬ ಮಾಹಿತಿ ಇದೆ ಎಂದರು.
ಚಂಡಮಾರುತದಿಂದ ರಾಜ್ಯದಲ್ಲಿಯೂ ಭಾರೀ ಮಳೆಯಾಗುವ ಸಂಭವವಿದ್ದು, ಸಂಬಂಧಪಟ್ಟ ಜಿಲ್ಲೆಯ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಂಡು ಅಲರ್ಟ್ ಆಗಿರಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ನ.25 ರಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಲಿರುವ ಸಿಎಂ ಯಡಿಯೂರಪ್ಪ
ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ, ಇಂದು ಇನ್ನೂ 25 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡುತ್ತೇವೆ. ಇಂದು ಸಂಜೆಯ ವೇಳೆಗೆ ಆದೇಶ ಹೊರಡಿಸಲಾಗುತ್ತದೆ. ಯಾರ್ಯಾರಿಗೆ ಅವಕಾಶ ತಪ್ಪಿದೆಯೋ ಅವರಿಗೆ ಮುಂದೆ ಅವಕಾಶ ನೀಡುತ್ತೇವೆ ಎಂದು ತಿಳಿಸಿದ ಯಡಿಯೂರಪ್ಪ, ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ ಸಂಪುಟ ವಿಸ್ತರಣೆ ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ ಎಂದರು.
ತಂಗಿಯ ಮೊಮ್ಮಗನ ವಿವಾಹ ಮಹೋತ್ಸವದಲ್ಲಿ ಯಡಿಯೂರಪ್ಪ ಭಾಗಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ತಮ್ಮ ತಂಗಿಯ ಮೊಮ್ಮಗನ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಿದರು.
ತಮ್ಮ ತಂಗಿಯ ಮಗಳಾದ ಬಿ.ಎಸ್.ಸಂಧ್ಯಾರಾಣಿ ಮತ್ತು ಎಸ್.ಸಿ ಅಶೋಕ್ ಅವರ ಪುತ್ರ ಅಜಯ್ ಎಸ್.ಎ ಹಾಗೂ ನಿಸರ್ಗ ಅವರ ವಿವಾಹವು ಬುಧವಾರ ಮೈಸೂರಿನಲ್ಲಿ ನಡೆಯಿತು.
ಮಂಗಳವಾರ ಸಂಜೆ ಕೂಡ ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ನಡೆದ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡು ನೂತನ ಜೋಡಿಗೆ ಹೂಗುಚ್ಛ ನೀಡಿ ಶುಭಕೋರಿದ್ದರು. ಆದರೆ ಮದುವೆ ಧಾರೆ ಮುಹೂರ್ತದ ವೇಳೆ ಯಾರೂ ಮಾಸ್ಕ್ ಧರಿಸಿದ್ದಾಗಲಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾಗಲಿ ಕಂಡು ಬರಲಿಲ್ಲ ಎನ್ನಲಾಗಿದೆ.