ಯಡಿಯೂರಪ್ಪರದು ಕೆಟ್ಟ, ಭ್ರಷ್ಟ ಸರ್ಕಾರ; ಸಿದ್ದರಾಮಯ್ಯ ವಾಗ್ದಾಳಿ
ಮೈಸೂರು, ಜುಲೈ 7: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ವರ್ಸ್ಟ್, ಕರಪ್ಷನ್ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರು ನಗರ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಹಾಯಹಸ್ತ ಹಾಗೂ ಸೈಕಲ್ ಜಾಥಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, "ಇದು ಬಡವರ ವಿರೋಧಿ, ಭ್ರಷ್ಟ ಸರ್ಕಾರ, ಈ ಸರ್ಕಾರವನ್ನು ಕಿತ್ತೊಗೆಯಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ. ನಾವು ಅಧಿಕಾರಕ್ಕೆ ಬರುವುದು ಮುಖ್ಯ ಅಲ್ಲ, ರಾಜ್ಯ ಉಳಿಯೊದು ಮುಖ್ಯ,'' ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
"ಸಿಎಂ ಯಡಿಯೂರಪ್ಪ ಎರಡು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇವರನ್ನು ಹೀಗೆ ಬಿಟ್ಟರೆ ಮುಂದಿನ ವರ್ಷಗಳಲ್ಲಿ ಇನ್ನೂ ಎರಡೂವರೆ ಲಕ್ಷ ಕೋಟಿ ಸಾಲ ಮಾಡ್ತಾನೆ. ಇದು ಮುಂದುವರಿದರೆ ರಾಜ್ಯ ಉಳಿಯುತ್ತಾ? ಇಂತಹ ಸರ್ಕಾರ ನಮಗೆ ಬೇಕಾ? ನಾನು ಸಿಎಂ ಆಗಿದ್ದಾಗ 1 ಲಕ್ಷದ 25 ಸಾವಿರ ಕೋಟಿ ಸಾಲ ಮಾಡಿದ್ದು, ಎರಡೇ ವರ್ಷದಲ್ಲಿ ಯಡಿಯೂರಪ್ಪ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇನ್ನುಳಿದ ಎರಡು ವರ್ಷ ಇನ್ನೆಷ್ಟು ಸಾಲ ಮಾಡಬಹುದು? ಹೀಗೆ ಮುಂದುವರಿದರೆ ರಾಜ್ಯ ಉಳಿಯುತ್ತಾ?,'' ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಮತ್ತೆ 10 ಕೆಜಿ ಅಕ್ಕಿ ಕೊಡುತ್ತೇವೆ. ಯಡಿಯೂರಪ್ಪ ಬಂದ ಮೇಲೆ ಅಪ್ಪ- ಮಕ್ಕಳಿಗೆ ಬರೀ ದುಡ್ಡು ಹೊಡೆಯವುದೇ ಕೆಲಸ ಆಗಿದೆ. ನಾನೆಂದೂ ಇಂತಹ ಕೆಟ್ಟ ಸರ್ಕಾರವನ್ನು ನೋಡಿರಲಿಲ್ಲ,'' ಎಂದು ಕಿಡಿಕಾರಿದ ಸಿದ್ದರಾಮಯ್ಯ, "ಪ್ರಧಾನಿ ನರೇಂದ್ರ ಮೋದಿ ಬರೀ ಸುಳ್ಳು ಹೇಳುವುದೇ ಆಗಿದೆ. ಮೋದಿ ಏನ್ ಹೇಳ್ತಾರೋ ಅದರ ವಿರುದ್ಧ ಅರ್ಥ ಮಾಡ್ಕೋಬೇಕು. ಅಚ್ಛೆ ದಿನ್ ಆಯೇಗಾ ಅಂದ್ರೆ the country has come to bad days ಅಂತ ಅರ್ಥ ಮಾಡಿಕೊಳ್ಳಬೇಕು,'' ಎಂದು ಟೀಕಿಸಿದರು.
"ಅಚ್ಛೆ ದಿನ್ ಅಂದರೆ ಕೆಟ್ಟ ದಿನ ಅಂತ ಅರ್ಥ ಮಾಡ್ಕೋಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅತೀತಿ ಭ್ರಷ್ಟ ಸರ್ಕಾರ ಅಂದ್ರೆ ಅದು ಯಡಿಯೂರಪ್ಪನ ಸರ್ಕಾರ,'' ಎಂದು ಹರಿಹಾಯ್ದರು.
ಇದೇ ವೇಳೆ ಪಕ್ಷಾಂತರಿಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, "ಪಕ್ಷಕ್ಕೆ ದ್ರೋಹ ಬಗೆಯೋರನ್ನು ಸೇರಿಸಿಕೊಳ್ಳಬೇಡಿ. ಅದರಲ್ಲೂ ಪದೇ ಪದೆ ದ್ರೋಹ ಬಗೆಯೋರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲೇಬೇಡಿ. ಕೇವಲ ಅಧಿಕಾರಕ್ಕಾಗಿ ಬರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಬರುವವರನ್ನು ಸೇರಿಸಿಕೊಳ್ಳಿ,'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.
ಇದಕ್ಕೂ ಮುನ್ನ ತಮ್ಮ ನಿವಾಸದ ಎದುರು ನಡೆದ ಸೈಕಲ್ ಜಾಥಾಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಸಿದ್ದರಾಮಯ್ಯ ನಿವಾಸದ ಎದುರು ಅನೇಕ ಕಾರ್ಯಕರ್ತರು ಜಮಾಯಿಸಿದ ಪರಿಣಾಮ, ನೂಕುನುಗ್ಗಲು ಏರ್ಪಟ್ಟಿತು. ಕೊರೊನಾ ನಿಯಮವನ್ನೆಲ್ಲಾ ಗಾಳಿಗೆ ತೂರಿ ಹೆಚ್ಚಿನ ಜನರು ಆಗಮಿಸಿದ್ದರ ಪರಿಣಾಮ, ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು.