ಮೈಸೂರಿನಲ್ಲಿ ಪ್ರೇಮಕುಮಾರಿ ಆಕ್ರೋಶ ಪರ್ವದ ಮತ್ತೊಂದು ಎಪಿಸೋಡ್
Recommended Video
ಮೈಸೂರು, ಜುಲೈ 17 : ಪ್ರೇಮಕುಮಾರಿ ಹಾಗೂ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಮಧ್ಯ ರಾಜೀ-ಸಂಧಾನ ಆಗುವವರೆಗೆ ಇಂಥ ಎಷ್ಟು ಸುದ್ದಿ ಬರೆಯಬೇಕಾಗಬಹುದೋ ಗೊತ್ತಿಲ್ಲ. ಇಲ್ಲಿನ ಚಾಮುಂಡಿಪುರಂನಲ್ಲಿ ಇರುವ ರಾಮದಾಸ್ ಕಚೇರಿಗೆ ಪ್ರೇಮಕುಮಾರಿ ಹಾಗೂ ಅವರ ತಾಯಿ ತೆರಳಿದ್ದರು.
ಅದೇನಾದರೂ ಆಗಲಿ, ಈಗಿಂದ ಈಗಲೇ ರಾಮದಾಸ್ ರನ್ನು ನೋಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇವರು ಹೀಗೆ ಹಠ ಮಾಡುವ ಹೊತ್ತಿಗೆ, ಕಚೇರಿಯಲ್ಲಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಚೇರಿಗೆ ಬಂದ ಕೆ.ಆರ್. ಠಾಣೆಯ ಪೊಲೀಸರು, ಹೀಗೆಲ್ಲ ಶಾಸಕರ ಕಚೇರಿಯಲ್ಲಿ ಗಲಾಟೆ ಮಾಡಬಾರದು. ನಿಮ್ಮ ಸಮಸ್ಯೆ ಏನಿದ್ದರೂ ಕಾನೂನು ಪ್ರಕಾರ ಬಗೆಹರಿಸಿಕೊಳ್ಳಿ ಎಂದು ಹೊರಗೆ ಕಳುಹಿಸಿದ್ದಾರೆ.
ರಾಮದಾಸ್ ಬೆನ್ನು ಬಿಡದ ಪ್ರೇಮಕುಮಾರಿ, ಕಚೇರಿ ಮುಂದೆ ಪ್ರತಿಭಟನೆ
ಆದರೆ, ಪ್ರೇಮಕುಮಾರಿ ಅವರು ಹೇಳುತ್ತಿರುವುದು ಬೇರೆಯದೇ ಹೊಸ ವಿಚಾರ. ನನ್ನ ತಾಯಿ ಲೀಲಾವತಿ ಮೇಲೆ ರಾಮದಾಸ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂನ ರಾಮದಾಸ್ ಮನೆಗೆ ರಾಜಿ ಮಾಡಿಸುವುದಾಗಿ ಕರೆಸಿಕೊಂಡು, ನಮ್ಮಮ್ಮನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ಶಾಸಕ ರಾಮದಾಸ್ ಬೆಂಬಲಿಗರು ಅಂತ ಹೇಳುತ್ತಿರುವ ಸುವರ್ಣಮ್ಮ ಅವರು ಪ್ರೇಮಕುಮಾರಿ ಪ್ರಕರಣದಲ್ಲಿ ರಾಜೀ-ಸಂಧಾನ ಮಾಡಿಸುವ ಮಧ್ಯವರ್ತಿ ಆಗಿದ್ದರಂತೆ. ಅವರದೇ ಎನ್ನಲಾದ ಆಡಿಯೋ ಕ್ಲಿಪ್ಪಿಂಗ್ ವೊಂದನ್ನು ಬಿಡುಗಡೆ ಸಹ ಮಾಡಲಾಗಿದೆ. ಅಲ್ಲಿಗೆ ರಾಮದಾಸ್- ಪ್ರೇಮಕುಮಾರಿ ಮಧ್ಯದ ಆಕ್ರೋಶ ಪರ್ವಕ್ಕೆ ಮತ್ತೊಂದು ಕಂತು ಸೇರ್ಪಡೆಯಾದಂತೆ ಆಗಿದೆ.