ಮುಡಾ ನಿವೇಶನಗಳ ಅಭಿವೃದ್ಧಿಗೆ ಒನ್ ಟೈಂ ಸೆಟ್ಲಮೆಂಟ್
ಮೈಸೂರು, ಜನವರಿ 19: " ಮೈಸೂರು ನಗರಾಭಿವೃದ್ಧಿಗೆ ನಮ್ಮ ಸರ್ಕಾರದಿಂದ ಏನಾಗಬೇಕು ಎಂಬುದನ್ನು ನೋಡಿಕೊಳ್ಳುತ್ತೇವೆ. ಮುಡಾಕ್ಕೆ ಇರುವ ಅಡೆತಡೆಯನ್ನು ತೊಡೆದುಹಾಕುವ ವಿಷಯದಲ್ಲಿ ನಾನು ಪರವಾಗಿರುತ್ತೇನೆ" ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಮಂಗಳವಾರ ವಿಜಯನಗರ ಬಡಾವಣೆ ಪರಿಶೀಲನೆ ಬಳಿಕ ಮಾತನಾಡಿದ ಸಚಿವರು, "ಒಂದು ವೇಳೆ ಈಗಿರುವ ಅಡೆತಡೆಗಳನ್ನು ತೆಗೆದರೆ ಬಹುತೇಕ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ಸಿಗಲಿದೆ. ಅಲ್ಲದೆ, ವಿಜಯನಗರ ಬಡಾವಣೆಯನ್ನು ಕಾರ್ಪೋರೇಶನ್ಗೆ ಸೇರಿಸಬೇಕು ಎಂಬ ವಿಷಯದ ಬಗ್ಗೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ" ಎಂದರು.
ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಟೌನ್ ಶಿಪ್; ಎಷ್ಟು ಮನೆಗಳು?
"ಈಗಾಗಲೇ ಇರುವ ನಿವೇಶನಗಳನ್ನು ಮಾರಾಟ ಮಾಡಿದಾಗ ಬರುವ ಹಣವನ್ನು ಮುಡಾ ವ್ಯಾಪ್ತಿಯಲ್ಲಿರುವ ಬಡಾವಣೆಗಳಿಗೆ ಖರ್ಚು ಮಾಡಿದರೆ ಅಭಿವೃದ್ಧಿಯಾಗತ್ತದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವರಾದ ಬಿ. ಎ. ಬಸವರಾಜು ಅವರ ಜೊತೆಯೂ ಚರ್ಚಿಸಲಾಗಿದೆ. ಅವರ ಜೊತೆ ಇತರ ಸಮಸ್ಯೆಗಳ ಬಗ್ಗೆಯೂ 2 ಸುತ್ತಿನ ಸಭೆಗಳನ್ನೂ ನಡೆಸಲಾಗಿದೆ" ಎಂದು ತಿಳಿಸಿದರು.
ಒನ್ ಟೈಂ ಸೆಟ್ಲಮೆಂಟ್; "ಒಂದೇ ಬಾರಿ ಬಡಾವಣೆಗಳ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರ ವಿಶ್ವಾಸ ಪಡೆದು, ವರದಿ ಸಿದ್ಧಪಡಿಸಿ ಪ್ರಸ್ತಾವನೆ ಕೊಟ್ಟರೆ ಒಂದೇ ದಿನದಲ್ಲಿ ಸರ್ಕಾರದಿಂದ ಅನುಮೋದನೆ ಕೊಡಿಸುವ ಕೆಲಸವನ್ನು ನಾನು ಮಾಡುತ್ತೇನೆ" ಎಂದು ಸಚಿವರು ಭರವಸೆ ನೀಡಿದರು.
6 ಕೋಟಿ ಸಾಲಕ್ಕೆ ಮೂಡ ಸೈಟ್ ನಕಲಿ ದಾಖಲೆ; ಬಂಧನ
"ಇದೊಂದು ರೀತಿಯಲ್ಲಿ ಒನ್ ಟೈಂ ಸೆಟ್ಲಮೆಂಟ್ ಇದ್ದಹಾಗೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆದರೆ, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕೂಲಂಕಷವಾಗಿ ಅಧ್ಯಯನ ಮಾಡಿ ಸಮಸ್ಯೆಗಳಾಗದಂತೆ ಪ್ಲಾನ್ ತಯಾರಿಸಬೇಕು. ಒಮ್ಮೆ ಒಪ್ಪಿಗೆ ಪಡೆದ ಮೇಲೆ ಮತ್ತೆ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬೇಕು" ಎಂದು ಸೂಚಿಸಿದರು.
ಮೂಡಾ ಸೈಟ್ ಕೊಡಿಸುವುದಾಗಿ ವಂಚನೆ; ಆರೋಪಿ ಬಂಧಿಸಿದ ಪೊಲೀಸ್
ದೇವಸ್ಥಾನ ಒಡೆಯದಿರಿ; "ದೇವಾಲಯಗಳನ್ನು ಒಡೆಯುವುದನ್ನು ನಾವು ಒಪ್ಪಲ್ಲ. ಬೆಂಗಳೂರಿನಲ್ಲಿಯೂ ಇಂತಹದ್ದನ್ನು ನಾವು ಮಾಡಲ್ಲ. ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡೋಣ. ಬಡಾವಣೆಗಳವರೇ ದುಡ್ಡು ಹಾಕಿ ನಿರ್ವಹಣೆ ಮಾಡಿಕೊಂಡು ಹೋಗುತ್ತಿರುವ ದೇವಾಲಯಗಳನ್ನು ಒಡೆಯುವ ಕೆಲಸ ಆಗಬಾರದು. ಈ ಬಗ್ಗೆ ನನಗೆ ದೂರುಗಳು ಬಂದಿವೆ. ಮುಂದೆ ಹೀಗಾಗಬಾರದು" ಎಂದರು.
ಅಹವಾಲು ಸ್ವೀಕಾರ; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ ನಿರ್ಮಾಣಗೊಂಡಿರುವ ವಿಜಯನಗರ ಬಡಾವಣೆಯ ನಿವೇಶನಗಳಿಗೆ ನಿರ್ಮಾಣ ಮಾಡಿರುವ ವಾಟರ್ ಟ್ಯಾಂಕ್ಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿ ಪರಿಶೀಲನೆ ಹಾಗೂ ನೀರು ಸರಬರಾಜು ಕುರಿತು ಎಸ್. ಟಿ. ಸೋಮಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿದ ಸಚಿವರು, "ಬಡಾವಣೆಯಲ್ಲಿರುವ ಎಲ್ಲ ಮನೆಗಳಿಗೂ ಕುಡಿಯುವ ನೀರು ಸಿಗಬೇಕು. ಆದರೆ, ವಾಟರ್ ಟ್ಯಾಂಕ್ ನಿಂದ ಇನ್ನೂ ಏಕೆ ನೀರು ಸರಬರಾಜು ಆಗಿಲ್ಲ?" ಎಂದು ಪ್ರಶ್ನೆ ಮಾಡಿದರು. ಪಂಪ್ ಸೆಟ್ ಅಳವಡಿಕೆಯಲ್ಲಿ ಸಮಸ್ಯೆಯಾಗಿದ್ದು, ಅದನ್ನು ಶೀಘ್ರದಲ್ಲಿ ಮಾಡಿ ಎಲ್ಲ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿ. ಟಿ. ದೇವೇಗೌಡರು ಜೊತೆಗಿದ್ದರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ. ಟಿ. ದೇವೇಗೌಡ ಅವರು ಸಚಿವರ ಜೊತೆಗಿದ್ದರು. "ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರಿಗೆ ಸಮಸ್ಯೆಗಳ ಬಗ್ಗೆ ಅರಿವಿದೆ. ಅವರ ಕ್ಷೇತ್ರವೂ ಬೆಂಗಳೂರು ಸುತ್ತಮುತ್ತ ಇರುವುದರಿಂದ ತಕ್ಷಣ ತಿಳಿದುಕೊಂಡು ಮುನ್ನಡೆಯುತ್ತಿದ್ದಾರೆ. ಅವರ ಉಸ್ತುವಾರಿ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿಸಿಕೊಳ್ಳೋಣ. ಅವರು ಪಕ್ಷಾತೀತವಾಗಿ ಅಭಿವೃದ್ಧಿಗೆ ಕೈಜೋಡಿಸುತ್ತಾರೆ. ಯಾವ ಪಕ್ಷದ ಶಾಸಕರು ಕರೆದರೂ ಸರಿಯಾದ ಸಮಯಕ್ಕೆ ಬಂದು ಸಹಕಾರ ನೀಡುತ್ತಾರೆ" ಎಂದು ಸಂತಸ ವ್ಯಕ್ತಪಡಿಸಿದರು.
ನಿವಾಸಿಗಳೊಂದಿಗೆ ಸಂವಾದ; ವಿಜಯನಗರ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಅಪ್ಪಾಜಿಗೌಡ ಮಾತನಾಡಿ, "ಬಡಾವಣೆಗೆ ಸಮರ್ಪಕವಾಗಿ ಕುಡಿಯುವ ನೀರು, ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ ಹಾಗೂ ಸುರಕ್ಷತೆಗೆ ಒತ್ತು ನೀಡಬೇಕು. ಈ ಬಗ್ಗೆ ಇದೇ ಮೊದಲ ಭಾರಿಗೆ ಉಸ್ತುವಾರಿ ಸಚಿವರಾದವರು ನಮ್ಮ ಸಮಸ್ಯೆಗಳನ್ನು ಆಲಿಸಲು ಬಂದಿದ್ದು, ಇದಕ್ಕಾಗಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.
ಆರ್. ಟಿ. ನಗರಕ್ಕೆ ಭೇಟಿ; ಆರ್ .ಟಿ.ನಗರ ಬಡಾವಣೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಡಾ ಅಧ್ಯಕ್ಷ ಹೆಚ್. ವಿ. ರಾಜೀವ್, "ಈ ಬಡಾವಣೆಯಲ್ಲಿ ವಿದ್ಯುತ್ ಕಂಬಗಳಿಗೆ ಲೈನ್ ಎಳೆದು ಸಂಪರ್ಕ ಕೊಡದೇ ಇದ್ದ ಬಗ್ಗೆ, ದೂರದಿಂದ ವಿದ್ಯುತ್ ಸಂಪರ್ಕ ಹೊಂದಿದ್ದರಿಂದ 2-3 ಸಾವಿರ ರೂಪಾಯಿ ವೆಚ್ಚವಾಗುತ್ತಿರುವ ಗಂಭೀರ ಸಮಸ್ಯೆಯನ್ನು ಸಚಿವರಿಗೆ ಹೇಳುತ್ತಿದ್ದಾಗಲೇ, ಸರ್ಕಾರದ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್ ಅವರಿಗೆ ತಕ್ಷಣ ಕರೆ ಮಾಡಿ, ಶೀಘ್ರ ಸಮಸ್ಯೆ ಬಗೆಹರಿಸಿ ಆದೇಶವಾಗವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ" ಎಂದರು.