ಮೈಸೂರಿನಲ್ಲಿ ಮತ್ತೊಂದು ಕೊರೊನಾ ಪ್ರಕರಣ; ಕಟ್ಟೆಚ್ಚರಕ್ಕೆ ಸೂಚನೆ
ಮೈಸೂರು, ಮಾರ್ಚ್ 23: ಮೈಸೂರಿನಲ್ಲಿ ಮೊನ್ನೆಯಷ್ಟೇ ಕೊರೊನಾ ಪ್ರಕರಣವೊಂದು ದೃಢಪಟ್ಟಿದ್ದು, ಇದೀಗ ಮತ್ತೊಬ್ಬರಲ್ಲಿ ಕೊರೊನಾ ವೈರಸ್ ಇರುವುದಾಗಿ ತಿಳಿದುಬಂದಿದೆ.
Recommended Video
ಕೇರಳ ಮೂಲದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದ್ದು, ಸದ್ಯಕ್ಕೆ ಅವರಿಗೆ ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುಬೈನಿಂದ ಬೆಂಗಳೂರಿಗೆ ಬಂದು ನಂತರ ಅಲ್ಲಿಂದ ಇವರು ಟ್ಯಾಕ್ಸಿಯಲ್ಲಿ ಮೈಸೂರಿಗೆ ಬಂದಿಳಿದಿದ್ದಾರೆ. ಇವರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಎರಡನೇ ಕೊರೊನಾ ಸೋಂಕು ದೃಢವಾಗಿರುವ ಬಗ್ಗೆ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಮಾಹಿತಿ ನೀಡಿದ್ದು, ಕಟ್ಟೆಚ್ಚರ ವಹಿಸುವಂತೆ ಆದೇಶ ಹೊರಡಿಸಿದ್ದಾರೆ.
ಕೊನೆಯ ವಿಮಾನದಲ್ಲಿ ದುಬೈನಿಂದ ಬಂದಿದ್ದ ವ್ಯಕ್ತಿ
ಕೊರೊನಾ ಸೋಂಕು ಪತ್ತೆಯಾಗಿರುವ ವ್ಯಕ್ತಿಯು ಮಾರ್ಚ್ 21ರಂದು ದುಬೈನಿಂದ ಬಂದಿದ್ದರು. ನೆನ್ನೆ 22ಕ್ಕೆ ಬೆಂಗಳೂರಿಗೆ ಬಂದು ಇಳಿದಿದ್ದು, ಟ್ಯಾಕ್ಸಿ ಮೂಲಕ ಮೈಸೂರಿಗೆ ಬಂದಿದ್ದಾನೆ. ಈತ ಕೇರಳದವನಾಗಿದ್ದು, ಬೆಂಗಳೂರಿನಿಂದ ಮೈಸೂರು ಮೂಲಕ ಕೇರಳಕ್ಕೆ ತೆರಳುವ ಸಲುವಾಗಿ ಮೈಸೂರಿಗೆ ಬಂದಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸದ್ಯ ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತ 40 ರಿಂದ 45 ವಯಸ್ಸಿನವನಾಗಿದ್ದು, ಮಾ.21ರಂದು ಅರಬ್ ಎಮಿರೇಟ್ಸ್ ನಿಂದ ಕೊನೆ ವಿಮಾನದಲ್ಲಿ ಬಂದಿದ್ದು, ಮೈಸೂರಿನ ಮೀನಾ ಬಜಾರ್ ನಲ್ಲಿನ ಸಂಬಂಧಿಕರ ಮನೆಗೆ ತೆರಳಿರುವುದು ಗೊತ್ತಾಗಿದೆ.
ಮೈಸೂರಿನಲ್ಲಿ ಕೊರೊನಾ; ಸೋಂಕಿತ ವ್ಯಕ್ತಿ ಎಲ್ಲೆಲ್ಲಿ ಓಡಾಡಿದ್ದ?
ದಾರಿ ಮಧ್ಯೆ ಟೀ ಬ್ರೇಕ್
ಟ್ಯಾಕ್ಸಿಯಲ್ಲಿ ಮೈಸೂರಿಗೆ ಬಂದಿದ್ದ ಈ ವ್ಯಕ್ತಿಯು ದಾರಿ ಮಧ್ಯೆ ಟೀ ಕುಡಿಯಲು ಇಳಿದಿದ್ದಾರೆ. ಆದರೆ ಎಲ್ಲಿ ಇಳಿದಿದ್ದರು ಎನ್ನುವ ಕುರಿತು ಮಾಹಿತಿ ಇಲ್ಲ. ನಂತರ ಮೈಸೂರಿಗೆ ಬಂದು ಕೆ.ಆರ್. ಆಸ್ಪತ್ರೆಗೆ ಬಂದಿದ್ದಾರೆ. ಈ ನಡುವೆ ಮೀನಾ ಬಜಾರ್ನಲ್ಲಿ ಸ್ವಲ್ಪ ಹೊತ್ತು ಇದ್ದರು ಅನ್ನುವ ಮಾಹಿತಿಯೂ ಲಭ್ಯವಾಗಿದೆ ಎಂದು ತಿಳಿಸಿದರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್.
ಮೈಸೂರಿನಲ್ಲಿ ಮೊದಲ ಪ್ರಕರಣ
ದುಬೈಗೆ ತೆರಳಿದ್ದ 35 ವರ್ಷದ ಸೋಂಕಿತ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಇದು ಮೈಸೂರಿನಲ್ಲಿ ಮೊದಲ ಪ್ರಕರಣವಾಗಿತ್ತು. ಆ ವ್ಯಕ್ತಿ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ ನೇರವಾಗಿ ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಮನೆಗೆ ಹೋಗದೇ ಹುಷಾರಿಲ್ಲ ಎಂದು ಕೆ.ಆರ್. ಆಸ್ಪತ್ರೆಗೆ ಸೇರಿದ್ದಾರೆ. ಈ ವೇಳೆ ವ್ಯಕ್ತಿಯನ್ನು ತಪಾಸಣೆಗೊಳಪಡಿಸಿ ರಕ್ತದ ಮಾದರಿ ಪರೀಕ್ಷೆಗೆ ಲ್ಯಾಬ್ ಗೆ ಕಳುಹಿಸಲಾಗಿತ್ತು. ವರದಿಯಲ್ಲಿ ವ್ಯಕ್ತಿಗೆ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಅವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರು ಸಂಪೂರ್ಣ ಲಾಕ್ ಔಟ್; ಏನಿದೆ, ಏನೇನಿಲ್ಲ?
ಅನವಶ್ಯಕ ತಿರುಗಾಡದಂತೆ ವಾರ್ನಿಂಗ್
ಜನರಿಗೆ ಕೊರೊನಾ ಕುರಿತು ಎಚ್ಚರಿಕೆಯಿಂದಿರಲು ತಿಳಿಸಲಾಗಿದೆ. ಮನೆಯಲ್ಲಿರುವಂತೆ ಹೇಳಿದರೂ ಮನವಿಗೆ ಸ್ಪಂದಿಸದಿದ್ದರೆ, ಅನವಶ್ಯಕವಾಗಿ ತಿರುಗಾಡಿದರೆ ಐಪಿಎಸ್ ಸೆಕ್ಷನ್ (270)ಅಡಿಯಲ್ಲಿ ಕೇಸ್ ದಾಖಲು ಮಾಡಲು ಆದೇಶ ನೀಡಲಾಗಿದೆ. 2 ವರ್ಷ ಜೈಲು ಶಿಕ್ಷೆ ಹಾಗೂ ಜಾಮೀನುರಹಿತ ಶಿಕ್ಷೆ ಇದಾಗಿದೆ. ಕೆಲವರು ಎಷ್ಟೇ ಹೇಳಿದರು ಕೇಳ್ತಿಲ್ಲ. ಹೀಗಾಗಿ ಇಂಥ ಕ್ರಮ ಅನಿವಾರ್ಯವಾಗಿದೆ