ಪಕ್ಷಾಂತರಿಗಳಿಗೆ 10 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು: ಸಿದ್ದರಾಮಯ್ಯ
ಮೈಸೂರು, ಜೂ 23: ಮಹಾರಾಷ್ಟ್ರದಲ್ಲಿ ಬಿಜೆಪಿ ಭ್ರಷ್ಟಾಚಾರದ ಹಣದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿ ಕಾಂಗ್ರೆಸ್ ನವಸಂಕಲ್ಪ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, "ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಕರ್ನಾಟಕದ ಬಿಜೆಪಿಯ ಚಾಳಿ ದೇಶಕ್ಕೆ ಹಬ್ಬಿಸಿದ್ದಾರೆ. ಇದನ್ನು ತಡೆಗಟ್ಟಲು ಪಕ್ಷಾಂತರ ಕಾಯ್ದೆ ತಿದ್ದುಪಡಿ ಆಗಬೇಕು. ಒಂದು ಪಕ್ಷದಿಂದ ಆಯ್ಕೆಯಾದವನು ಬೇರೆ ಸ್ಥಾನಕ್ಕೆ ಹೋಗದಂತೆ ತಡೆಯಬೇಕು. ಹೋದರೆ 10 ವರ್ಷ ಆತ ಚುನಾವಣೆಗೆ ನಿಲ್ಲದಂತೆ ಆದೇಶ ಮಾಡಬೇಕು. ಪ್ರಜಾಪ್ರಭುತ್ವದ ಉಳಿವಿಗೆ ಇದರ ಅವಶ್ಯಕತೆ ಇದೆ. ಆಪರೇಷನ್ ಕಮಲ ಹುಟ್ಟು ಹಾಕಿದ್ದೇ ಬಿಜೆಪಿಯವರು. 2008ರಲ್ಲಿ ಯಡಿಯೂರಪ್ಪ ಮೊದಲ ಆಪರೇಷನ್ ಕಮಲ ಮಾಡಿದರು. ಎಲ್ಲೂ ಅವರಿಗೆ ಬಹುಮತ ಬಂದಿಲ್ಲ. ಎಲ್ಲಾ ಕಡೆ ಹಣ ಕೊಟ್ಟಿ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ದಾರೆ.
ನಾಮಕವಾಸ್ತೆಗೆ ಮಾತ್ರ ರಾಷ್ಟ್ರಪತಿ ಹುದ್ದೆ
ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಸಾಮಾಜಿಕ ನ್ಯಾಯ ಅಲ್ಲ ವಿಶೇಷವೂ ಅಲ್ಲ. ಆ ರೀತಿ ಇದ್ದರೆ ಆರ್ಎಸ್ ಎಸ್ ಮುಖ್ಯ ಸರಸಂಚಾಲಕರಾಗಿ ಆಯ್ಕೆ ಮಾಡಲಿ. ಮೋಹನ್ ಭಾಗವತ್ ಸ್ಥಾನಕ್ಕೆ ಇಂತಹ ಮಹಿಳೆಯನ್ನು ತರಲಿ. ಆಕೆ ಬಿಜೆಪಿಯವರೇ ಆಗಿದ್ದಾರೆ. ರಾಜ್ಯಪಾಲರು ಸೇರಿ ಹಲವು ಹುದ್ದೆ ಅಲಂಕರಿಸಿದ್ದಾರೆ. ರಾಷ್ಟ್ರಪತಿಯಾಗಿ ಅಂತಹ ಕೆಲಸ ಮಾಡಲು ಇವರು ಬಿಡಲ್ಲ. ಹಿಂದೆ ರಾಜೇಂದ್ರ ಪ್ರಸಾದ್ ಅವರು ಮಾಡಿದಂತೆ ಕೆಲಸ ಮಾಡಲು ಆಗಿತ್ತಾ? ರಾಮನಾಥ್ ಕೋವಿಂದ್ ಕೂಡ ರಾಷ್ಟ್ರಪತಿ ಆಗಿದ್ದರು. ಅವರು ಏನು ಮಾಡಿದರು? ಇದು ಅವರಂತೆ ನಾಮಕವಾಸ್ತೆಗೆ ಮಾಡುತ್ತಿದ್ದಾರೆ ಎಂದರು.
ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ?
ಮೋದಿ ಹೇಳಿದ ಡಬಲ್ ಇಂಜಿನ್ ಸರ್ಕಾರದ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ? ಅದು ಮಾಡಿರುವ ಅಭಿವೃದ್ಧಿ ಕಾರ್ಯದ ಪಟ್ಟಿ ಕೊಡಿ. ಸುಮ್ಮನೇ ಸುಳ್ಳು ಹೇಳಿ ಮೋದಿ ಹೋಗಿದ್ದಾರೆ. ಮೋದಿ ಏನು ಮಾಡುವುದಿಲ್ಲ ಅನ್ನೋದು ರಾಜ್ಯ ನಾಯಕರಿಗೆ ಗೊತ್ತಿದೆ. ಅದಕ್ಕೆ ಅವರು ಯಾವುದೇ ಮನವಿ ನೀಡಿಲ್ಲ. ಮೋದಿ ಬಂದಿದ್ದಕ್ಕೆ 25 ಕೋಟಿಗಿಂತ ಹೆಚ್ಚು ಖರ್ಚು ಮಾಡಲಾಗಿದೆ. ರಸ್ತೆ ಆಗಿದಷ್ಟೇ ಜನರಿಗೆ ಆದ ಲಾಭ ಎಂದರು.
ಸತ್ಯ ಗೊತ್ತಿಲ್ಲದೆ ನಾನು ಮಾತನಾಡಲ್ಲ
ರಮೇಶ್ ಜಾರಕಿಹೊಳಿ ಪ್ರಕರಣ ಮತ್ತೆ ಸಿಬಿಐಗೆ ವಿಚಾರದ ಬಗ್ಗೆ ಮಾತನಾಡಿದ ಅವರು, ಆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸತ್ಯ ಗೊತ್ತಿಲ್ಲದೆ ನಾನು ಮಾತನಾಡುವುದಿಲ್ಲ. ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿ, ಬೇರೆ ಪಕ್ಷದ ಶಾಸಕನ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಹೋಗಿ ಅವರು ಮೈಸೂರಿನಲ್ಲೇ ಇದ್ದಾರೆ ಅವರನ್ನೇ ಕೇಳಿ. ನನ್ನನ್ನು ಏಕೆ ಕೇಳುತ್ತೀರಿ ಎಂದು ಗರಂ ಆದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾಧು, ಮಂಜುನಾಥ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.
Recommended Video