ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂಥ ಉತ್ತರ ನೀಡಿದ ಸಚಿವ ಜಿಟಿಡಿ
ಮೈಸೂರು, ಜುಲೈ 15: 'ನಮ್ಮ ಸರಕಾರಕ್ಕೆ ಏನೂ ಆಗಿಲ್ಲ, ಸುಭದ್ರವಾಗಿದೆ. ಆದರೆ ಮುಂದೇನಾಗುತ್ತದೆ ಎಂಬುದನ್ನು ಮಾತ್ರ ಹೇಳಲು ಸಾಧ್ಯವಿಲ್ಲ' ಎಂದು ಸಚಿವ ಜಿ.ಟಿ.ದೇವೇಗೌಡ ಮೈಸೂರಿನಲ್ಲಿ ಹೇಳಿದ್ದಾರೆ. ಆ ಮೂಲಕ ಸದ್ಯದ ಪರಿಸ್ಥಿತಿಗೆ ಅನ್ವಯವಾಗುವ ಹಾಗೂ ಶಾಶ್ವತವಾದ ಸತ್ಯವನ್ನು ಏಕಕಾಲದಲ್ಲಿ ಹೇಳಿದ್ದಾರೆ ಜಿಟಿಡಿ.
ಕರ್ನಾಟಕ ರಾಜಕೀಯ LIVE: ಜುಲೈ 18ಕ್ಕೆ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ
ಹೌದು, ಈ ಕ್ಷಣಕ್ಕೆ ಮೈತ್ರಿ ಸರಕಾರಕ್ಕೆ ಏನೂ ಆಗಿಲ್ಲ, ಸುಭದ್ರವಾಗಿಯೇ ಇದೆ ಎಂಬುದು ಸದ್ಯದ ಮಟ್ಟಿಗೆ ಸತ್ಯ. ಇನ್ನೊಂದು ಕ್ಷಣಕ್ಕೆ, ದಿನಕ್ಕೆ ಏನು ಆಗುತ್ತದೆ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ ಎಂಬುದು ಶಾಶ್ವತವಾದ ಸತ್ಯ. ಇದನ್ನೇ ಜೆಡಿಎಸ್ ಮುಖಂಡರೂ ಆದ ಸಚಿವ ಜಿ.ಟಿ.ದೇವೇಗೌಡರು ಎರಡೂ ಧಾಟಿಯಲ್ಲಿ ಉತ್ತರಿಸಿದ್ದಾರೆ.
ಸರಕಾರದ ಅಭದ್ರತೆ ಕುರಿತು ಪ್ರತಿಕ್ರಿಯಿಸಿದ ಜಿಟಿಡಿ, ನಮ್ಮ ಸರಕಾರಕ್ಕೆ ಸದ್ಯಕ್ಕೆ ಯಾವ ಕಂಟಕವೂ ಇಲ್ಲ. ಆದರೆ ಈ ಸಮ್ಮಿಶ್ರ ಸರಕಾರ ಐದು ವರ್ಷ ಇರುತ್ತದೆಯೋ ಇಲ್ಲವೋ ಎಂಬುದನ್ನು ಹೇಳಲಾಗದು ಎಂದು ತಿಳಿಸಿದ್ದಾರೆ.
ಆಪರೇಷನ್ ಮುಂಬೈನಲ್ಲಿ ಅಲ್ಲ: ಎಲ್ಲಾ ಬೆಂಗಳೂರಲ್ಲೇ: ಸಚಿವ ಜಿಟಿಡಿ
ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಗಾಗಿ ದಿನಾಂಕವನ್ನು ಕೇಳಿದ್ದಾರೆ. ಅಲ್ಲದೇ ಖುದ್ದು ಸ್ಪೀಕರ್ ಕೂಡ ಬೇಗ ದಿನಾಂಕ ತಿಳಿಸಿ ಎಂದು ಹೇಳಿದ್ದಾರೆ. ದಿನಾಂಕ ಕೊಟ್ಟಿರುವ ದಿನ ವಿಶ್ವಾಸ ಮತ ಯಾಚಿಸುತ್ತಾರೆ. ಆ ದಿನ ಎಲ್ಲರೂ ಬಂದೇ ಬರುವ ವಿಶ್ವಾಸವಿದೆ. ಹೀಗಾಗಿ ಸಮ್ಮಿಶ್ರ ಸರಕಾರ ಸುಭದ್ರ, ಯಾವುದೇ ಆತಂಕ ಬೇಡ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಐದು ವರ್ಷ ಸರಕಾರ ಇರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ವಿಶ್ವಾಸ ಮತದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ರಿವರ್ಸ್ ಆಪರೇಷನ್ ಮಾಡುವ ಬಗ್ಗೆ ಬಿಜೆಪಿಯ ಎಲ್ಲರಿಗೂ ಭಯ ಇದೆ. ಆದರೆ ಮುಂಬೈಗೆ ಮತ್ತೆ ಹೋಗುವ ಅಗತ್ಯವಿಲ್ಲ. ಎಲ್ಲವೂ ಇಲ್ಲೇ ನಡೆಯುತ್ತದೆ. ಅತೃಪ್ತ ಶಾಸಕರನ್ನು ಮನವೊಲಿಸುವ ಪ್ರಯತ್ನವನ್ನು ಎಲ್ಲರೂ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸರಕಾರ ನಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಜಿ.ಟಿ.ದೇವೇಗೌಡ.