ಅರ್ಜಿ 80 ಸಾವಿರ, ಕೊಟ್ಟಿದ್ದು ಮಾತ್ರ 646 ಪಡಿತರ ಚೀಟಿ !
ಮೈಸೂರು, ಜೂನ್ 14 : ಜಿಲ್ಲೆಯಲ್ಲಿ ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ಆನ್ಲೈನ್ ಮೂಲಕ ಸ್ವೀಕೃತವಾಗಿರುವ 79,815 ಪಡಿತರ ಚೀಟಿಗಳಲ್ಲಿ ಕೇವಲ 646 ಪಡಿತರ ಚೀಟಿಗಳನ್ನು ವಿತರಿಸಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಡಳಿತ ವೈಖರಿಯ ವಿರುದ್ಧ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಮೇ ಮಾಹೆಯ ಅಂತ್ಯದವರೆಗೆ ಸಾಧಿಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಯನ್ನು ತರಾಟೆಗೆ ತೆಗೆದುಕೊಂಡರು. ಇಲಾಖಾವಾರು ಚರ್ಚೆಯಲ್ಲಿ ಇಲಾಖೆಯ ಅಧಿಕಾರಿ ಜನವರಿಯಿಂದ ಮೇ ಅಂತ್ಯದವರೆಗೆ 79815 ಅರ್ಜಿ ಗಳು ಸ್ವೀಕೃತವಾಗಿದ್ದು, 903 ಅರ್ಜಿಗಳ ಸ್ಥಳ ಪರಿಶೀಲನೆ ನಡೆಸಿ 646 ಕಾರ್ಡ್ಗಳನ್ನು ನೀಡಲಾಗಿದೆ. ಆಧಾರ್ ಕಾರ್ಡ್, ಇನ್ನಿತರ ಮಾಹಿತಿ ನೀಡದಿದ್ದರಿಂದ 2787 ಕಾರ್ಡ್ಗಳನ್ನು ರದ್ದು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
8 ತಿಂಗಳಿಂದ 646 ಕಾರ್ಡ್ ನೀಡಿದ್ದೇವೆಂದು ಹೇಳಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಅವರು, ಇಲಾಖೆಯ ಅಧಿಕಾರಿಗಳು ಏನು ಮಾಡುತ್ತೀದ್ದೀರಿ? ಕೇವಲ ಪಡಿತರ ಪಡೆಯಲು ಜನರು ನಿಮ್ಮಿಂದ ರೇಷನ್ ಕಾರ್ಡ್ ಕೇಳುತ್ತಿಲ್ಲ, ಹಲವು ಸೌಲಭ್ಯಗಳನ್ನು ಪಡೆಯುವುದಕ್ಕೆ ಕಾರ್ಡ್ ಬೇಕಾಗಿದೆ. ನೀವು ಕಾರ್ಡ್ ನೀಡದಿರುವುದಕ್ಕೆ ಜನಪ್ರತಿನಿಧಿಗಳು ಜನರಿಂದ ಮಾತು ಕೇಳಬೇಕಾಗಿದೆ. ಕೆಲಸ ಮಾಡಲು ನಿಮಗೆ ಏನು ಕಷ್ಟ ಎಂದು ಖಾರವಾಗಿ ಪಶ್ನಿಸಿದರು.
ಇದಕ್ಕೆ ಉತ್ತರಿಸಿದ ಇಲಾಖೆ ಅಧಿಕಾರಿ, ಮನೆ ಮನೆಗೆ ಹೋಗಿ ಪರಿಶೀಲನೆ ನಡೆಸಬೇಕು. ಗ್ರಾಮ ಲೆಕ್ಕಾಧಿಕಾರಿಗಳ ಸಂಘದವರು ಪಡಿತರ ಅರ್ಜಿಗಳ ಕೆಲಸವನ್ನು ಮಾಡುವುದಿಲ್ಲವೆಂದು ತೀರ್ಮಾನ ಕೈಗೊಂಡಿದ್ದಾರೆ. ನಮಗೆ ಸಿಬ್ಬಂದಿ ಕೊರತೆಯೂ ಇದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಜಿಪಂ ಸಿಇಒ ಪಿ.ಶಿವಶಂಕರ್ ಅವರು ತಿಂಗಳಿಗೆ 2 ಸಾವಿರ ಅರ್ಜಿ ವಿಲೇವಾರಿ ಮಾಡಿದರೆ 79 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲು 3 ವರ್ಷಗಳು ಬೇಕಾಗುತ್ತದೆ ಎಂದರು. ಇದಕ್ಕೆ ಉತ್ತರಿಸಿದ ಇಲಾಖೆಯ ಅಧಿಕಾರಿ ತಿಂಗಳಿಗೆ 10 ಸಾವಿರ ಅರ್ಜಿ ವಿಲೇವಾರಿ ಮಾಡುವುದಾಗಿ ಹೇಳಿದರು.
ಅನುದಾನ ಹೆಚ್ಚಿಸಿ: ಜಿಲ್ಲಾದ್ಯಂತ ಬಯಲು ರಂಗಮಂದಿರಗಳ ನಿರ್ಮಾಣಕ್ಕೆ ಹೆಚ್ಚು ಬೇಡಿಕೆಯಿದ್ದು, 1 ಬಯಲು ರಂಗಮಂದಿರ ನಿರ್ಮಿಸಲು ನೀಡುತ್ತಿರುವ 1 ಲಕ್ಷ ಹಣ ಸಾಲುತ್ತಿಲ್ಲ. 3 ಲಕ್ಷ ರೂ. ನೀಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ ಮನವಿ ಮಾಡಿದರು. ಸಿಇಒ ಅವರು ಮೊದಲು ಪಟ್ಟಿ ತಯಾರಿಸಿ ನೀಡುವಂತೆ ತಿಳಿಸಿದರು.