ಬಿಜೆಪಿ ʻಭಕ್ತʼರಿಗೆ ಬಂಕ್ಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆಯಿರಿ
ಮೈಸೂರು, ಫೆಬ್ರವರಿ 15: ದಿನನಿತ್ಯದ ವಸ್ತುಗಳ ದರ ವೇಗವಾಗಿ ಏರುತ್ತಿದ್ದರೂ ದೇಶದ ಅಭಿವೃದ್ಧಿಗಾಗಿ ಅನ್ನುತ್ತಿರುವ ಬಿಜೆಪಿ ʻಭಕ್ತʼರಿಗೆ ಬಂಕ್ಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆದು 1 ಸಾವಿರ ರೂ.ಗೆ ಪೆಟ್ರೋಲ್-ಡಿಸೇಲ್ ಮತ್ತು ಮತ್ತು ಗ್ಯಾಸ್ ಅನ್ನು 5 ಸಾವಿರ ರೂ.ಗೆ ನೀಡಿ ಸರ್ಕಾರದ ಖಜಾನೆ ತುಂಬಿಕೊಳ್ಳಲಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ವಾಗ್ದಾಳಿ ನಡೆಸಿದರು.
ಸೋಮವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರು, ಬಿಪಿಎಲ್ ಕಾರ್ಡ್ದಾರರಿಗೆ ಕಡಿಮೆ ದರದಲ್ಲಿ ಗ್ಯಾಸ್ ನೀಡಿ. ಅಧಿಕಾರಕ್ಕೇರುವ ಮುನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಪಡಿತರ ವ್ಯವಸ್ಥೆಯಲ್ಲಿಯೇ 300 ರೂ.ಗೆ ಗ್ಯಾಸ್ ನೀಡಬೇಕು. ಇಲ್ಲವಾದರೆ ಕುರ್ಚಿ ಬಿಟ್ಟು ಇಳಿಯಿರಿ. ನಾವು ಸರ್ಕಾರಕ್ಕೆ, ಸಾಮಾನ್ಯ ಜನರಿಗೆ ನೆರವಾಗುತ್ತೇವೆ ಎಂದರು.
ಇದು ರಾಯಲ್ ಸರ್ಕಾರ; ರಾಯಲ್ ಆಗಿ ಬದುಕುವವರಿಗೆ ಮಾತ್ರ ಇಲ್ಲಿ ಅವಕಾಶ
ಜನ ವಿರೋಧಿ ಮತ್ತು ಮಹಿಳಾ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ನಾಯಕರು ಮತ್ತು ಸರ್ಕಾರ ನಿಜವಾದ ದೇಶದ್ರೋಹಿಗಳು. ʻಭಾರತ್ ಮಾತಾ ಕೀ ಜೈʼ ಎನ್ನುವ ಬಿಜೆಪಿ ಸರ್ಕಾರ, ಹಿಂದೂ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಶೋಷಿಸುತ್ತಿದೆ. ಎಲ್ಪಿಜಿ ಗ್ಯಾಸ್ ಬೆಲೆ ಒಂದೇ ತಿಂಗಳಲ್ಲಿ 75 ರೂ. ಹೆಚ್ಚಳ ಮಾಡಿ ಮಹಿಳಾ ವಿರೋಧಿ ಮುಖವನ್ನು ಬಿಚ್ಚಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪರ ಧ್ವನಿ ಎತ್ತಿದರೆ ದೇಶವಿರೋಧಿ ಪಟ್ಟ ಕಟ್ಟಲಾಗುತ್ತಿದೆ. ಇನ್ನು ಬೆಲೆ ಏರಿಕೆ ಬಗ್ಗೆ ಮಾತನಾಡಿದರಂತೂ ನಮ್ಮ ಮೇಲೆಯೂ ದೇಶದ್ರೋಹಿ ಹಣೆಪಟ್ಟಿ ಕಟ್ಟುವ ಭಯ ಕಾಡುತ್ತಿದೆ. ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು. ಯಾರಿಗಾಗಿ ಬೆಲೆ ಏರಿಕೆ ಮಾಡುತ್ತಿದ್ದೀರಾ? 70 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎನ್ನುವ ಕೇಂದ್ರ ಸರ್ಕಾರ, ಕಳೆದ 7 ವರ್ಷಗಳಲ್ಲಿ ದೇಶವನ್ನು 100 ವರ್ಷ ಹಿಂದಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಆರ್.ಪುಷ್ಪವಲ್ಲಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಜಗನ್ನಾಥ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.