ಕಾಂಗ್ರೆಸ್ ಸಮಾವೇಶ ವೇದಿಕೆಯಲ್ಲಿ ಮತ್ತೆ ಎಡವಿ ಬಿದ್ದ ಸಿದ್ದರಾಮಯ್ಯ
Recommended Video
ಮೈಸೂರು, ಏಪ್ರಿಲ್ 22: ಯಾಕೋ ಸಿಎಂ ಸಿದ್ದರಾಮಯ್ಯ ನಸೀಬು ಕೈಕೊಟ್ಟಂತಿದೆ. ಈ ಹಿಂದೆ ಎರಡು ಬಾರಿ ಎಡವಿ ಬಿದ್ದಿದ್ದ ಮುಖ್ಯಮಂತ್ರಿ ಇಂದು ಹೆಚ್.ಡಿ. ಕೋಟೆಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿಯೂ ಮತ್ತೆ ಎಡವಿದ್ದಾರೆ.
ಹೆಚ್.ಡಿ. ಕೋಟೆಯ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ ಆಗಮಿಸುವಾಗ ಸಿಎಂ ಸಿದ್ದರಾಮಯ್ಯ ಎಡವಿದರು. ಇನ್ನೇನು ಸಿಎಂ ಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸುತ್ತುವರಿದು ಹಿಡಿದುಕೊಂಡರು. ಇದಾದ ಬಳಿಕ ಅಕ್ಕಪಕ್ಕದಲ್ಲಿದ್ದ ಕಾರ್ಯಕರ್ತರು ಸಿಎಂಗೆ ನೀರು ಕುಡಿಸಿ, ಕುರ್ಚಿಯ ಮೇಲೆ ಕುಳ್ಳಿರಿಸಿದರು. ಸ್ವಲ್ಪ ಹೊತ್ತಿನ ನಂತರ ಸುಧಾರಿಸಿಕೊಂಡು ಸಿಎಂ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಭಾಗಿಯಾದರು.
ಅನಿಲ್ ಮಾದು ಪರ ಮತಯಾಚನೆ ಮಾಡಿದ ಸಿಎಂ, "ಹೆಚ್.ಡಿ. ಕೋಟೆಯಲ್ಲಿ ಚಿಕ್ಕಮಾದು ಪುತ್ರ ಅನಿಲ್ ಚಿಕ್ಕಮಾದು ಮಾತ್ರ ಗೆಲ್ಲಬೇಕಿದೆ. ಬೇರೆ ಪಕ್ಷದ ಯಾವ ಅಭ್ಯರ್ಥಿಗಳಿಗೂ ಮತ ಕೇಳುವ ಹಕ್ಕು ಇಲ್ಲ," ಎಂದು ಜೆಡಿಎಸ್ ನ ಚಿಕ್ಕಣ್ಣ ಬಿಜೆಪಿಯ ಸಿದ್ದರಾಜು ವಿರುದ್ಧ ವ್ಯಂಗ್ಯವಾಡಿದರು.
"ಬಿಜೆಪಿ ಪಕ್ಷದ ನಾಯಕರು ಢೋಂಗಿಗಳು. ಈ ಬಾರಿ ಜೆಡಿಎಸ್ ಗೆಲ್ಲೋದು 20 ರಿಂದ 25 ಸೀಟುಗಳು ಅಷ್ಟೇ. ಈ ಬಾರಿ ಅವರು ಅಧಿಕಾರಕ್ಕೆ ಬರೋದೇ ಇಲ್ಲ. ಅಧಿಕಾರಕ್ಕೆ ಬರುತ್ತೇವೆ ಅಂತ ಹಗಲುಗನಸು ಕಾಣುತ್ತಿದ್ದಾರೆ. ಇನ್ನು ಮೈಸೂರು ಜಿಲ್ಲೆಯಲ್ಲಿ ನನ್ನನ್ನು ಸೇರಿದಂತೆ ನಮ್ಮ ಅಭ್ಯರ್ಥಿಗಳನ್ನು ಸೋಲಿಸೋದಕ್ಕೆ ಈ (ಬಿಜೆಪಿ, ಜೆಡಿಎಸ್) ಇಬ್ಬರು ಮೈತ್ರಿ ಮಾಡಿಕೊಂಡಿದ್ದಾರೆ," ಎಂದು ಆರೋಪಿಸಿದರು. ಚಾಮುಂಡೇಶ್ವರಿಯಲ್ಲಿ ಮತ್ತು ವರುಣಾ ಕ್ಷೇತ್ರಗಳಲ್ಲಿ ವೀಕ್ ಕ್ಯಾಂಡಿಡೇಟ್ ಗಳನ್ನು ಹಾಕಿ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
"ಯಡಿಯೂರಪ್ಪ ಒಬ್ಬ ಢೋಂಗಿ. ಇದೀಗ ಯಡಿಯೂರಪ್ಪ ಜೊತೆ ಮುನಿಸಿಕೊಂಡಿದ್ದ ರೆಡ್ಡಿ ಎಲ್ಲರೂ ಒಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ರೆಡ್ಡಿಯಿಂದಲೇ ಪಾಪ ಯಡಿಯೂರಪ್ಪ ಜೈಲಿಗೆ ಹೋಗಿದ್ದು. ಇವರೇನೇ ಮಾಡಿದರೂ ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯಾನೋ ಅಷ್ಟೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಸತ್ಯ," ಎಂದು ಭವಿಷ್ಯ ನುಡಿದರು.
ಅನಂತ್ ಕುಮಾರ್ ಹೆಗ್ಡೆ ಒಬ್ಬ ಮಹಾ ಕೋಮುವಾದಿ. ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನವನ್ನ ಬದಲು ಮಾಡೋದಕ್ಕೆ ಅಂತಿದ್ದಾನೆ. ಅಂಬೇಡ್ಕರ್ ಮೇಲೆ ಗೌರವ ಇಲ್ಲದ ಈ ವ್ಯಕ್ತಿ ಗ್ರಾಮ ಪಂಚಾಯಿತಿ ಸದಸ್ಯನಾಗೋದಕ್ಕೂ ನಾಲಾಯಕ್ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.