ಮಹಿಷ ದಸರಾ; ಪೊಲೀಸರನ್ನು ತರಾಟೆ ತೆಗೆದುಕೊಂಡ ಪ್ರತಾಪ್ ಸಿಂಹ
Recommended Video
ಮೈಸೂರು, ಸೆಪ್ಟೆಂಬರ್ 27: ಚಾಮುಂಡಿ ಬೆಟ್ಟ ಹಾಗೂ ಟೌನ್ ಹಾಲ್ ಮುಂಭಾಗದ 500 ಮೀಟರ್ ದೂರದವರೆಗೆ ಯಾವುದೇ ಸಭೆ, ಸಮಾರಂಭ ಹಾಗೂ ಮೆರವಣಿಗೆ ನಡೆಸದಂತೆ ನಗರ ಪೋಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಈ ನಿಷೇಧಾಜ್ಞೆ 27ರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ವಿಶ್ವ ವಿಖ್ಯಾತ ದಸರಾ ಆಚರಣೆ ಸಂದರ್ಭದಲ್ಲೇ ಕೆಲವು ಪ್ರಗತಿಪರರು ಮಹಿಷ ದಸರಾ ಆಚರಣೆ ಮಾಡಲು ಪ್ರಯತ್ನಿಸಿರುವುದನ್ನು ಮೈಸೂರು ನಗರದ ದಸರಾ ಸಮಿತಿ, ಅನೇಕ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು.
ನಿನ್ನೆ ಮಹಿಷ ದಸರಾ ಆಚರಣೆ ಕುರಿತು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದು, ಆಚರಣೆಗೆ ಅನುಮತಿ ನೀಡಿದ್ದಕ್ಕೆ ಸಾರ್ವಜನಿಕರ ಮಧ್ಯೆಯೇ ಡಿಸಿಪಿ ಮುತ್ತುರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಜೊತೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದ ಪ್ರತಾಪ್ ಸಿಂಹ ದಸರಾ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸುತ್ತಿದ್ದರು. ಆಗ ಮಹಿಷ ದಸರಾ ಆಚರಣೆಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದುದನ್ನು ಕಂಡ ಅವರು ಕೆಂಡಾಮಂಡಲರಾಗಿದ್ದರು. ಕೂಡಲೇ ತೆರವುಗೊಳಿಸುವಂತೆ ತರಾಟೆಗೆ ತೆಗೆದುಕೊಂಡಿದ್ದರು.
ಬೆಂಗಳೂರು-ಬೆಳಗಾವಿ ನಡುವೆ ದಸರಾ ವಿಶೇಷ ರೈಲು, ವೇಳಾಪಟ್ಟಿ
ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವಾಗುವ ಸಂಭವವಿರುವುದರಿಂದ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.