ಕೊರೊನಾ ಮುಕ್ತ ಮೈಸೂರೇ ನಮ್ಮ ಗುರಿ: ಸೋಮಶೇಖರ್
ಮೈಸೂರು, ಏಪ್ರಿಲ್ 29: ನಂಜನಗೂಡು ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹತೋಟಿಗೆ ಬರುತ್ತಿವೆ. ಮೈಸೂರು ಹಾಗೂ ನಂಜನಗೂಡನ್ನು ಕೊರೊನಾ ಮುಕ್ತ ಮಾಡುವುದು ನಮ್ಮ ಗುರಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ನಂಜನಗೂಡು ಮಿನಿ ವಿಧಾನಸೌಧದಲ್ಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವರು, ಸ್ಥಳೀಯ ಶಾಸಕ ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಜಿಲ್ಲಾ ವರಿಷ್ಠಾದಿಕಾರಿ ರಿಷ್ಯಂತ್ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ: ಎಸ್.ಟಿ.ಸೋಮಶೇಖರ್
ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ವೈದ್ಯಕೀಯ ಸಿಬ್ಬಂದಿ ಅತ್ಯುತ್ತಮ ರೀತಿ ಕಾರ್ಯನಿರ್ವಹಿಸಿದ್ದಾರೆ. ಅಧಿಕಾರಿ ವರ್ಗದವರ ಸೇವೆಯೂ ಗಣನೀಯ ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು. ಜುಬಿಲಿಯಂಟ್ ಪ್ರಕರಣದ ಮೂಲ ಪತ್ತೆಯಾಗಬೇಕೆಂದು ಇಲ್ಲಿನ ಶಾಸಕ ಹರ್ಷವರ್ಧನ್ ನನಗೆ ಒತ್ತಾಯ ಮಾಡುತ್ತಿದ್ದರು. ಹೀಗಾಗಿ ಹರ್ಷಗುಪ್ತ ಅವರನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನೇಮಿಸಲಾಗಿದೆ ಎಂದು ತಿಳಿಸಿದರು.
ನಂಜನಗೂಡು ಜನತೆ ಯಾವುದೇ ಕಾರಣಕ್ಕೂ ಭಯ ಬೀಳುವುದು ಬೇಡ. ನಾನು ಈ ಹಿಂದೆಯೇ ಹೇಳಿದಂತೆ ಈ ಕ್ಷೇತ್ರದ ಜನತೆಯ ಪರ ಸರ್ಕಾರ, ಜಿಲ್ಲಾಡಳಿತ ಇದ್ದು, ಸಹಾಯಕ್ಕೆ ಬದ್ಧರಾಗಿದ್ದೇವೆ. ಈಗಾಗಲೇ ನಂಜನಗೂಡು ಕ್ಷೇತ್ರದಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದು, ಹೊಸ ಪ್ರಕರಣಗಳೂ ಪತ್ತೆಯಾಗುತ್ತಿಲ್ಲ ಎಂದರು.
ಕೊರೊನಾ ವೈರಸ್: ನಂಜನಗೂಡು ಜ್ಯುಬಿಲಿಯಂಟ್ ಕಂಪನಿ ಸೋಂಕು ಪ್ರಕರಣಕ್ಕೆ ತಿರುವು!
ಟಾಸ್ಕ್ ಫೋರ್ಸ್ ಅಧಿಕಾರಿಗಳ ಜೊತೆ ಸಭೆ ನಡೆದ ನಂತರ ಅಲ್ಲಿನ ಸ್ಥಳೀಯ ತಾಲೂಕು ಆಡಳಿತಕ್ಕೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರ ಮೂಲಕ 20 ಸಾವಿರ ಮಾಸ್ಕ್ ಗಳನ್ನು ಸಚಿವರು ಹಸ್ತಾಂತರಿಸಿದರು.