ಒಂದೂವರೆ ವರ್ಷದ ಮಗು ಸಾವು: ಪಾಲಕರಿಂದ ವೈದ್ಯರ ವಿರುದ್ಧ ಆರೋಪ
ಮೈಸೂರು, ಜುಲೈ.23: ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಭಾನುವಾರ ಎಚ್ ಡಿ ಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಸುಭಾಗ್ ಹೆಸರಿನ ಗಂಡು ಮಗು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ.
ಈ ಸಂಬಂಧ ಮಗುವಿನ ಪಾಲಕರು ಹಾಗೂ ವೈದ್ಯರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆದಿದೆ. ಎಚ್.ಡಿ.ಕೋಟೆ ಪಟ್ಟಣದ ಸೆಂಟ್ ಮೇರಿಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು: ಬಾಲಕನ ಪ್ರಾಣಕ್ಕೆ ಉರುಳಾಯ್ತು ತೊಟ್ಟಿಲ ಹಗ್ಗ
ಜ್ವರ ಕೆಮ್ಮಿನಿಂದ ಬಳಲುತ್ತಿದ್ದ ಮಗುವನ್ನು ನಿನ್ನೆ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಧ್ಯಾಹ್ನ ಏಕಾಏಕಿ ಮಗು ಸಾವನ್ನಪ್ಪಿದೆ. ಪೋಷಕರು ಸಂಜೆವರೆಗೂ ಆಸ್ಪತ್ರೆಯಲ್ಲಿಯೇ ಮಗುವನ್ನು ಇಟ್ಟುಕೊಂಡು ಆಕ್ರೋಶವ್ಯಕ್ತಪಡಿಸಿದ್ದಾರೆ.
ಚಿಕಿತ್ಸೆಯ ವೇಳೆ ಎಡವಟ್ಟು ಮಾಡಿ ಸಾಯಿಸಿದ್ದಾರೆಂದು ಆರೋಪಿಸಲಾಗುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆದರೆ ಸುಭಾಗ್ ಪಾಲಕರ ಮಾತನ್ನು ಅಲ್ಲಗಳೆದಿರುವ ಆಸ್ಪತ್ರೆ ವೈದ್ಯರು ಮೊದಲೇ ಮಾಹಿತಿ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. "ಮಗುವಿಗೆ ಉಸಿರಾಟದ ತೊಂದರೆ ಇದ್ದು, ವೆಂಟಿಲೇಟರ್ ನ ಅವಶ್ಯಕತೆಯಿತ್ತು. ಆದರೆ ವೆಂಟಿಲೇಟರ್ ಮೈಸೂರು ಆಸ್ಪತ್ರೆಯಲ್ಲಿದೆ. ಮಗು ದಾರಿ ಮಧ್ಯೆ ಸಾಯುವ ಸಾಧ್ಯತೆಗಳು ಇವೆ ಎಂದು ತಿಳಿಸಿದ್ದೇವೆ " ಎಂದು ವೈದ್ಯರು ಹೇಳುತ್ತಿದ್ದಾರೆ.
ಆದರೆ ಈ ಮಾತನ್ನು ಆಸ್ಪತ್ರೆಗೆ ಆಗಮಿಸುವ ಮುನ್ನವೇ ಹೇಳಬೇಕಿತ್ತು ಎಂದು ಸುಭಾಗ್ ಪಾಲಕರು ವೈದ್ಯರಿಗೆ ತರಾಟೆ ತೆಗೆದುಕೊಂಡಿದ್ದು, ಆಸ್ಪತ್ರೆ ವೈದ್ಯರ ವಿರುದ್ಧ ದೂರು ದಾಖಲಿಸಲು ಸುಭಾಗ್ ಪಾಲಕರು ಚಿಂತನೆ ನಡೆಸಿದ್ದಾರೆ. ಎಚ್.ಡಿ.ಕೋಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.