ಫ್ರೀ ಕಾಶ್ಮೀರ್ ಫಲಕ ಪ್ರದರ್ಶನ; ನಳಿನಿ ಪರ ವಕಾಲತ್ತಿಗೆ ಮುಂದಾದ ಸಿ.ಎಸ್.ದ್ವಾರಕಾನಾಥ್ ತಂಡ
ಮೈಸೂರು, ಜನವರಿ 20: ಜೆಎನ್ ಯು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಯಲ್ಲಿ "ಫ್ರೀ ಕಾಶ್ಮೀರ್' ಫಲಕ ಪ್ರದರ್ಶಿಸಿದ್ದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ರಾಜ್ಯದ ಇತರೆ ಜಿಲ್ಲೆಗಳ ವಕೀಲರು ಮುಂದೆ ಬಂದಿದ್ದು, ದ್ವಾರಕಾನಾಥ್ ಮತ್ತು ತಂಡವೂ ವಕಾಲತ್ತು ವಹಿಸಲು ಮುಂದಾಗಿದೆ.
ಕೆಲವೇ ದಿನಗಳ ಹಿಂದೆ ನಳಿನಿ ಪರ ವಕಾಲತ್ತು ವಹಿಸದಿರಲು ಮೈಸೂರು ವಕೀಲರು ತೀರ್ಮಾನಿಸಿದ್ದರು. ನಳಿನಿ ಪರ ಯಾರೂ ವಕಾಲತ್ತು ವಹಿಸಬಾರದೆಂಬ ನಿರ್ಣಯ ಕೈಗೊಂಡಿರುವುದಾಗಿ ಮೈಸೂರು ವಕೀಲರ ಅಧ್ಯಕ್ಷ ಆನಂದ್ ಕುಮಾರ್ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಕಾಲತ್ತು ವಹಿಸಲು ರಾಜ್ಯದ ಇತರೆ ಜಿಲ್ಲೆಗಳ ವಕೀಲರು ಮುಂದೆ ಬಂದಿದ್ದರು.
"ಫ್ರೀ ಕಾಶ್ಮೀರ್" ಪ್ರಕರಣ: ನಳಿನಿ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ
ಬೆಂಗಳೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ವಕೀಲರು ಬಂದಿದ್ದು, 200ಕ್ಕೂ ಹೆಚ್ಚು ವಕೀಲರು ಸಹಿ ಮಾಡಿರುವ ವಕಾಲತ್ತು ಪತ್ರದೊಂದಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಇದೀಗ ದ್ವಾರಕನಾಥ್ ಮತ್ತು ತಂಡ ವಕಾಲತ್ತು ವಹಿಸಿಕೊಳ್ಳಲು ಮುಂದೆ ಬಂದಿದ್ದು, 129 ವಕೀಲರ ಸಹಿ ಇರುವ ವಕಾಲತ್ತು ಅರ್ಜಿಯನ್ನು ತಂಡ ಸಲ್ಲಿಸಿದೆ. ನಳಿನಿ ಮತ್ತು ಮರಿದೇವಯ್ಯ ಪರ ಜಾಮೀನು ಅರ್ಜಿ ಸಲ್ಲಿಸಿದ್ದು, ವಕಾಲತ್ತು ಸ್ವೀಕರಿಸಿ, ನ್ಯಾಯಾಲಯವು ವಿಚಾರಣೆಯನ್ನು ಜ.24ಕ್ಕೆ ಮುಂದೂಡಿದೆ.
ಮತ್ತೊಂದೆಡೆ ಮೈಸೂರು ವಕೀಲರ ಸಂಘ ಜನರಲ್ ಬಾಡಿ ಮೀಟಿಂಗ್ ಕರೆದಿದ್ದು, ಪ್ರಕರಣ ಕುರಿತು ಮತ್ತೊಮ್ಮೆ ತಮ್ಮ ನಿಲುವನ್ನು ಪ್ರಕಟಿಸುವುದಾಗಿ ತಿಳಿಸಿದೆ.
ಮೈಸೂರು ವಕೀಲರ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ನಳಿನಿ ಪರ ವಕೀಲರಾದ ಜಗದೀಶ್, "ಯಾವುದೇ ಪ್ರಕರಣವಾದರೂ ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು. ಪ್ರಕರಣವನ್ನ ಪರಿಶೀಲನೆ ಮಾಡಿದ ನಂತರ ಸತ್ಯ ತಿಳಿಯಲಿದೆ. ಈ ಪ್ರಕರಣ ಸಂಬಂಧ ವಕಾಲತ್ತು ವಹಿಸದಿದ್ದರೆ ಪ್ರಕರಣ ಇಲ್ಲಿಗೆ ನಿಲ್ಲುತ್ತದೆ. ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ. ತಪ್ಪಿತಸ್ಥರಾದರೆ ಅವರಿಗೆ ಶಿಕ್ಷೆಯಾಗಲಿ, ತಪ್ಪಿತಸ್ಥರಲ್ಲದಿದ್ದರೆ ಅವರಿಗೆ ನ್ಯಾಯಸಿಗಲಿ. ಈ ವಿಚಾರದಲ್ಲಿ ಮೈಸೂರು ವಕೀಲರ ಸಂಘದ ನಿರ್ಧಾರ ಅವರಿಗೆ ಬಿಟ್ಟದ್ದು" ಎಂದಿದ್ದಾರೆ.
"ಮೈಸೂರು ವಕೀಲರು ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.