ದಸರಾ ಉದ್ಘಾಟನೆಯಲ್ಲಿ ಈ ಬಾರಿ 200 ಮಂದಿಗೆ ಮಾತ್ರ ಅವಕಾಶ
ಮೈಸೂರು, ಸೆಪ್ಟೆಂಬರ್ 24: ರಾಜ್ಯ ಸರ್ಕಾರವು ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸುವ ತೀರ್ಮಾನ ತೆಗೆದುಕೊಂಡಿದ್ದು ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಮಹೋತ್ಸವ ಉದ್ಘಾಟನೆಗೆ 200 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಉದ್ಘಾಟನಾ ಸಮಾರಂಭಕ್ಕೆ ಸೀಮಿತ ಸಂಖ್ಯೆಯ ಆಹ್ವಾನಿತರು, ಅಧಿಕಾರಿ ವರ್ಗದವರು ಮತ್ತು ಮಾಧ್ಯಮದವರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ಇರದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾಧಿಕಾರಿ ಬಿ. ಶರತ್, ನಗರ ಪೋಲಿಸ್ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಪ್ರಕಾಶ್ ಗೌಡ ಸೇರಿದಂತೆ ಇತರ ಅಧಿಕಾರಿಗಳು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಳ ಸಮಾರಂಭದ ರೂಪು ರೇಷೆಗಳನ್ನು ಸಿದ್ಧಪಡಿಸಿದ್ದಾರೆ.
ಮೈಸೂರು ದಸರಾ; ಉತ್ಸವದ ಸಿದ್ಧತೆಗೆ ಉಪಸಮಿತಿಗಳ ರಚನೆ
200 ಆಸನಗಳಿಗಷ್ಟೇ ಸೀಮಿತ
ಚಾಮುಂಡೇಶ್ವರಿ ದೇವಸ್ಥಾನದ ಪಕ್ಕದಲ್ಲೇ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಿ 200 ಆಸನಗಳಿಗೆ ಮೀರದಂತೆ ಕುಳಿತುಕೊಳ್ಳಲು ಶಾಮಿಯಾನದ ವ್ಯವಸ್ಥೆ ಮಾಡಲಾಗುತ್ತಿದೆ. ದಸರಾ ಉದ್ಘಾಟಕರು, ಮುಖ್ಯಮಂತ್ರಿಗಳು, ಸಚಿವರು, ಜನಪ್ರತಿನಿಧಿಗಳಿಗೆ ವೇದಿಕೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಮುಖರಾದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಅವಕಾಶವಿದೆ.
ಸಾರ್ವಜನಿಕರಿಗೆ ಬೆಟ್ಟಕ್ಕೆ ನಿರ್ಬಂಧ
ಸಾರ್ವಜನಿಕರಿಗೆ ಅಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಬಾರದಂತೆ ನಿರ್ಬಂಧ ವಿಧಿಸಲಾಗಿದ್ದು, ಭದ್ರತಾ ಕ್ರಮ, ವಾಹನ ನಿಲುಗಡೆ ಸೇರಿದಂತೆ ದಸರಾ ಉದ್ಘಾಟನೆಗೆ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಶರತ್ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರಳ ಆಚರಣೆ ಆಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಎಂದಿನ ಸಡಗರ ಸಂಭ್ರಮ ಕಾಣುತ್ತಿಲ್ಲ.
ಈ ಬಾರಿ ಮೈಸೂರು ದಸರಾ ಸಂಭ್ರಮ ಬರೀ ನೆನಪಷ್ಟೆ
ದಸರಾ ಉಪಸಮಿತಿಗಳ ರಚನೆ
ನಾಡಹಬ್ಬ ದಸರಾ ಉತ್ಸವದ ಕುರಿತ ಸಿದ್ಧತೆಗೆ ನಿನ್ನೆಯಷ್ಟೇ ದಸರಾ ಉಪಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಕುರಿತು ನಿನ್ನೆ ಮಾಹಿತಿ ನೀಡಿರುವ ಡಿಸಿ, ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಸ್ವಾಗತ ಮತ್ತು ಆಮಂತ್ರಣ ಸಮಿತಿ, ದೀಪಾಲಂಕಾರ ಸಮಿತಿ, ಸ್ವಚ್ಛತೆ ಮತ್ತು ವ್ಯವಸ್ಥೆ ಸಮಿತಿ, ಸ್ತಬ್ಧ ಚಿತ್ರ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ದಸರಾ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಉಪಸಮಿತಿಗಳ ಉಪ ವಿಶೇಷಾಧಿಕಾರಿ, ಕಾರ್ಯದರ್ಶಿ ಮತ್ತು ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಮಾವುತ, ಕಾವಾಡಿ ಕುಟುಂಬಗಳಿಗೂ ಇಲ್ಲ ಅವಕಾಶ
ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಕಾವಾಡಿ, ಮಾವುತರ ಕುಟುಂಬಕ್ಕೂ ದಸರಾಗೆ ಅವಕಾಶವಿಲ್ಲದಂತಾಗಿದೆ. ಈ ಬಾರಿ ಸರ್ಕಾರ ದಸರಾ ಉತ್ಸವಕ್ಕೆ ಕೇವಲ ಐದು ಆನೆಗಳನ್ನು ನಿಗದಿಪಡಿಸಿದೆ. ಮಾವುತ ಮತ್ತು ಕಾವಾಡಿಗಳಿಗೆ ಮಾತ್ರ ಆಹ್ವಾನ ನೀಡಿದ್ದು, ಅವರ ಕುಟುಂಬದವರಿಗೆ ನಿರ್ಬಂಧ ವಿಧಿಸಿದೆ.